ವಿಚಲಿತರಾಗದೇ ದೃಢ ಸಂಕಲ್ಪದೊಂದಿಗಿದ್ದರೆ ಯಶಸ್ಸು ನಿಶ್ಚಿತ: ನಟ ಪೃಥ್ವಿ ಅಂಬರ್

Upayuktha
0

 ಎಸ್.ಡಿ.ಎಂ ಝೇಂಕಾರ ಸೀಸನ್ 6ರ ಸ್ಟಾರ್ ನೈಟ್



ಉಜಿರೆ: ವ್ಯಕ್ತಿಗತ ಸಮಸ್ಯೆಗಳಿಂದ ವಿಚಲಿತರಾಗದೇ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧಿಸುವ ದೃಢಸಂಕಲ್ಪದೊಂದಿಗೆ ಹೆಜ್ಜೆಯಿರಿಸಿದರೆ ಮುಂದೊಂದು ದಿನ ನಿಶ್ಚಿತವಾಗಿ ಯಶಸ್ಸು ಜೊತೆಯಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅಭಿಪ್ರಾಯಪಟ್ಟರು.


ಅವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಆಯೋಜಿಸಿದ ಎರಡು ದಿನಗಳ ಝೇಂಕಾರ ಸೀಜನ್ 6 ಉತ್ಸವದ ಭಾಗವಾಗಿ ಗುರುವಾರ ಏರ್ಪಟ್ಟ ಸ್ಟಾರ್‌ನೈಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅವರು ತಮ್ಮ ವೃತ್ತಿಪರ ಯಾನದ ಮಹತ್ವದ ಹೆಜ್ಜೆಗಳನ್ನು ಮೆಲುಕು ಹಾಕುತ್ತಾ ಮಾತನಾಡಿದರು. ವಿದ್ಯಾರ್ಥಿ ಪ್ರತಿಭೆಗಳೊಂದಿಗೆ ನೃತ್ಯ ಪ್ರದರ್ಶನ ನೀಡುತ್ತಾ ತಮ್ಮ ಸಾಧನೆಯ ಹಿಂದಿನ ಪ್ರಮುಖ ಮಜಲುಗಳನ್ನು ಅನಾವರಣಗೊಳಿಸಿದರು.


ಹದಿನೈದು ವರ್ಷಗಳ ಹಿಂದೆ ಕೊರಿಯೋಗ್ರಫಿ ವಲಯದಲ್ಲಿ ಮಹತ್ವದ್ದನ್ನು ಸಾಧಿಸುವ ಹಂಬಲದೊAದಿಗೆ ನೃತ್ಯಕಲೆಯಲ್ಲಿ ತೊಡಗಿಸಿಕೊಂಡಾಗ ಕಲೆಯೊಂದಿಗಿನ ಸೆಳೆತ ಆವರಿಸಿಕೊಂಡಿತ್ತು. ಈಗಿನ ಹಾಗೆ ತಂತ್ರಜ್ಞಾನದ ನೆರವಿನೊಂದಿಗೆ ಸುಲಭವಾಗಿ ನೃತ್ಯದ ಮಾದರಿಗಳು ಸಿಗುವ ಹಾಗೆ ನೇರವಾಗಿ ಲಭ್ಯವಾಗುತ್ತಿರಲಿಲ್ಲ. ಅವುಗಳ ಹುಡುಕಾಟ ನಡೆಸಿ ಗಮನಿಸಿ ಅಭ್ಯಸಿಸಬೇಕಾಗುತ್ತಿತ್ತು. ಅಂತಹ ಪೂರ್ವತಯಾರಿಯು ಸಾಧನೆಯ ಹುಮ್ಮಸ್ಸು ಹೆಚ್ಚಿಸುತ್ತಿತ್ತು ಎಂದು ನೆನಪಿಸಿಕೊಂಡರು.

