ಜ. 25: ರಥಸಪ್ತಮಿ– ಸಪ್ತಮಿಯ ಸೂರ್ಯೋಪಾಸನೆ

Upayuktha
0


ಬ್ರಹ್ಮಾಂಡದಲ್ಲಿ ಸೂರ್ಯನಿಗಿಂತ ಅದ್ಭುತವಾದ ಇನ್ನೊಂದು ವಸ್ತುವಿಲ್ಲ. ವ್ಯೂಹದ ಕೇಂದ್ರವಾಗಿ ತನ್ನನ್ನು ಪ್ರದಕ್ಷಿಣೆ ಹಾಕುವ ಪರಿವಾರದ ಬೃಹತ್ ಕಾರ್ಯಗಳಿಗೆಲ್ಲ ಬೆಳಕನ್ನು ನೀಡುವ, ಕತ್ತಲೆಯನ್ನು ಕಳೆಯುವ ಸ್ವಯಂಪ್ರಕಾಶ ಮಂಡಲ ಸೂರ್ಯ ಚಿರಂತನವಾದರೂ ಹೊಸತನವನ್ನು ನೀಡುವ ಚೈತನ್ಯದ ನಿಧಿ. ನಮ್ಮ ಬದುಕಿನಲ್ಲಿ ನಿತ್ಯ ಕಂಡರೂ ಹಳಸಲಾಗದ ವಸ್ತುಗಳು ಬಹಳ ಇಲ್ಲ. ಆ ನಿತ್ಯ ನೂತನವಾದ ಕೆಲವೇ ವಸ್ತುಗಳಲ್ಲಿ ಸೂರ್ಯೋದಯವೂ ಒಂದಂತೆ! ನವೋ ನವೋ ಭವತಿ ಜಾಯಮಾನಃ. ಪರಮೇಶ್ವರನ ಪ್ರತ್ಯಕ್ಷವಾದ ಅಷ್ಟಮೂರ್ತಿಗಳಲ್ಲಿ ಒಂದು ಕಾಲಕಾರಕನು ಕಾಲನಿಯಮಕನೂ ಆದ ಸೂರ್ಯ. ಭೂಮಿಯ ಮೇಲಿನ ಎಲ್ಲ ಕಾಲಗಣನೆಯು ಸೂರ್ಯ–ಚಂದ್ರ ಕೇಂದ್ರಿತವಾದದ್ದು. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದ ಮಧ್ಯದ ಕಾಲವೇ ನಮ್ಮ ಅಹೋರಾತ್ರಿಗಳ ಒಂದು ದಿನವಲ್ಲವೇ?


ಜಗತ್ತಿನ ಜ್ಯೋತಿಯಾದ ಸೂರ್ಯನಿಂದಾಗುವ ಭೌತಿಕ ಪ್ರಯೋಜನಗಳು ಎಲ್ಲರಿಗೂ ತಿಳಿದದ್ದೇ. ಆದರೆ ಆ ಸೂರ್ಯನು ಪರಂಜ್ಯೋತಿಯಾದ ಪರಮಾತ್ಮನ ಶ್ರೇಷ್ಠ ಪ್ರತೀಕವೂ ಆಗಿದ್ದಾನೆ ಎಂದು ಮನಗಂಡ ಭಾರತ ಋಷಿಗಳು ಸೂರ್ಯೋಪಾಸನೆಯಲ್ಲಿ ಅಧ್ಯಾತ್ಮವನ್ನೂ ಜೋಡಿಸಿದರು.


ರಥಸಪ್ತಮಿ

ರಥಸಪ್ತಮಿ ಸೂರ್ಯನಾರಾಯಣನ ಜನ್ಮದಿನ. ಯಾರು ಏನನ್ನೇ ಹೇಳಲಿ, ಸೂರ್ಯಮಂಡಲದಲ್ಲಿ ಅಭಿಮಾನಿದೇವತೆಯೊಂದಿದೆ ಎಂದು ಎಲ್ಲರೂ ಒಪ್ಪುತ್ತಾರೆ. ಆ ದೇವತೆಯು ಯಾವಾಗಲೂ ಇರುವುದಾದರೂ ಸಮಸ್ತ ಲೋಕಗಳ ಕಲ್ಯಾಣಕ್ಕಾಗಿ ಶ್ರೀರಾಮ–ಕೃಷ್ಣಾದಿಗಳಂತೆ ಯಾವುದೋ ಒಂದು ಸುದಿನದಲ್ಲಿ ಕಾಣಿಸಿಕೊಂಡಿದೆ. ಕೆಲವೇ ವರ್ಷಗಳಲ್ಲಿ ಅವತಾರದ ಉದ್ದೇಶವನ್ನು ಸಂಪನ್ನವಾಗಿ ಮೂಲಸ್ಥಾನವನ್ನು ಸೇರುವ ಭಗವಂತನ ವಿಭೂತಿಗಳು ಅಸಂಖ್ಯಾತವಾಗಿವೆ. ಆದರೆ ಸೃಷ್ಟಿಯ ಆದಿಯಿಂದ ಕೊನೆಯವರೆಗೂ ಸರ್ವಜನಹಿತವನ್ನು ಸಂಪಾದಿಸುತ್ತಿರುವ ದೇವತೆಗಳಲ್ಲಿ ಶ್ರೀಸೂರ್ಯದೇವರು ಸುಪ್ತಸಿದ್ಧ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.


