ದ್ರಾವಿಡ ಭಾಷೆಗಳ ಭವಿಷ್ಯ ಮತ್ತು ಭಾಷಾ ಅಸಮಾನತೆ ಕುರಿತ ಚಿಂತನೆಗಳಿಗೆ ಸೂಕ್ತ ವೇದಿಕೆ: ಡಾ. ಡಿ. ವಿ ಪರಮಶಿವಮೂರ್ತಿ

Upayuktha
0


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ  ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ   ಆಳ್ವಾಸ್ ಕಾಲೇಜಿನ  ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಎಂಬ ಶೀರ್ಷಿಕೆಯಡಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು ಭಾಷಾ ವೈವಿಧ್ಯತೆ, ನೀತಿ ಅಸಮತೋಲನ ಹಾಗೂ ದ್ರಾವಿಡ ಭಾಷೆಗಳ ಭವಿಷ್ಯದ ಕುರಿತ ಪ್ರಮುಖ ಚರ್ಚೆಗಳಿಗೆ ವೇದಿಕೆಯಾಯಿತು.


ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ  ಹಂಪಿ ಕನ್ನಡ ವಿವಿಯ ಕುಲಪತಿಗಳಾದ ಡಾ ಡಿ. ವಿ ಪರಮಶಿವಮೂರ್ತಿ, ಭಾಷೆ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಬಂಧಗಳನ್ನು ಬೆಸೆಯುವ ಪ್ರಮುಖ ಸಾಧನವಾಗಿದ್ದು, ಅದು ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು.  ಭಾಷೆಗಳು ಒಗ್ಗೂಡಿಸುವ ಬದಲು ಹಲವಾರು ಸಂದರ್ಭಗಳಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿರುವುದರ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ, “ಭಾಷಾ ವೈವಿಧ್ಯತೆಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕು; ಇರ್ಷ್ಯೆಯಿಂದಲ್ಲ,” ಎಂದು ಅಭಿಪ್ರಾಯಪಟ್ಟರು. ಭಾಷೆಯು ಜ್ಞಾನ ಮತ್ತು ಅರಿವಿನ ವಿಸ್ತರಣೆಗೆ ಪರಿಣಾಮಕಾರಿ ಸಾಧನವಾಗಿದ್ದು, ಮನುಷ್ಯತ್ವವನ್ನು ಉದ್ದೀಪನಗೊಳಿಸಿ, ಮಾನವ ಸಂಬAಧಗಳನ್ನು ಬಲಪಡಿಸಬೇಕು.  ನಮ್ಮ ಭಾಷೆಗೆ ನೀಡುವ ಗೌರವವನ್ನು ಇತರ ಭಾಷೆಗಳಿಗೂ ಹಾಗೂ ಭಾಷಿಕರಿಗೂ ಸಮಾನವಾಗಿ ನೀಡಬೇಕೆಂದು ಅವರು ನುಡಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ,  ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ತಿಳಿಸಿದರು.


ವಿಚಾರ ಸಂಕಿರಣದ ಸಂಚಾಲಕರು ಹಾಗೂ  ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಡಾ ಮಾಧವ ಪೆರಾಜೆ ವಿಚಾರ ಸಂಕಿರಣದ ಉದ್ದೇಶಗಳು ಹಾಗೂ ಸಮಕಾಲೀನ ಮಹತ್ವವನ್ನು ವಿವರಿಸಿದರು.


ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ,  ಭಾಷೆಗಳ ಕುರಿತು ನಡೆಯುವ ಚರ್ಚೆಗಳು ಇಂದಿಗೂ ಹಳೆಯ ಅಂಕಿಅAಶಗಳ ಮೇಲೆ ಅವಲಂಬಿತವಾಗಿರುವುದು ದುರಾದೃಷ್ಟಕರ.   2011ರ ಜನಗಣತಿಯ ಪ್ರಕಾರ,  ಭಾರತದಲ್ಲಿ 19,569 ಮಾತೃಭಾಷೆಗಳಿದ್ದರೂ, ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಕೇವಲ 22 ಭಾಷೆಗಳಿವೆ. ಅವುಗಳಲ್ಲಿ 18 ಭಾಷೆಗಳು ಉತ್ತರ ಭಾರತದಾಗಿದ್ದು,  ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ಕೇವಲ ನಾಲ್ಕು ಮಾತ್ರವಿರುವುದು ಭಾಷಾ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದರು.  