ಹಿಂದಿನ ಕಾಲೇಜು ದಿನಗಳು ನಿಜಕ್ಕೂ ಸುವರ್ಣವಾಗಿದ್ದವು. ಯೂನಿಫಾರ್ಮ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವ ನಿಯಮ ಅನ್ವಯವಾಗುತ್ತಿರಲಿಲ್ಲ. ಓದುವ ದಿನಗಳಲ್ಲಿ ನಮಗಿಷ್ಟದ ಕಲೆಯೊಂದಿಗೆ ತೊಡಗಿಸಿಕೊಳ್ಳುವ ಬದ್ಧತೆ ನಮ್ಮನ್ನು ಗೆಲುವಿನ ಹಾದಿಯಲ್ಲಿ ನೆರವಾಗುತ್ತದೆ. ಮೈಲಿಗಲ್ಲಾಗಬಲ್ಲ ಸಾಧನೆಗೆ ಪೂರಕವಾಗುತ್ತದೆ ಎಂದರು.


‘ದಿಯಾ ಸಿನಿಮಾ ಬಿಡುಗಡೆಯಾಗಿದ್ದು ನಿರ್ಮಾಣವಾಗಿ ಐದು ವರ್ಷಗಳ ನಂತರ. ಸಿನಿಮಾವೊಂದರಲ್ಲಿ ನಟಿಸಿ ಅಷ್ಟು ಸುಧೀರ್ಘ ಅವಧಿ ಕಾದ ನಂತರ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಲಾಕ್‌ಡೌನ್ ಅವಧಿಯಲ್ಲಿ ಬಿಡುಗಡೆಯಾದ ನಂತರ ಹೊಸ ಅಲೆ ಮೂಡಿಸಿತು. ಸಿನಿಮಾ ಮೆಚ್ಚುಗೆಯ ಪಡೆಯುವವರೆಗಿನ ಹಾದಿ ಭಾವನಾತ್ಮಕ ತೊಳಲಾಟಗಳೊಂದಿಗೆ ಕೂಡಿತ್ತು. ಈ ಹಂತದಲ್ಲಿ ಸಿನಿಮಾ ರಂಗದಲ್ಲಿ ವಿಶೇಷ ಹೆಜ್ಜೆಗುರುತು ಮೂಡಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿದವರು ನನ್ನ ತಾಯಿ” ಎಂದು ತಿಳಿಸಿದರು.



ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದ ನಂತರ ಅವಕಾಶದ ಬಾಗಿಲುಗಳು ತೆರೆದುಕೊಂಡವು. ಆ್ಯಂಕರ್ ಆಗಿ ನಿರೂಪಣೆಯ ಕೌಶಲ್ಯ ನೆಚ್ಚಿಕೊಂಡು ಹೆಜ್ಜೆಯರಿಸಿದೆ. ಕೊರಿಯೋಗ್ರಫಿಯ ಕುರಿತಾದ ಆಸಕ್ತಿ ಕಲಾವಲಯದ ಪ್ರವೇಶಕ್ಕೆ ಒತ್ತಾಸೆಯಾಯಿತು. ತದನಂತರ ನಟನೆಯ ಅವಕಾಶಗಳು ಲಭ್ಯವಾದವು ಎಂದು ಹೇಳಿದರು.


ತಂದೆ, ತಾಯಿ ಸೇರಿದಂತೆ ಬೆಳವಣಿಗೆಯ ವಿವಿಧ ಹಂತಗಳಲ್ಲಿ ನೆರವಾಗುವ ಕುಟುಂಬದ ಸದಸ್ಯರೊಂದಿಗೆ ಕೊನೆಯವರೆಗೂ ವಿಶ್ವಾಸದೊಂದಿಗೆ ಇರಬೇಕು. ಸಾಧನೆಯ ಉತ್ತುಂಗ ತಲುಪಿದಾಗ ಆ ಸಂದರ್ಭದ ಸಂಭ್ರಮದ ಕ್ಷಣಗಳನ್ನು ಸುಂದರವಾಗಿಸಲು ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿರಬೇಕು. ಹಾಗಿದ್ದಾಗ ಮಾತ್ರ ಸಾಧನೆಯ ಸಂಭ್ರಮದ ಕ್ಷಣಗಳು ಅರ್ಥಪೂರ್ಣವಾಗುತ್ತವೆ ಎಂದು ನುಡಿದರು. ಅರ್ಚಿತ್ ಜೈನ್, ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ ನಟ ಪ್ಲಥ್ವಿ ಅಂಬರ್ ಅವರನ್ನು ಅಭಿನಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top