ಮಂಗಳೂರು: "ಸಮರ್ಥ ಯುವಜನತೆ– ಶಾಶ್ವತ ಭವಿಷ್ಯ"ಎಂಬ ಧ್ಯೇಯವಾಕ್ಯವು ಇಂದಿನ ಯುವಜನತೆಗೆ ಅತ್ಯಂತ ಅಗತ್ಯವಾಗಿದೆ. ದೈಹಿಕವಾಗಿ ಸದೃಢರಾದ ಯುವಕರು ಮಾತ್ರ ಶಕ್ತಿಶಾಲಿ ಸಮಾಜ ಹಾಗೂ ದೇಶದ ಭವಿಷ್ಯವನ್ನು ನಿರ್ಮಿಸಬಲ್ಲರು” ಎಂದು ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ) ಯೋಧರಾದ ನಿಖಿಲ್ ಶೆಟ್ಟಿ ಅವರು ನುಡಿದರು.
ಉರ್ವಾ ಲಾಂಗ್ ಲೇನ್ನಲ್ಲಿರುವ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಫೆಬ್ರವರಿ 27, 2026ರಂದು ಮಂಗಳೂರು ಮಂಗಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಪ್ರಥಮ ವಾರ್ಷಿಕ ಕ್ರೀಡಾ ಮತ್ತು ಅಥ್ಲೆಟಿಕ್ ಮೀಟ್–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಓದು ಮತ್ತು ಕ್ರೀಡೆ ಎರಡನ್ನೂ ಸಮಾನವಾಗಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಸಾಧ್ಯವೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಕೆ. ಖಾಲಿದ್, ಎಸ್.ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ, ಅವರು ವಹಿಸಿ ಮಾತನಾಡಿ, ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ನಾಯಕತ್ವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಶಿಸ್ತಿನಿಂದ ಪಥಸಂಚಲನ ನಡೆಸಿದರು.
ನಂತರ ಅತಿಥಿಗಳಿಂದ ಕ್ರೀಡಾ ಜ್ಯೋತಿಯನ್ನು ಪ್ರಜ್ವಲಿಸಿ, ಪಾರಿವಾಳವನ್ನು ಹಾರಿಸುವ ಮೂಲಕ ಧ್ವಜಾರೋಹಣ ಸಮಾರಂಭ ನೆರವೇರಿಸಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಕ್ಷಣವು ಸಮಾರಂಭಕ್ಕೆ ವಿಶೇಷ ಅರ್ಥ ಮತ್ತು ಮೆರುಗು ನೀಡಿತು.
ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಅವರು ಅತಿಥಿಗಳು ಹಾಗೂ ಸಭಿಕರನ್ನು ಅತ್ಯಂತ ಗೌರವ ಪೂರ್ಣವಾಗಿ ಹಾಗೂ ಆತ್ಮೀಯತೆಯಿಂದ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಎಸ್.ಸಿ.ಎಸ್ ಪದವಿ ಪೂರ್ವ ಕಾಲೇಜನ ಪ್ರಾಂಶುಪಾಲರು ಪ್ರೊ. ರಾಜಾರಾಮ್, ಎಸ್ ಸಿ ಎಸ್ ಪ್ರಿ ಸ್ಕೂಲ್ ನ ಪ್ರಾಂಶುಪಾಲರಾದ ವಿನಯ ಡಿ’ಸೋಜಾ, ಕರ್ನಾಟಕ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅಜಿತ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಮನೋಹರ್ ಪೋಷಕ-ಶಿಕ್ಷಕ ಸಂಘದ ಸಲಹಾ ಸಂಸ್ಥೆಯ ಅಧ್ಯಕ್ಷರಾದ ಶಾಂತಿ ಭಂಡಾರಿ ಹಾಗೂ ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಹಿತೇಶ್, ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೀಪ್ ರೈ ತೃತೀಯ ಬಿ.ಕಾಂ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಚನ ಬೋಧಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಫಾತಿಮತ್ ಅಜ್ಮಿಯಾ, ಬಿ.ಎಸ್.ಸಿ ಇಂಟೀರಿಯರ್ ಡಿಸೈನ್ ವಿಭಾಗದ ಉಪನ್ಯಾಸಕಿ, ಅವರು ಸಮರ್ಥವಾಗಿ ನಿರ್ವಹಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಾಯ್ಲಿನ್ ಪಿಂಟೊ ತೃತೀಯ ಬಿ.ಎಸ್ಸಿ ಧನ್ಯವಾದ ಭಾಷಣ ಸಲ್ಲಿಸಿದರು. ತದನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ವಿಜೇತರಾದ ವಿದ್ಯಾರ್ಥಿಗಳಿಗೆ ಮೆಡಲ್ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಗೊಂಡಿತು.