ಭಾಷಾ ಆಡಳಿತ ವ್ಯವಸ್ಥೆಯಲ್ಲಿಯೂ ಅಸಮಾನತೆ ಇದ್ದು,  ಹಿಂದಿ ಭಾಷೆ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿದ್ದರೆ, ಇತರ ಭಾಷೆಗಳು ಭಾರತದ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಭಾರತ ಸಂವಿಧಾನದ 344(4)ನೇ ವಿಧಿಯ ಪ್ರಕಾರ, ಅಧಿಕೃತ ಭಾಷೆಗಳ ಕುರಿತು ರಚಿಸಲಾದ ಆಯೋಗದ ಶಿಫಾರಸುಗಳನ್ನು ಪರಿಶೀಲಿಸಲು ಸಂಸತ್ತಿನ ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಭಾಷಾ ನೀತಿಗೆ ಮಾರ್ಗದರ್ಶಕವಾದರೂ, ಅದರ ಅನುಷ್ಠಾನದಲ್ಲಿ ಹಿಂದಿಗೆ ಹೆಚ್ಚಿನ ಒತ್ತು ಹಾಗೂ ಇತರ ಭಾಷೆಗಳಡೆ ಕಡಿಮೆ ಗಮನ ಇರುವುದರಿಂದ ಸಮಾನತೆ ಬಗ್ಗೆ ಸಹಜ ಪ್ರಶ್ನೆಗಳೇಳುತ್ತವೆ ಎಂದರು.


ಜನಸಂಖ್ಯಾ ವೃದ್ಧಿದರದ ವ್ಯತ್ಯಾಸವು ರಾಜಕೀಯ ಪ್ರತಿನಿಧಿತ್ವದ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮವನ್ನು  ಉಲ್ಲೇಖಿಸಿದ ಅವರು,  ಕರ್ನಾಟಕದಲ್ಲಿ ಜನನ ಪ್ರಮಾಣ 1.6ರಷ್ಟಿದ್ದರೆ, ಬಿಹಾರ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅದು 2.9ರಷ್ಟಿದೆ. ಈ ವ್ಯತ್ಯಾಸವು ಕೇವಲ ಜನಸಂಖ್ಯಾ ಅಂಕಿಅಂಶಗಳಲ್ಲದೆ, ಭವಿಷ್ಯದ ರಾಜಕೀಯ ಪ್ರತಿನಿಧಿತ್ವದ ಮೇಲೂ ಮಹತ್ವದ ಪರಿಣಾಮ ಬೀರುತ್ತವೆ.


ಈ ನೆಲೆಯಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಅಧ್ಯಯದ ಪ್ರಕಾರ, ಒಂದು ವೇಳೆ 2028ರ ಲೋಕಸಭಾ ಚುನಾಚಣೆಗೆ ಕ್ಷೇತ್ರ ಪುನರ್ವಿಂಗಡಣೆಯಾದಲ್ಲಿ ಉತ್ತರ ಪ್ರದೇಶದ ಸ್ಥಾನಗಳು 80ರಿಂದ 128ಕ್ಕೆ, ಬಿಹಾರದಲ್ಲಿ 40ರಿಂದ 70ಕ್ಕೆ, ಮದ್ಯಪ್ರದೇಶದಲ್ಲಿ 29 ರಿಂದ 47, ಮಹಾರಾಷ್ಟç 48ರಿಂದ 68, ರಾಜಸ್ಥಾನ 25ರಿಂದ 44,  ಪಶ್ಚಿಮ ಬಂಗಾಳ 42ರಿಂದ 60 ಸ್ಥಾನಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ.  ಇದಕ್ಕೆ ವಿರುದ್ಧವಾಗಿ ದಕ್ಷಿಣದ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾತ್ರವಾಗುವ ಸಾಧ್ಯತೆ ಇದ್ದು,  ಕರ್ನಾಟಕದಲ್ಲಿ 28ರಿಂದ 36ಕ್ಕೆ, ತಮಿಳುನಾಡಿನಲ್ಲಿ 39ರಿಂದ 42ಕ್ಕೆ, ತೆಲಂಗಾಣದಲ್ಲಿ 17ರಿಂದ 20ಕ್ಕೆ, ಆಂಧ್ರ ಪ್ರದೇಶದಲ್ಲಿ 25ರಿಂದ 28ಕ್ಕೆ ಏರಿಕೆಯಾಗುವ ಸಾಧ್ಯತೆ ಇದ್ದು, ಕೇರಳದಲ್ಲಿ 20ರಿಂದ 19ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದರು.


