ಸಮಾಜದ ಶ್ರೇಯೋಭಿವೃದ್ದಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಮತ್ತು ಅಮೂಲ್ಯ: ರೋ. ಡಾ. ರವಿಶಂಕರ್ ರಾವ್

Upayuktha
0



ಮಂಗಳೂರು, ಮಾ. 20: ಅಂತರಾಷ್ಟ್ರೀಯ ರೋಟರಿ ಸಂಸ್ಥೆ ವಿಶ್ವದ ಮಾನ್ಯತೆ ಪಡೆದ ಪ್ರಮುಖ ಸ್ವಯಂಪ್ರೇರಿತ ಸಂಸ್ಥೆಯಾಗಿದ್ದು, ವಿವಿಧ ದೇಶಗಳಲ್ಲಿ ರೋಟರಿ ಸದಸ್ಯರು ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳಾದ ವಸತಿ, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅನೇಕ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡು ಸ್ವಹಿತ ಮೀರಿದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ರೋ. ಡಾ. ರವಿಶಂಕರ್ ರಾವ್ ತಿಳಿಸಿದ್ದಾರೆ.


ಅವರು ರೋಟರಿ ಮಂಗಳೂರು ಸಿಟಿ ವತಿಯಿಂದ ನಗರದ ಬಿಕರ್ನಕಟ್ಟೆ ಪ್ರದೇಶದಲ್ಲಿರುವ ಲಲಿತ ಗೀತಾ ಅನಾಥಾಶ್ರಮಕ್ಕೆ ಸುಮಾರು ರೂ. 50,000 ಮೌಲ್ಯದ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ದಾನವಾಗಿ ನೀಡುವ ಕಾರ್ಯಕ್ರಮದಲ್ಲಿ (ತಾ. 19.03.2026) ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶ್ರಮದ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದ ಶ್ರೇಯೋಭಿವೃದ್ದಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಹಾಗೂ ಅಮೂಲ್ಯವಾಗಿದೆ ಎಂದು ಹೇಳಿ, ರೋಟರಿ ಸಂಸ್ಥೆಯ ಜನಪರ ಸೇವೆ ಜನಾರ್ಧನ ಸೇವೆಗೆ ಸಮಾನವೆಂದು ಅಭಿಪ್ರಾಯಪಟ್ಟರು.


ರೋಟರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ರಂಜನ್ ರಾವ್ ಅವರು, ಈ ಯೋಜನೆ ನಮ್ಮ ಸಂಸ್ಥೆಯ ಸಮುದಾಯ ಸೇವೆಯ ಭಾಗವಾಗಿದ್ದು, ಅನಾಥಾಶ್ರಮದ ಪ್ರಾಮಾಣಿಕ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.


ಸಂಸ್ಥೆಯ ಅಧ್ಯಕ್ಷೆ ರೋ. ಸಜ್ನಾ ಭಾಸ್ಕರ್ ಸ್ವಾಗತಿಸಿದರು. ವಲಯ ಪ್ರತಿನಿಧಿ ರೋ. ಪ್ರಾಶಾಂತ್ ರೈ, ರೋ. ಮಂಗಳ ರೈ ಹಾಗೂ ಸಂಸ್ಥೆಯ ಸಲಹೆಗಾರ ಮತ್ತು ಉದ್ಯಮಿ ಪ್ರದೀಪ್ ಮಿಸ್ಕಿತ್ ಉಪಸ್ಥಿತರಿದ್ದರು.


ಅನಾಥಾಶ್ರಮದ ಅಧ್ಯಕ್ಷೆ ಶ್ರೀಮತಿ ಲಲಿತ ಅವರು ರೋಟರಿ ಸಂಸ್ಥೆಯ ಉದಾರ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ, ನಮ್ಮ ಆಶ್ರಮದಲ್ಲಿ 45 ಅನಾಥ ಪುರುಷರು ಮತ್ತು ಮಹಿಳೆಯರು ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿ ವಂದಿಸಿದರು.


إرسال تعليق

0 تعليقات
إرسال تعليق (0)
To Top