ಮಂಗಳೂರು: ದೇಶದ ಪ್ರತಿಷ್ಠಿತ ಕೆನರಾ ಬ್ಯಾಂಕ್ ಇದರ ಮಂಗಳೂರು ವೃತ್ತ ಕಾರ್ಯಾಲಯ ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿರುವ ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ ಕಾಸರಗೋಡು ಅವರನ್ನು ಶಾಖೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುರೇಶ ಕುಮಾರ್ ಕುರುಬ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕವಿ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕೆನರಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ನ ವಿಶ್ರಾಂತ ಹಿರಿಯ ರಾಜ್ಯ ಮುಖಂಡ ಕೆ. ಸತೀಶ ಕಿಣಿ, ಕೆ. ಶಶಿಕಾಂತ, ಕೇರಳ ಸರಕಾರದ ಕೋಝಿಕೋಡ್ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾ ಅಧಿಕಾರಿ (ವಿಶ್ರಾಂತ) ಕೆ. ಗೀತಾ ಕುಮಾರಿ, ಕೆನರಾ ಬ್ಯಾಂಕ್ ಸ್ಟಾಪ್ ಯೂನಿಯನ್ನ ರಾಜ್ಯ ಮುಖಂಡ ಅಖಿಲೇಶ್ ಎ. ವಿಜಯ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್ನಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸಿ ನಿವೃತ್ತರಾಗುತ್ತಿರುವ ಶಿವರಾಮ ಕಾಸರಗೋಡು ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಸಾಂಸ್ಕೃತಿಕ ರಾಯಭಾರಿಯಾಗಿ, ಸಾಹಿತ್ಯ, ಸಾಂಸ್ಕೃತಿಕ, ಕನ್ನಡಪರ ಚಟುವಟಿಕೆ, ಕನ್ನಡ ಹೋರಾಟಗಳಿಗೆ ನೇತೃತ್ವ ವಹಿಸಿದ್ದು, ಹಲವು ಸಾಹಿತ್ಯ ಕೃತಿಗಳನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. ಕೇರಳ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ದೇಶ ವಿದೇಶಗಳಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ ಎಂದು ಅಭಿನಂದಿಸಿದರು.
ಶಿವರಾಮ ಕಾಸರಗೋಡು ಅವರಿಗೆ ಕೆನರಾ ಬ್ಯಾಂಕ್ ಗೌರವ ಫಲಕ, ಶಾಲು, ಹಾರ, ಸ್ಮರಣಿಕೆ, ಹಣ್ಣುಹಂಪಲುಗಳನ್ನಿತ್ತು ಸಾಂಪ್ರದಾಯಿಕವಾಗಿ ಗೌರವ ಸಲ್ಲಿಸಿ, ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವರಾಮ ಕಾಸರಗೋಡು ಕೆನರಾ ಬ್ಯಾಂಕ್ನಲ್ಲಿ ಧನಾತ್ಮಕ ಚಿಂತನೆಯೊಂದಿಗೆ ಸೇವೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ನ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ ಎಲ್ಲರ ಸಹಕಾರಕ್ಕೆ ಅಭಾರಿಯಾಗಿದ್ದೇನೆ ಎಂದು ಹೇಳಿದರು.
ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುರೇಶ ಕುಮಾರ್ ಕುರುಬ ಪ್ರಾಸ್ತಾವನೆ ಗೈದು ಪರಿಚಯಿಸಿದರು. ಪ್ರಬಂಧಕಿ ಸ್ವಾತಿ ಜಿ. ಸ್ವಾಗತಿಸಿದರು. ಅಖಿಲೇಶ್ ಎ. ವಿಜಯ್ ಕಾರ್ಯಕ್ರಮ ನಿರ್ವಹಿಸಿದರು. ನೀನಾ ಎಸ್. ರಾಜ್, ನೀತು ಕೆ. ಪಿ., ಸುಪ್ರೀತ್ ಕೆ., ವಿಫಿನ್ ಜೋನ್, ದಯಾನಂದ, ಗೌತಮೇಶ್ವರಿ, ರವೀಂದ್ರ ಶೆಟ್ಟಿ, ನಾಗೇಶ್, ಸುರೇಶ್ ಆಚಾರ್ಯ, ವಿಸ್ಮಿತಾ ಗಂಗಮ್ಮ ಶುಭ ಹಾರೈಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