ಈ ಅಂಕಿಅಂಶಗಳ ಪ್ರಕಾರ, ಭವಿಷ್ಯದಲ್ಲಿ ಉತ್ತರ ಭಾರತದಲ್ಲಿ ಸುಮಾರು 625 ಲೋಕಸಭಾ ಸ್ಥಾನಗಳು ಹಾಗೂ ದಕ್ಷಿಣ ಭಾರತದಲ್ಲಿ ಕೇವಲ 185 ಸ್ಥಾನಗಳಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ, ನಮ್ಮ ಸಮಸ್ಯೆಗಳು, ಅಗತ್ಯಗಳು ಮತ್ತು ಅಭಿಪ್ರಾಯಗಳು ರಾಷ್ಟ್ರೀಯ ನಿರ್ಧಾರಗಳಲ್ಲಿ ಕಡಿಮೆ ಪ್ರಾಮುಖ್ಯತೆ ಪಡೆಯುವ ಅಪಾಯ ಎದುರಾಗಬಹುದು ಎಂದರು.  


ಈ ನಿಟ್ಟಿನಲ್ಲಿ ದ್ರಾವಿಡ ಭಾಷೆಗಳ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಒಗ್ಗಟ್ಟಿನ ಹೋರಾಟ ಕೇವಲ ಅಗತ್ಯವಲ್ಲ, ಅದು ಕಾಲದ ಬೇಡಿಕೆಯಾಗಿದೆ. ಈ ಹೋರಾಟವು ನಮ್ಮ ಸಂಸ್ಕೃತಿ ಮತ್ತು ಗುರುತನ್ನು ಉಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಬಲ್ಲದು ಎಂದರು.


ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ  ಕೇರಳದ ಖ್ಯಾತ ಬರಹಗಾರ ಹಾಗೂ ಭಾಷಾಂತಕಾರಾದ  ಡಾ ಸುಧಾಕರ್ ರಾಮಂತಳಿ ಬಹುಭಾಷೆಗಳು ಹಾಗೂ  ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಅನನ್ಯತೆ ಕುರಿತು, ಡಾ ವಿ ಬಿ ತಾರಕೇಶ್ವರ, ದಕ್ಷಿಣ ಭಾರತದ ಭಾಷಾರಾಷ್ಟ್ರೀಯತೆಯ ಪರಿಕಲ್ಪನೆ, ಡಾ ಡಿ ಪಾಂಡುರಂಗ ಬಾಬು – ಜಾತಿ ವ್ಯವಸ್ಥೆ ಮತ್ತು ಭಾಷೆ: ಸಮಜೋ ಭಾಷಾ ವೈಜ್ಞಾನಿಕ ಚಿಂತನೆಗಳು, ಎರಡನೇ ಗೋಷ್ಠಿಯಲ್ಲಿ ಶ್ರೀಕೃಷ್ಣದೇವರಾಯ ವಿವಿ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ ರಾಬರ್ಟ ಜೋಶ್- ಜಾಗತಿಕ ಮತ್ತು ಗ್ಲೊಕಲ್ ರಾಜಕರಣದ ನೆಲೆಗಳು, ಡಾ ರೇಖಾ ದತ್ತ, ದಕ್ಷಿಣ ಭಾರತದ ಸ್ತ್ರೀ ವಾದಿ ಬರಹಗಳು ವಿಷಯದ ಕುರಿತು ಮಾತನಾಡಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್ ಇದ್ದರು.


ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top