ಮಂಗಳೂರು: ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ‘ರಚನಾ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃತಕ ಬುದ್ಧಿಮತ್ತೆ (Artificial Intelligence) ಕುರಿತಾದ ಧರ್ಮಪ್ರಾಂತ್ಯ ಮಟ್ಟದ ತರಬೇತಿ ಕಾರ್ಯಕ್ರಮವು 2026ರ ಮಾರ್ಚ್ 28 ರಂದು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಪ್ಯಾರಿಷ್ ಹಾಲ್ನಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕ್ಯಾಥೋಲಿಕ್ ಉದ್ಯಮಿ ಮತ್ತು ವೃತ್ತಿಪರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಎಐ ಚಾಲಿತ ರೂಪಾಂತರ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಉದ್ಯಮಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಉದ್ಯಮದ ಬೆಳವಣಿಗೆ ಮತ್ತು ಸುಸ್ಥಿರತೆಗಾಗಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ತೀವ್ರ ಆಸಕ್ತಿಯನ್ನು ತೋರ್ಪಡಿಸಿದರು.
ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದ, ಎಐ ತಂತ್ರಜ್ಞ ಮತ್ತು ಸೈಬರ್ ಸೆಕ್ಯೂರಿಟಿ ತಜ್ಞ ಲಿಯೋ ವಿಕ್ಟರ್ ಝಾಲ್ಕಿ, ಎಐ ವಿವಿಧ ಉದ್ಯಮಗಳ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ವಿವರಿಸಿದರು. “ಎಐ ಎಂಬುದು ಭವಿಷ್ಯದ ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ಆಧುನಿಕ ಉದ್ಯಮಗಳಿಗೆ ಅತ್ಯಗತ್ಯ ಸಾಧನವಾಗಿದೆ. ದಿನನಿತ್ಯದ ಕೆಲಸಗಳನ್ನು ಸ್ವಯಂಚಾಲಿತಗೊಳಿಸುವುದರಿಂದ ಹಿಡಿದು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುವ ವರೆಗೆ ಎಐ ಸಂಸ್ಥೆಗಳ ಕಾರ್ಯ ವೈಖರಿಯನ್ನೇ ಬದಲಿಸುತ್ತಿದೆ” ಎಂದರು. ಇದೇ ವೇಳೆ ಎಐ ಬಳಕೆಯಲ್ಲಿರುವ ಸೈಬರ್ ಭದ್ರತಾ ಅಪಾಯಗಳು ಮತ್ತು ನೈತಿಕ ಬಳಕೆಯ ಅಗತ್ಯತೆಯ ಬಗ್ಗೆಯೂ ಅವರು ಎಚ್ಚರಿಸಿದರು.
ಮತ್ತೋರ್ವ ತರಬೇತುದಾರ, ಸಂದೇಶ ಫೌಂಡೇಶನ್ನ ನಿರ್ದೇಶಕ ರೆ.ಡಾ.ಫಾ. ಸುದೀಪ್ ಪಾಲ್, ತಾಂತ್ರಿಕ ಪ್ರಗತಿಯ ನೈತಿಕ ಮತ್ತು ಸಾಮಾಜಿಕ ಆಯಾಮಗಳ ಬಗ್ಗೆ ಮಾತನಾಡಿದರು. “ಎಐ ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಾಗದೆ, ಸಮುದಾಯದ ಕಲ್ಯಾಣ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಪೂರಕವಾಗಿರಲಿ. ಮೌಲ್ಯಾಧಾರಿತ ನಾಯಕತ್ವದೊಂದಿಗೆ ತಂತ್ರಜ್ಞಾನವನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳಿ,” ಎಂದು ಕರೆ ನೀಡಿದರು.
ಯುವ ಉದ್ಯಮಿ ಅರುಣ್ ಲೋಬೊ ವ್ಯವಹಾರದಲ್ಲಿ ಎಐ ಪರಿಕರಗಳ ಪ್ರಾಯೋಗಿಕ ಅನ್ವಯದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳು ಡಿಜಿಟಲ್ ಮಾರ್ಕೆಟಿಂಗ್, ಗ್ರಾಹಕರ ಸಂಪರ್ಕ ಮತ್ತು ಕೆಲಸದ ಹರಿವನ್ನು ಸುಗಮಗೊಳಿಸಲು ಎಐ ಅನ್ನು ಹೇಗೆ ಬಳಸಬಹುದು ಎಂದು ಸರಳವಾಗಿ ವಿವರಿಸಿದರು.
ತರಬೇತುದಾರರನ್ನು ಪರಿಚಯಿಸಿ, ಸ್ವಾಗತಿಸಿದ ರಚನಾ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ, ಸಾಂಪ್ರದಾಯಿಕ ವ್ಯಾಪಾರ ಮಾದರಿಗಳು ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. “ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಸಮುದಾಯದವರು ಪ್ರಸ್ತುತತೆಯನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಕೌಶಲಗಳನ್ನು ನೀಡಿ ಅವರನ್ನು ಸಬಲರನ್ನಾಗಿಸುವುದು ನಮ್ಮ ಗುರಿ” ಎಂದವರು ನುಡಿದರು. ನವೀನತೆ ಮತ್ತು ನೈತಿಕ ಉದ್ಯಮಶೀಲತೆಯನ್ನು ಉತ್ತೇಜಿಸುವ ಚೇಂಬರ್ನ ದೃಷ್ಟಿಕೋನವನ್ನು ಅವರು ಪುನರುಚ್ಚರಿಸಿದರು. ಕಾರ್ಯದರ್ಶಿ ಆಲ್ರನ್ ರೊಡ್ರಿಗಸ್ ವಂದಿಸಿದರು.
ಈ ಕಾರ್ಯಕ್ರಮವು ಭಾಗವಹಿಸಿದವರಿಗೆ ಎಐ ತಂತ್ರಜ್ಞಾನದ ಅವಕಾಶಗಳು ಮತ್ತು ಜವಾಬ್ದಾರಿಗಳ ಬಗ್ಗೆ ಆಳವಾದ ಅರಿವು ಮೂಡಿಸುವ ಮೂಲಕ, ತಳಮಟ್ಟದಲ್ಲಿ ಡಿಜಿಟಲ್ ಸಬಲೀಕರಣದತ್ತ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


