ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಿರಂತರ ಶ್ರಮಿಸಿದ ಪೊಟ್ಟಿಪ್ಪಲ ಆಶುಕವಿ, ಕೀರ್ತಿಶೇಷ ನಾರಾಯಣ ಭಟ್ ಅವರ ಸ್ಮರಣಾರ್ಥ ನೆಲ್ಲಿಕಟ್ಟೆ ಚೂರಿಪ್ಪಳ್ಳದ 'ಶ್ರೀ ಗಿರಿ ಸದನ'ದಲ್ಲಿ ಸಾರ್ಥಕ ನುಡಿನಮನ ಹಾಗೂ ನೂತನ ಕಲಾ ವೇದಿಕೆಯ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ಜರುಗಿತು.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ), ಕಾಸರಗೋಡು ಇವರ ಆಶ್ರಯದಲ್ಲಿ ಜೂನ್ 8ರಂದು ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಸಂಸ್ಥೆಯ 222 ನೆಯ ವೈವಿಧ್ಯಮಯ ‘ಸಾಹಿತ್ಯ ಗಾನ ನೃತ್ಯ ವೈಭವ’ ಪ್ರೇಕ್ಷಕರ ಮನಸೆಳೆಯಿತು.
ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಿದ ಮಹನೀಯರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕೋಶಾಧಿಕಾರಿ ಡಾ. ವೆಂಕಟಗಿರೀಶ್, ಗಡಿನಾಡಿನಲ್ಲಿ ಕನ್ನಡ ಅಸ್ಮಿತೆಯನ್ನು ಉಳಿಸುವಲ್ಲಿ ಸಾಂಸ್ಕೃತಿಕ ಸಂಸ್ಥೆಗಳ ಪಾತ್ರ ಹಿರಿದು ಎಂದರು. ಇದೇ ವೇಳೆ ಹಿರಿಯರಾದ ಶ್ರೀ ಅಚ್ಚುತ ಭಟ್ ಹಾಗೂ ದಿವಾಕರ ಕಾಸರಗೋಡು ಅವರು ಆಶುಕವಿ ನಾರಾಯಣ ಭಟ್ಟರ ಗಡಿನಾಡ ಕನ್ನಡ ಹೋರಾಟ ಮತ್ತು ಸಾಹಿತ್ಯಿಕ ಸಾಧನೆಗಳನ್ನು ಕೃತಜ್ಞತೆಯಿಂದ ಸ್ಮರಿಸಿ, ನುಡಿನಮನ ಸಲ್ಲಿಸಿದರು.
ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಅವರು ಮಾತನಾಡಿ, "ಆಶುಕವಿ ನಾರಾಯಣ ಭಟ್ಟರ ಆಶಯ ಹಾಗೂ ಕನಸುಗಳನ್ನು ಜೀವಂತವಾಗಿರಿಸಿಕೊಂಡು, ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸಲು ಸಂಸ್ಥೆಯು ಸದಾ ಕಟಿಬದ್ಧವಾಗಿ ಕಾರ್ಯನಿರ್ವಹಿಸಲಿದೆ" ಎಂದು ಆಶಯ ವ್ಯಕ್ತಪಡಿಸಿದರು. ಡಾ. ವಾಣಿಶ್ರೀ ಅವರ ಸಾಹಿತ್ಯ ಪ್ರಸ್ತುತಿಯೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಅವರೇ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಮನಸೂರೆಗೊಂಡ ಸಾಂಸ್ಕೃತಿಕ ವೈಭವ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿವಾಕರ ಕಾಸರಗೋಡು ಹಾಗೂ ಭವಿತ್ ಸಾರಥ್ಯದಲ್ಲಿ ಮೂಡಿಬಂದ 'ಗಾನ ವೈಭವ' ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು.
ಸಮಾವೇಶದ ಸಮಾರೋಪ ಸಮಾರಂಭವನ್ನು ಕೃಷ್ಣ ಅನಂತಪುರ, ಅಚ್ಚುತ ಭಟ್, ಚಂದ್ರಾವತಿ ಸೇರಿದಂತೆ ಉಪಸ್ಥಿತರಿದ್ದ ಗಣ್ಯರು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನೃತ್ಯ ವೈಭವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಕಲಾವಿದರಾದ ಲಕ್ಷ್ಮೀಶ್, ಹರ್ಷಿತ್, ಚಂದ್ರ, ಪ್ರಖ್ಯಾತ್ ಮತ್ತು ಪ್ರಣಮ್ಯ ಅವರಿಗೆ ಸಂಸ್ಥೆಯ ವತಿಯಿಂದ ಪುಸ್ತಕ ಹಾಗೂ ದೇವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


