ಯಕ್ಷಗಾನ ಕಲಾವಿದರಿಗೆ ಆರ್ಥಿಕ ರಕ್ಷಣೆ ಬೇಕು: ದಯಾನಂದ ಪೈ

Upayuktha
0

ಮಂಗಳೂರು ವಿವಿಯಲ್ಲಿ ಸಾಧಕರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರದಾನ

ಕಪ್ಪೆಕೆರೆ,‌ ಮಾಂಬಾಡಿ, ಜಬ್ಬಾರ್ ಸಮೊಗೆ ಯಕ್ಷಮಂಗಳ ಪ್ರಶಸ್ತಿ, 'ಬಲಿಪ ಮಾರ್ಗ' ಹಾಗೂ 'ಅಗರಿ ಮಾರ್ಗ' ಗ್ರಂಥಕ್ಕೆ ಕೃತಿ ಪ್ರಶಸ್ತಿ




ಕೊಣಾಜೆ: ಯಕ್ಷಗಾನ ಹಲವು ಕಲೆಗಳಿಂದ ಪೋಷಿತಗೊಂಡು ರೂಪುಗೊಂಡ ಶ್ರೇಷ್ಠವಾದ ಸಂಪದ್ಭರಿತ ಕಲೆಯಾದರೂ ಕಲಾವಿದರ ಬದುಕು ಮಾತ್ರ ಕಷ್ಟದಲ್ಲಿಯೇ ಇದೆ. ಬಹಳಷ್ಟು ಕಲಾವಿದರಿಗೆ ನಾನು ಮಾಸಾಶನ ಕೊಡುತ್ತಾ ಬಂದಿದ್ದೇನೆ. ಸರಕಾರ ವಿಸ್ತೃತ ಯೋಜನೆಯನ್ನು ಕಲಾವಿದರಿಗೆ ಆರ್ಥಿಕ  ರಕ್ಷಣೆ ನೀಡಬೇಕು. ಆಗ ಕಲಾಸೇವೆಯನ್ನು ಗೌರವಿಸಿದಂತಾಗುತ್ತದೆ. ಹಣ ಸಂಪಾದನೆ ಮಾಡುತ್ತಾ ಹೋಗುವುದು ಶ್ರೀಮಂತಿಕೆ ಅಲ್ಲ. ನಾನಂತೂ ಜನರಿಗೆ ಸಮಾಜಕ್ಕೆ ನಮ್ಮಿಂದಾದ ಸೇವೆ ಮಾಡುತ್ತೇನೆ. ದೇವರು ಕೊಟ್ಟಿದ್ದನ್ನು ಸಮಾಜಕ್ಕೆ ಕೊಡುತ್ತಾ ಬಂದಿದ್ದೇನೆ. ಹಾಗೆಯೇ ಇತರ ಕ್ಷೇತ್ರಗಳಿಗೂ ಅನುದಾನ ನೀಡುತ್ತಾ ಬಂದಿರುವುದು ಮನಸ್ಸಿಗೆ ಸಂತಸ ಕೊಟ್ಟಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕರಾದ ಡಾ.ಪಿ. ದಯಾನಂದ ಪೈ ಅವರು ಹೇಳಿದರು. 


ಅವರು ಶನಿವಾರ‌ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಶ್ರೀ‌ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ( ಅವರ ಅನುಪಸ್ಥಿತಿಯಲ್ಲಿ ಸಹೋದರ ಮಹಾಬಲ ಹೆಗಡೆ), ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ಯಕ್ಷಮಂಗಳ ಪ್ರಶಸ್ತಿ ಹಾಗೂ ಕೃಷ್ಣಪ್ರಕಾಶ್ ಉಳಿತ್ತಾಯ ಅವರಿಗೆ ಕೃತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.



ಯಕ್ಷಗಾನ ನಮ್ಮ ನಾಡಿನ ವೈಶಿಷ್ಟ್ಯಪೂರ್ಣವಾದ ಕಲೆಯಾಗಿದೆ. ನನಗೆ ಮತ್ತು ಯಕ್ಷಗಾನ ನಡುವೆ ಅವಿನಾಭಾವ ಸಂಬಂಧವಿದೆ. ನನ್ನ ಬದುಕಿನುದ್ದಕ್ಕೂ ಮಂಗಳೂರಿನ ಹಿಂದಿನ ಸರಕಾರಿ ಕಾಲೇಜು ಹಳೆ ವಿದ್ಯಾರ್ಥಿಯಾಗಿದ್ದು ಮಂಗಳೂರು ಮಣ್ಣಿನ ಋಣ ಮರೆಯಲು ಯಾವತ್ತೂ ಸಾಧ್ಯವಿಲ್ಲ. ಸರಕಾರಿ ಕಾಲೇಜಿನಲ್ಲಿ ಸಿಕ್ಕಿದ ಆ ಶಿಕ್ಷಣ ನನ್ನ ಬದುಕನ್ನು ಸಮಗ್ರವಾಗಿ ರೂಪಿಸಿತು. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಅಧ್ಯಯನಕ್ಕೆ ಪೂರಕವಾಗಿ ಉತ್ತಮ‌ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.


