ದೆಹಲಿಯಲ್ಲಿ ಸಂಭ್ರಮದ ಸಂತ ಸೇವಾಲಾಲ್ ಜಯಂತಿ ಆಚರಣೆ
ನವದೆಹಲಿ: ದೇಶದಲ್ಲಿ ನೂರು ವರ್ಷಗಳ ನಂತರ ಜಾತಿ ಸಮೀಕ್ಷೆಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಆದೇಶ ಹೊರಡಿಸಿದ್ದು ದೇಶದಲ್ಲಿರುವ ಎಲ್ಲಾ ಬಂಜಾರ ಸಮುದಾಯದ ಜನರು ಜಾತಿ ಕಲಂನಲ್ಲಿ ಬಂಜಾರ ನಮೂದಿಸಿ ಲಂಬಾಣಿ ಸಮುದಾಯದ ನಿಖರ ಜನಸಂಖ್ಯೆ ಹೊಂದಲು ಸಹಕರಿಸಬೇಕೆಂದು ಮಾಜಿ ಲೋಕಸಭಾ ಸದಸ್ಯರು ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾಧವ್ ಕರೆ ನೀಡಿದರು.
ನವದೆಹಲಿಯ ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಫೆ.28 ರಂದು ಶನಿವಾರ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಹಾಗೂ ಶ್ರೀ ರೂಪ್ ಸಿಂಗ್ ಮಹಾರಾಜ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಬಂಜಾರ ಸಮುದಾಯದ ಭವಿಷ್ಯವನ್ನು ರೂಪಿಸಲು ನಿಖರ ಜನಸಂಖ್ಯೆಯ ಮಾಹಿತಿಯನ್ನು ದಾಖಲು ಮಾಡುವುದು ಅತ್ಯಂತ ಅಗತ್ಯವಾಗಿದೆ ಹಾಗೂ ಜಾತಿ ಕಲಂನಲ್ಲಿ ಬಂಜಾರ ಹಾಗೂ ಧರ್ಮದ ಕಲಂ ನಲ್ಲಿ ಗೋರ್ ಸಮಾಜ ಎಂಬುದಾಗಿ ದಾಖಲಿಸುವುದಲ್ಲದೇ ಎಂಟನೇ ಪರಿಚ್ಛೇದದಲ್ಲಿ ಲಂಬಾಣಿ ಭಾಷೆಯನ್ನು ಸೇರಿಸಲು ಪ್ರಯತ್ನಿಸಬೇಕು. ಬಂಜಾರ ಸಮಾಜ ಒಗ್ಗಟ್ಟಾಗದಿದ್ದರೆ ಭವಿಷ್ಯದಲ್ಲಿ ಖಂಡಿತ ಆತಂಕ ಎದುರಿಸಬೇಕಾಗುತ್ತದೆ. ನವ ದೆಹಲಿಯಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಹಾಗೂ ಸಮಸ್ಯೆಗಳನ್ನು ಚರ್ಚಿಸಲು ರಾಜಕೀಯೇತರ ಕಚೇರಿ ಸ್ಥಾಪನೆ ಅತ್ಯಂತ ಅಗತ್ಯವಾಗಿದೆ ಎಂದು ಡಾ. ಜಾಧವ್ ಸಲಹೆ ನೀಡಿದರು.
ಪ್ರತಿ ರಾಜ್ಯಗಳಲ್ಲಿ ಆಡಳಿತ ನಡೆವುಸುವ ಸರಕಾರಗಳು ಬಂಜಾರ ಸಮುದಾಯದ ಜನಗಳ ಸಂಖ್ಯೆಗೆ ಅನುಗುಣವಾಗಿ ಸಂಪುಟದಲ್ಲಿ ಸಚಿವ ಸ್ಥಾನ ಮಾನ ನೀಡಿ ಪ್ರಾತಿನಿಧ್ಯ ಒದಗಿಸಬೇಕು ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸಚಿವ ಸ್ಥಾನ ನೀಡದಿರುವುದು ನಾಚಿಕೆಗೇಡಿನ ವಿಷಯ ಎಂದು ಕಟುವಾಗಿ ಟೀಕಿಸಿದರು.
ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಸಮುದಾಯದ ಸ್ವಾಮೀಜಿಗಳ ಹಾಗೂ ಗಣ್ಯರ ಸಮ್ಮುಖದಲ್ಲಿ ಜಗದಂಬಾದೇವಿಯ ಭೋಗ ಪೂಜೆ ನೆರವೇರಿತು. ಆನಂತರ 26 ಕ್ಕೂ ಹೆಚ್ಚು ರಾಜ್ಯಗಳಿಂದ ಆಗಮಿಸಿದ ಬಂಜಾರ ಸಮುದಾಯದ ಜನರು ಹಾಗೂ ಸಾಂಸ್ಕೃತಿಕ ತಂಡಗಳು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಚಿತ್ರದುರ್ಗದ ಸಾವಿತ್ರಿಬಾಯಿ ಮತ್ತು ತಂಡದವರು ಹಾಗೂ ಸುಭಾಶ್ ರಾಥೋಡ್ ಗೀತೆಗಳನ್ನು ಹಾಡಿ ಸಾಂಸ್ಕೃತಿಕ ರಂಜನೆ ನೀಡಿದರು.
ಕಾರ್ಯಕ್ರಮದಲ್ಲಿ ತೆಲಂಗಾಣದ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಾಮಲು ನಾಯಕ್, ಗೋರ್ ಸೇನಾ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷರಾದ ಬಾಳ ಸಾಹೇಬ್ ನಾಯಕ್ ಪರಿಶಿಷ್ಟ ಜಾತಿ ಆಯೋಗದ ಸದಸ್ಯರಾದ ಹುಸೇನ್ ನಾಯಕ್, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಯದೇವ ನಾಯಕ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಅಧ್ಯಕ್ಷರಾದ ಶಂಕರ್ ಪವಾರ್, ಮಾಜಿ ಸಂಸದರಾದ ಡಿ.ಬಿ ಪಾಟೀಲ್, ಕಾಳು ಬಾಬಾ ಉಜ್ಜಯಿನಿ, ಮಾತನಾಡಿದರು. ಮಹಾರಾಷ್ಟ್ರದ ಜಲ ಹಾಗೂ ಮಣ್ಣು ಸಂರಕ್ಷಣ ಖಾತೆಯ ಸಚಿವರಾದ ಸಂಜಯ್ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಪೌರದೇವಿಯ ಶೇಖರ್ ಮಹಾರಾಜ್ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪೂಜ್ಯರಾದ ಸಿದ್ದಲಿಂಗ ಸ್ವಾಮೀಜಿ, ಅನಿಲ್ ಮಹಾರಾಜ್, ಮಾತಾ ಲತಾದೇವಿ, ಜುಗನ್ ಮಹಾರಾಜ್ ರಾಮ ಚೈತನ್ಯ ಮಹಾರಾಜ್, ಶ್ರೀಮತಿ ಶೀತಲ್ ಸಂಜಯ್ ರಾಥೋಡ್ ಶ್ರೀಮತಿ ಕವಿತಾ, ಶಿವರಾಜ್ ಪಾಟೀಲ್ ರದ್ದೇವಾಡಗಿ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

