ಮಂಗಳೂರು ಮೇ 08: “ರೋಟರಿ ಸಂಸ್ಥೆಯ ಸದಸ್ಯರು ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿ ಶ್ರಮಿಸಿ ಸಮಾಜಸೇವಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ನೂತನ ಸದಸ್ಯರನ್ನು ಸೇರ್ಪಡಿಸಿ ಸಂಸ್ಥೆಯನ್ನು ಬಲಪಡಿಸಿ ಯಶಸ್ಸು ಸಾಧಿಸಬೇಕು” ಎಂದು ಮೈಸೂರು ನಗರ ಮೂಲದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ರೋಟರಿ ಜಿಲ್ಲಾ 3181 ರ ಗವರ್ನರ್ರಾದ ರಾಮಕೃಷ್ಣ ಪಿ.ಕೆ ರವರು ಸಲಹೆ ನೀಡಿದ್ದಾರೆ.
ಅವರು ಗುರುವಾರ (ಮೇ 7) ನಗರದ ಮಂಗಳೂರು ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪನಾ ದಿನಾಚರಣೆಯಲ್ಲಿ ಸಂಸ್ಥೆಗೆ ಅಧಿಕೃತ ಬೇಟಿ ನೀಡಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಅಂತರಾಷ್ಟ್ರೀಯ ಪ್ರತಿಷ್ಠಾನಕ್ಕೆ ಉದಾರ ದಾನ ನೀಡಬೇಕು ಎಂದು ಕರೆ ನೀಡಿದರು. ಅಂತರಾಷ್ಟ್ರೀಯ ರೋಟರಿ ಆಂದೋಲನಕ್ಕೆ ಭಾರತೀಯ ರೋಟರಿ ಸಂಸ್ಥೆಗಳ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ನುಡಿದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ರಾದ ರೋ. ರವಿಶಂಕರ್ ರಾವ್ರವರು ಗೌರವತಿಥಿಯಾಗಿ ಪಾಲ್ಗೊಂಡು ಪದಾಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬೇಕು ಎಂದು ನುಡಿದು, ರೋ. ಡಾ. ರಂಜನ್ ಸಂಪಾದಕ್ವದ ಸಂಸ್ಥೆಯ ಗೃಹ ವಾರ್ತಾ ಪತ್ರಿಕೆ “ಸಿಟಿ ಬಿಟ್ಸ್ ಆಂಡ್ ಬೈಟ್ಸ್” ಯನ್ನು ಬಿಡುಗಡೆಗೊಳಿಸಿ ಸಂಸ್ಥೆಯ ಸಮಾಜಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪನಾ ಸದಸ್ಯರಾದ ರೋ. ಡಾ. ರಂಜನ್, ರೋ. ಸರಿತಾ ಡಿ’ಸೋಜಾ, ರೋ. ಪ್ರಶಾಂತ್ ರೈ, ರೋ. ಬಸವ ಕುಮಾರ್, ರೋ. ಸುದೇಶ್ ರನ್ನು ಗೌರವಿಸಲಾಯಿತು.
ಸಂಸ್ಥೆಯ ಅದ್ಯಕ್ಷೆ ರೋ. ಸಜ್ನಾ ಭಾಸ್ಕರ್ ಅದ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ರೋ. ಪದ್ಮನಾಭ್ ನಾಯ್ಕ್ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಲಹೆಗಾರರಾದ ರೋ. ರಾಜೇಂದ್ರ ಕಲ್ಬಾವಿ, ವಲಯ ಪ್ರತಿನಿಧಿಯವರಾದ ರೋ. ಪ್ರಶಾಂತ್ ರೈಯವರು ಉಪಸ್ಥಿತರಿದ್ದರು. ರೋ. ಕೆನ್ಯೂಟ್ ಪಿಂಟೋ ಅತಿಥಿಗಳನ್ನು ಗುರುತಿಸಿ ಗೌರವಿಸಿದರು. ಕಾರ್ಯದರ್ಶಿ ರೋ. ಪದ್ಮನಾಭ್ ನಾಯ್ಕ್ ವಂದಿಸಿದರು.


