ಬೆಂಗಳೂರು: ಹವಾಮಾನ ವೈಪರೀತ್ಯಗಳಿಗೆ ಸಿಲುಕಿ ಕಂಗಾಲಾಗುವ ಬದಲು ಬದಲಾಗುವ ಹವಾಮಾನಕ್ಕೆ ಸಮರ್ಥ ರೀತಿಯಲ್ಲಿ ಹೊಂದಿಕೊಳ್ಳುವಂತೆ ನಾವು ನಮ್ಮ ಸಮಾಜದ ವಿವಿಧ ಸ್ಥರಗಳ ಜನರನ್ನು ಸಜ್ಜುಗೊಳಿಸಬೇಕು. ಇದು ನಮ್ಮ ಸಂಶೋಧನೆಗಳ ಅಧಾರ ಸೂತ್ರವಾಗಬೇಕು. ಆಗ ಮಾತ್ರ ಹವಾಮಾನದ ಏರುಪೇರು ಹಾಗೂ ಅಭಿವೃದ್ಧಿ ಯೋಜನೆಗಳ ನಡುವಣ ಕಂದಕವನ್ನು ನಿವಾರಿಸಿದಂತಾಗುತ್ತದೆ. ಬದಲಾಗುವ ಹವಾಮಾನಗಳು ಒಡ್ಡುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಹೊಂದಾಣಿಕೆ
ಮಾತ್ರ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ನ್ಯಾಶನಲ್ ಇನ್ಸ್ಟಿಟ್ಯೂಟ್
ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ನಿರ್ದೇಶಕ ಡಾ. ಶೈಲೇಶ್ ನಾಯಕ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ವಿನೂತನ ಅನ್ವೇಷಣೆಗಳ ಓಪನ್ ಹೌಸ್ ಎಕ್ಸ್ಪೋ ‘ಸಮನ್ವಯ 2026’ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ಅಧಕ್ಷೀಯ
ಮಾತುಗಳನ್ನಾಡಿ, ಶಿಕ್ಷಣಕ್ಕೆ ಅದರಲ್ಲೂ ತಾಂತ್ರಿಕ ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಕೈಗಾರಿಕೆಗಳ ಪಾಲ್ಗೊಳ್ಳುವಿಕೆ ಬಗ್ಗೆ ವಿವರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ಭಾರತ ಸರ್ಕಾರದ ತೆಂಗಿನ ನಾರು ಮಂಡಳಿ ಸದಸ್ಯ ಸಿ.ಎಸ್. ಪ್ರಕಾಶ್, ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿ ಡಾ. ಅನೂಪ್ ದಯಾನಂದ್ ಸಾಧು, ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ. ಕೆ.ಆರ್. ಶ್ರೀಧರ ಮೂರ್ತಿ, ಭಾರತ ಸರ್ಕಾರದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಸಲಹೆಗಾರರಾಗಿರುವ ಡಾ. ಅಂಜನಿ ಪ್ರಿಯದರ್ಶಿನಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.




