ಬೆಂಗಳೂರು:
ಉದ್ಯೋಗ ಹಾಗೂ ಜೀವನೋಪಾಯಕ್ಕಾಗಿ ಮಹಾನಗರಗಳಿಗೆ
ವಲಸೆ ಬಂದು ನೆಲೆಸಿದರೂ, ತಮ್ಮ
ಮೂಲ ನೆಲೆಯ ಸೊಗಡು ಮತ್ತು ಬಾಂಧವ್ಯವನ್ನು ಉಳಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಂತ ಶ್ಲಾಘನೀಯ ಎಂದು ಹಾಸನದ ‘ವಾಣಿ’ ಪತ್ರಿಕೆಯ
ಸಂಪಾದಕಿ ಲೀಲಾವತಿ ಹಾಗೂ ಪ್ರಸಿದ್ಧ ಸಾಹಿತಿ
ಅಜ್ಜಂಪುರ ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ
ಬಸವನಗುಡಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ
ಆವರಣದಲ್ಲಿ ಮೇ 23ರ ಶನಿವಾರದಂದು
ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿದ್ದ ‘ಎನ್.ಆರ್. ಪುರ
ವಿಪ್ರ ಬಳಗ’ದ 24ನೇ ವಾರ್ಷಿಕ
ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬಾಂಧವ್ಯದ
ಆಲೋಚನೆಗೆ 24 ವರ್ಷ:
ಬೆಂಗಳೂರಿನಲ್ಲಿ
ಚದುರಿಹೋಗಿರುವ ಎನ್.ಆರ್. ಪುರ
ಮೂಲದ ಬಂಧು-ಮಿತ್ರರನ್ನು ವರ್ಷಕ್ಕೊಮ್ಮೆಯಾದರೂ
ಒಂದೆಡೆ ಸೇರಿಸಿ, ಬಾಲ್ಯ ಮತ್ತು ತಾರುಣ್ಯದ ಮಧುರ ಸ್ಮೃತಿಗಳನ್ನು ಹಂಚಿಕೊಳ್ಳುವಂತೆ
ಮಾಡುವ ಅಪರೂಪದ ಆಲೋಚನೆ ಆರಗ ಮಹಾಸೇನರಾವ್ ಗಣೇಶ್
ಅವರಿಗೆ ಮೂಡಿದ್ದು 2002 ರಲ್ಲಿ. ಅದೇ ವರ್ಷದ ಡಿಸೆಂಬರ್ನಲ್ಲಿ ಖ್ಯಾತ ನಟ ಮಾಸ್ಟರ್ ಹಿರಣ್ಣಯ್ಯನವರ
ಉದ್ಘಾಟನೆಯೊಂದಿಗೆ ಚಾಲನೆ ಪಡೆದ ಈ ಬಳಗ,
ಇಂದು ಯಶಸ್ವಿಯಾಗಿ 24ನೇ ವರ್ಷದ ಸಂಭ್ರಮವನ್ನು
ಆಚರಿಸಿಕೊಳ್ಳುತ್ತಿದೆ. ಮುಂಬರುವ ವರ್ಷದಲ್ಲಿ ಸಂಸ್ಥೆಯು ಬೆಳ್ಳಿ ಹಬ್ಬದ (25ನೇ ವರ್ಷ) ಮೈಲಿಗಲ್ಲನ್ನು
ತಲುಪುತ್ತಿರುವುದು ವಿಶೇಷವಾಗಿದೆ.
ಕಳೆದ
ಎರಡು ದಶಕಗಳಲ್ಲಿ ಎಂ.ಎಸ್. ನರಸಿಂಹ
ಮೂರ್ತಿ, ವೈ.ವಿ. ಗುಂಡೂರಾವ್,
ಬಾಬು ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ, ಅಣಕು ರಾಮನಾಥ್, ವೈ.ಎಸ್.ವಿ. ದತ್ತ
ಸೇರಿದಂತೆ ನಾಡಿನ ಹಿರಿಯ ಗಣ್ಯರು ಈ ವೇದಿಕೆಗೆ ಆಗಮಿಸಿ
ಸಮ್ಮಿಲನದ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಹಿರಿಯರ
ಸಂತೆ– ಅಪರೂಪದ
ಒಡನಾಟ:
ವೇದಿಕೆಯ
ಭಾಷಣಗಳು, ಹಿರಿಯರ ಹಾಗೂ ಪ್ರತಿಭಾವಂತರ ಸನ್ಮಾನಗಳಂತಹ
ಔಪಚಾರಿಕ ಕಾರ್ಯಕ್ರಮಗಳ ನಡುವೆಯೂ, ನೆರೆದಿದ್ದ ಹಿರಿಯರ ನಡುವಿನ ಅನೌಪಚಾರಿಕ ಮಾತುಕತೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಆರೋಗ್ಯದ ವಿಚಾರಣೆ, ಮೊಮ್ಮಕ್ಕಳ ಯೋಗಕ್ಷೇಮ, ಅಮೆರಿಕದ ಬಾಣಂತನದ ಹರಟೆ, ಜಾತಕ ವಿನಿಮಯ, ಪೆನ್ಷನ್
ಹಾಗೂ ಡಿ.ಎ. ಹೆಚ್ಚಳದ
ಚರ್ಚೆಗಳು ಅಲ್ಲಿ ಮನೆಮಾಡಿದ್ದವು. ಇಂದಿನ ಯುವ ಪೀಳಿಗೆಗೆ ಈ
ಮಾತುಗಳು ಕೊಂಚ ಹೊಸತು ಎನಿಸಿದರೂ,
ಹಿರಿಯರ ಪಾಲಿಗೆ ಇದೊಂದು ಅಪರೂಪದ ಭಾವನಾತ್ಮಕ ಸಂತೆಯಾಗಿತ್ತು.
ಕಾರ್ಯಕ್ರಮದಲ್ಲಿ
ಊರಿನ ನೂರಾರು ಬಂಧು-ಮಿತ್ರರು ಪಾಲ್ಗೊಂಡು
ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
-
ಡಾ. ಹೆಚ್.ಎಸ್. ಸುರೇಶ್, ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


