ಹಾಸನ : 2026-27 ಸಾಲಿನ ಶೈಕ್ಷಣಿಕ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಕಡ್ಡಾಯವಾಗಿ ಹಾಜರಾಗಬೇಕು. ಶಾಲೆಗೆ ದಾಖಲಾದ ಮಕ್ಕಳು ಶಾಲೆಯಲ್ಲಿಯೇ ಉಳಿಯಬೇಕು ಯಾವುದೇ ಮಗುವೂ ಶಾಲೆಯನ್ನು ಮಧ್ಯಂತರದಲ್ಲಿ ಬಿಡಬಾರದು. ಪ್ರತೀ ಮಗುವೂ ಈ ರಾಷ್ಟ್ರದ ಸಂಪತ್ತು ಎಂದು ಜಿ.ಜಿ. ಜೆ.ಸಿ. ಪ್ರಧಾನ ಪ್ರೌಢಶಾಲಾ ಉಪಪ್ರಾಂಶುಪಾಲ ಮಂಜುನಾಥ್ ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಜಿ.ಜಿ. ಜೆ.ಸಿ. ಪ್ರಧಾನ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಪೋಷಕರ ಮೊದಲನೇ ಮಹಾಸಭೆಯಲ್ಲಿ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಆರಂಭದ ದಿನವೇ ಹಾಜರಾತಿ ಉತ್ತಮವಾಗಿದೆ. ಶಾಲೆಯನ್ನು ಮಾವು ಹೂವುಗಳ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ನೀಡುತ್ತಿದ್ದು ಈ ದಿನ ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಕ್ಷೀರಭಾಗ್ಯ ಯೋಜನೆಯಡಿ ಉಚಿತವಾಗಿ ಎಲ್ಲಾ ವಿದ್ಯಾರ್ಥಿನಿಯರಿಗೆ ಹಾಲನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಉತ್ತಮ ಪರಿಸರ, ಕಲಿಕಾ ವಾತಾವರಣ, ಗ್ರಂಥಾಲಯ ಸೌಲಭ್ಯ, ಸ್ಪೋಕನ್ ಇಂಗ್ಲಿಷ್ ವ್ಯವಸ್ಥೆ , ಮೂಲಭೂತ ಸೌಲಭ್ಯಗಳು ಉತ್ತಮವಾಗಿದ್ದು ಮಕ್ಕಳ ಫಲಿತಾಂಶವೂ ಗುಣಾತ್ಮಕವಾಗಿದೆ. ಅಕ್ಷರದಾಸೋಹ ಯೋಜನೆಯಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಇಂದು ಸಿಹಿಯೂಟವನ್ನು ನೀಡಲಾಗುತ್ತದೆ ಎಂದರು.
ಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ಮಾತನಾಡಿ 2026 -27 ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯ ಘೋಷಾವಾಕ್ಯ ಉತ್ತಮ ಕಲಿಕೆ ಉಜ್ವಲ ಭವಿಷ್ಯ ಆಗಿದ್ದು ಇದನ್ನು ಸಾಕಾರಗೊಳಿಸಲು ಪೋಷಕರು ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ ಕೆಲಸ ಮಾಡಬೇಕಿದೆ. ನಗರದ ಸರ್ಕಾರಿ ಶಾಲೆಗಳಲ್ಲಿ ಪ್ರಧಾನ ಶಾಲೆಯು 2025-26 ನೇ ಸಾಲಿನಲ್ಲಿ ಶೇ 100 ರಷ್ಟು ಫಲಿತಾಂಶ ದಾಖಲಿಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಇದನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಕಾಯ್ದುಕೊಳ್ಳಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಹ ಶಿಕ್ಷಕ ರುದ್ರೇಶ್ ರವರು ಸ್ವಾಗತಿಸಿದರು. ಎಸ್ ಡಿ.ಎಂ.ಸಿ ಅಧ್ಯಕ್ಷರಾದ ಮಂಜೇಗೌಡ ರವರು ಎಲ್ಲರಿಗೂ ಶುಭಕೋರಿ ಹಾಲು ವಿತರಿಸಿದರು. ಶಿಕ್ಷಕರಾದ ಹೆಚ್ . ಪಿ ಮಂಜಳ, ಎ.ವಿ. ಗೀತಾರಾಣಿ, ಎಂ.ಆರ್. ರಂಗಾಮಣಿ, ಎಸ್. ಕೆ. ಪೂರ್ಣಿಮಾ, ಪಿ. ಮಧು, ತೈಬಾಕೌಸರ್, ಚಿದಾನಂದ, ಸತ್ಯನಾರಾಯಣ ಮುರಳಿ, ಪೋಷಕರು, ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


