ಕಲಬುರಗಿ ಜಿಲ್ಲೆಯಿಂದ ಸಾವಿರಕ್ಕೂ ಮಿಕ್ಕ ಈಡಿಗರ ನಡೆ ಫ್ರೀಡಂ ಪಾರ್ಕ್ ಕಡೆ

Upayuktha
0

700 ಕಿ.ಮೀ. ಐತಿಹಾಸಿಕ ಪಾದಯಾತ್ರೆ ಸಮಾರೋಪದಲ್ಲಿ ಭಾಗಿಯಾಗಲು ವ್ಯಾಪಕ ಸಿದ್ಧತೆ





ಕಲಬುರಗಿ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆ. 12ರಂದು ನಡೆಯಲಿರುವ ಡಾ ಪ್ರಣವಾನಂದ ಶ್ರೀಗಳ 700 ಕಿ.ಮೀ. ಐತಿಹಾಸಿಕ ಪಾದಯಾತ್ರೆಯ ಸಮಾರೋಪ ಶಕ್ತಿಪದರ್ಶನದಲ್ಲಿ ಕಲಬುರಗಿ ಜಿಲ್ಲೆಯ ಸಾವಿರಾರು ಸಂಖ್ಯೆಯ ಈಡಿಗರು ಪಾಲ್ಗೊಳ್ಳಲು ವ್ಯಾಪಕ ತಯಾರಿ ಮಾಡಲಾಗಿದೆ. 


ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ ಹಾಗೂ ವೆಂಕಟೇಶ್ ಎಂ ಕಡೇಚೂರ್ ನೇತೃತ್ವದಲ್ಲಿ ಫೆ.4ರಂದು ನಡೆದ ಸಿದ್ಧತಾ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳು ಈಡಿಗ ಸಮುದಾಯದವರು ಒಗ್ಗಟ್ಟಿನಿಂದ ಸ್ವಾಮೀಜಿಯವರ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡುವಂತೆ ಸಲಹೆ ನೀಡಿದರು. 


ಸಮಾಜದ ಕೆಲಸವನ್ನು ದೇವರ ಕೆಲಸ ಎಂದು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಆಗ ಮಾತ್ರ ಸಮಾಜಕ್ಕೆ ಸರಕಾರವು ಸೌಲಭ್ಯವನ್ನು ನೀಡಲು ಮುಂದಾಗುತ್ತದೆ ಎಂದು ಯುವ ಮುಖಂಡ ಪ್ರವೀಣ್ ಶಿವಯ್ಯ ಗುತ್ತೇದಾರ್ ಹೇಳಿದರು. ಸಮಾಜದ ಹಿತ ದೃಷ್ಟಿಯಿಂದ 700 ಕೀ.ಮೀ ಪಾದಯಾತ್ರೆ ಮೂಲಕ ಸಮುದಾಯದ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುವ ಸ್ವಾಮೀಜಿಯವರ ಪ್ರಯತ್ನಕ್ಕೆ ಬೆಂಬಲಿಸಬೇಕು ಎಂದು ಸತೀಶ್ ವಿ ಗುತ್ತೇದಾರ್ ಹೇಳಿದರು. ಕಲ್ಬುರಗಿ ಜಿಲ್ಲೆಯಿಂದ ಒಂದು ಸಾವಿರಕ್ಕಿಂತಲೂ ಹೆಚ್ಚು ಜನರು ರೈಲು ಬಸ್ಸು ಹಾಗೂ ಸಂತ ವಾಹನಗಳಲ್ಲಿ ತೆರರಳಲು ಪೂರ್ಣ ಸಿದ್ಧತೆ ನಡೆದಿದೆ ಎಂದು ವೆಂಕಟೇಶ ಎಂ.ಕಡೇಚೂರ್ ಹೇಳಿದರು.