ಅಧ್ಯಕ್ಷತೆ ವಹಿಸಿದ ವಿವಿಯ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಮಾತನಾಡಿ ಹಿಂದಿನ ಮಂಗಳೂರು ಸರಕಾರಿ ಕಾಲೇಜು ವಿಶ್ವವಿದ್ಯಾಲಯ ಕಾಲೇಜು ಆಗಿ ರೂಪು ಗೊಂಡ ಬಳಿಕ ಕಳೆದ ಕೆಲವು ವರ್ಷಗಳಿಂದ ಆಗುತ್ತಿರುವ ಪ್ರಮಾದಕ್ಕೆ ಕ್ಷಮೆ ಕೇಳುತ್ತಾ ಅದಕ್ಕೆ ಮತ್ತೆ ಗತ ವೈಭವ ಸಾರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಹಾಗೆಯೇ ಮಂಗಳೂರು ವಿವಿಯು ಯಕ್ಷಗಾನದಲ್ಲಿ ಭರತನಾಟ್ಯ ಶೈಲಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿಶೇಷ ಪರೀಕ್ಷೆಯನ್ನು ನಡೆಸಿ ಯಕ್ಷಗಾನಕ್ಕೆ ಒಂದು ಶೈಕ್ಷಣಿಕ ಆಯಾಮವನ್ನು ನೀಡಲು ಚಿಂತನೆಗಳು ನಡೆದಿವೆ ಎಂದರು.


ಹಾವೇರಿ ವಿವಿ ವಿಶ್ರಾಂತ ಕುಲಪತಿ  ಪ್ರೊ. ಕೆ. ಚಿನ್ನಪ್ಪ ಗೌಡ ಪ್ರಶಸ್ತಿ ಪುರಸ್ಕೃತರ ಅಭಿನಂದನೆ ಭಾಷಣ ಮಾಡುತ್ತಾ ಮೂವರು ಪ್ರಶಸ್ತಿ ಪುರಸ್ಕೃತರು ಕೂಡಾ‌ ಯಕ್ಷಗಾನದ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಾಗಿದ್ದಾರೆ. ಡಾ.ದಯಾನಂದ‌ ಪೈ ಅವರು ಕಲೆ,‌ ಆರೋಗ್ಯ, ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿದ್ದಾರೆ ಎಂದರು.


ಸಮಾರಂಭದಲ್ಲಿ ಡಾ. ಪಿ. ದಯಾನಂದ ಪೈ ಪತ್ನಿ ಮೋಹಿನಿ ದಯಾನಂದ ಪೈ, ಮಂಗಳೂರು ವಿವಿ ಕುಲಸಚಿವ ಪ್ರೊ. ಗಣೇಶ್ ಸಂಜೀವ್ ಹಾಗೂ ಪರೀಕ್ಷಾoಗ ಕುಲಸಚಿವ ದೇವೇಂದ್ರಪ್ಪ ಉಪಸ್ಥಿತರಿದ್ದರು.


ಡಾ. ಶಶಿರೇಖ, ಯಕ್ಷಗುರು ದೀವಿತ್ ಕೋಟ್ಯಾನ್ ಡಾ. ಶ್ರೀ ದೇವಿ ಕಲ್ಲಡ್ಕ ಅವರು ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಹಾಗೂ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರು ಅನಿಸಿಕೆ‌ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.


ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ. ಸತೀಶ್ ಕೊಣಾಜೆ ವಂದಿಸಿದರು.


ಕಲಾವಿದೆ ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು. ವಿಶೇಷವೆಂದರೆ ಕಾರ್ಯಕ್ರಮ ನಿರೂಪಣೆ, ಸನ್ಮಾನ, ಗಾನ ಅಭಿನಂದನೆ ಎಲ್ಲವೂ ಯಕ್ಷಗಾನ ಶೈಲಿಯಲ್ಲಿ ನಿರೂಪಣೆಗೊಂಡಿದ್ದು ಸೇರಿದ ಕಲಾಸಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.



ಡಾ. ಪಿ. ದಯಾನಂದ ಪೈಗಳಿಂದ ಒಂದು ಕೋಟಿ ರೂ. ಅನುದಾನ ಹಸ್ತಾಂತರ 

ಮಂಗಳೂರು‌ ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ ಸಂಶೋಧನೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ಬೆಂಗಳೂರಿನ ಡಾ. ಪಿ. ದಯಾನಂದ ಪೈಗಳು ಒಂದು ಕೋಟಿ ರೂ.ಗಳ ವಿಶೇಷ ಅನುದಾನವನ್ನು ಡಿ.ಡಿ. ಮೂಲಕ ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರಿಗೆ ಹಸ್ತಾಂತರಿಸಿದರು. ಹಾಗೆಯೇ ಯಕ್ಷಗಾನ ಕಲಾಕೇಂದ್ರದ ಕಟ್ಟಡದ ಪ್ರತಿಧ್ವನಿ ನಿವಾರಿಸಿ ಮರುವಿನ್ಯಾಸದ ಖರ್ಚು ಭರಿಸುವ ಭರವಸೆ ನೀಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top