ಫೆ. 12ರಂದು ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಸ್ವಾಮೀಜಿಯವರ ಪ್ರತಿಭಟನೆ ಪ್ರಾರಂಭವಾಗುವುದರಿಂದ ಎಲ್ಲರೂ ಪಾಲ್ಗೊಂಡು ತಾಲೂಕು ಮಟ್ಟದ ಆರ್ಯ ಈಡಿಗ ಸಮಾಜದ ನಾಯಕರು ಸಿದ್ಧತೆ ಮಾಡಲು ಹಿರಿಯ ಮುಖಂಡರಾದ ಅಶೋಕ್ ಗುತ್ತೇದಾರ್ ಬಡದಾಳ ಸಲಹೆ ನೀಡಿದರು. ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮಾತನಾಡಿ, ಈಡಿಗರ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಸಮುದಾಯ ಬಾಂಧವರಿಗಾಗಿ ದಾಸರಹಳ್ಳಿ 8ನೇ ಮೈಲಿ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಮುಂಜಾನೆ ವ್ಯವಸ್ಥೆಯನ್ನು ಮಾಡಲಾಗಿದ್ದು ನಂತರ 7.30ಕ್ಕೆ ಪಾದಯಾತ್ರೆಯ ಮೂಲಕ ಫ್ರೀಡಂ ಪಾರ್ಕ್ ವರೆಗೆ ತೆರಳಲಾಗುವುದು ಎಂದರು.


ಈಡಿಗರ ಶಕ್ತಿಪ್ರದರ್ಶನವನ್ನು ಯಶಸ್ವಿಗೊಳಿಸಲು ಎಲ್ಲಾ ಮುಖಂಡರು ಒಕ್ಕೊರಳಿನಿಂದ ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿ ಎ. ಈ. ತಿಮ್ಮಪ್ಪ ಗಂಗಾವತಿ, ಸುರೇಶ ಗುತ್ತೇದಾರ ಮಟ್ಟೂರ್, ಸಂತೋಷ್ ಚೌದರಿ, ಅಶೋಕ್ ಕಲಾಲ್, ಬಸವರಾಜ್ ರಾವೂರ್, ಮಲ್ಲಯ್ಯ ಆರ್. ಕುಕ್ಕುಂದಿ, ಮಹೇಶ ಗುತ್ತೇದಾರ ಹೊಳಕುಂದ, ರಾಘವೇಂದ್ರ ಎಮ್ ಗುತ್ತೇದಾರ, ನಿಂಗಯ್ಯ ಗುತ್ತೇದಾರ ಕಪನೂರ, ಪ್ರಕಾಶ್ ಗುತ್ತೇದಾರ ಕಪನೂರ, ಅಶೋಕ ಗುತ್ತೇದಾರ, ಆನಂದ್ ಗುತ್ತೇದಾರ ಬಳೂರಗಿ, ವಿಶ್ವನಾಥ ಲಿಂಗಸಗೂರು ಭಾಗವಹಿಸಿದ್ದರು.


ಪಾದಯಾತ್ರೆ 600 ಕೀ. ಮೀ ಪೂರ್ಣ

ಡಾ. ಪ್ರಣವಾನಂದ ಶ್ರೀಗಳು ಜ.6 ರಿಂದ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಆರಂಭಿಸಿದ ಪಾದಯಾತ್ರೆಯು 31 ದಿನಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ 600 ಕಿ.ಮೀ ಗಳನ್ನು ಕ್ರಮಿಸಿದ್ದು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮುಂದುವರಿಯುತ್ತಿದೆ. ಉರಿ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಸಮಾಜ ಬಾಂಧವರು ಹಾಗೂ ಅತಿ ಹಿಂದುಳಿದ ಸಮಾಜದ ಜನರು ಪಾಲ್ಗೊಂಡು ಮುಂದುವರಿಯುತ್ತಿದೆ. ಇನ್ನು ಒಂದು ವಾರ ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮುಂದುವರೆಯಲಿದೆ. ಫೆ. 12ರಂದು ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಸಮಸ್ತ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದೆ.


ಶಕ್ತಿಪ್ರದರ್ಶನದಲ್ಲಿ ಹಿರಿಯ ನಾಯಕರು ಭಾಗಿ

ಈಡಿಗರ ಶಕ್ತಿ ಪ್ರದರ್ಶನದಲ್ಲಿ ಸಮಾಜದ ಹಿರಿಯ ಮುಖಂಡರಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ದಣಿ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ಕೆ.ಜಿ ಪ್ರಶಾಂತ್ ಸಾಗರ, ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್, ಬಾಲರಾಜ ಗುತ್ತೇದಾರ್, ನಿತಿನ್ ಗುತ್ತೇದಾರ್, ಸತೀಶ್ ವಿ ಗುತ್ತೇದಾರ್, ಲಕ್ಷ್ಮಿ ನರಸಯ್ಯ, ಶಾಸಕರಾದ ಸಿ.ಟಿ ರವಿ, ಸುನಿಲ್ ಕುಮಾರ್, ಹರೀಶ್ ಪೂಂಜಾ, ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top