ಬೆಳಕಿನ ಮೂಲ ಆಗರವಾದ ಆದಿತ್ಯನನ್ನು ತಿಳಿಯದವರು ಯಾರೂ ಇಲ್ಲ. ಶಿಶುಗಳಾಗಲಿ, ಪಶುಗಳಾಗಲಿ, ಪಂಡಿತರಾಗಲಿ, ಪಾಮರರಾಗಲಿ ಎಲ್ಲರಿಗೂ ಬೆಳಕು ಬೇಕೇ ಬೇಕು. ಈ ಕಾರಣಕ್ಕಾಗಿಯೇ ಎಲ್ಲರೂ ಪ್ರಕಾಶಮಯನಾದ ಪರಮಾತ್ಮನನ್ನು ಆರಾಧಿಸುತ್ತಾರೆ. ಭಾರತದ ಧಾರ್ಮಿಕ ಸಂಪ್ರದಾಯಗಳು ನಮ್ಮ ಪೂರ್ವಿಕರ ಅನೇಕ ಚಿಂತನೆಗಳ ಹಾಗೂ ಸಂಸ್ಕಾರಗಳ ಫಲವಾಗಿದೆ. ವ್ಯಕ್ತಿ–ಸಮಾಜದ ವಿಕಾಸಕ್ಕೆ ದಾರಿದೀಪಗಳಾಗಿವೆ. ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ಸಂಸ್ಕರಿಸಲು ಸಮರ್ಥವಾಗಿರುವ ಈ ಸಾಂಪ್ರದಾಯಿಕ ಆಚರಣೆಗಳು ಆಯಸ್ಸು ಮತ್ತು ಆರೋಗ್ಯ ವೃದ್ಧಿಗೂ ಪೂರಕವಾಗಿವೆ.


ಮಕರ ಸಂಕ್ರಮಣ ದಿನದಂದು ಸಂವತ್ಸರದ ದಕ್ಷಿಣಾಯಣ ಕೊನೆಗೊಂಡು ಉತ್ತರಾಯಣ ಆರಂಭವಾಗುತ್ತದೆ. ಇದರಿಂದ ಸೂರ್ಯನು ಉತ್ತರ ಕಕ್ಷೆಯ ಕಡೆಗೆ ವಾಲುವುದಕ್ಕೆ ಪ್ರಾರಂಭಿಸಿ, ಮಾಘ ಮಾಸದ ಸಪ್ತಮಿಯ ದಿನದಂದು ಕಕ್ಷೆಯಲ್ಲಿ ನೆಲೆಗೊಂಡು ಸಂಚರಿಸಲು ಪ್ರಾರಂಭಿಸುತ್ತಾನೆ. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.


ಬದಲಾಗುವ ಕಾಲಮಾನ

ರಥಸಪ್ತಮಿ ದಿನದಿಂದ ಶಿಶಿರ ಋತುವಿನ ಚಳಿ ಕಳೆದು ಬೇಸಿಗೆಯ ಝಳ ಪ್ರಾರಂಭವಾಗುತ್ತದೆ. ನಭೋಮಂಡಲದಲ್ಲಿನ ಈ ಸಹಜ ಪ್ರಕ್ರಿಯೆ ಭೂಮಂಡಲದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಸೂರ್ಯ ಮತ್ತು ವಾಯುವಿನ ಮಾರ್ಗಸ್ವಭಾವದಿಂದ ವಾತಾವರಣದಲ್ಲಿ ಉಷ್ಣ, ತೀಕ್ಷ್ಣ ಮತ್ತು ಶುಷ್ಕತೆಗಳು ವೃದ್ಧಿಯಾಗಿ ಭೂಮಿಯ ಸೌಮ್ಯಗುಣ ನಾಶವಾಗುತ್ತದೆ. ಇದರ ಪರಿಣಾಮ ಮಾನವನ ದೇಹದ ಬಲ ಕುಗ್ಗುತ್ತದೆ. ಬೇಸಿಗೆಯ ತಾಪದಿಂದ ಉಂಟಾಗಲಿರುವ ಈ ಎಲ್ಲ ಉಪದ್ರವಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಉಪಯೋಗವಾಗುವ ಒಂದು ವಿಶಿಷ್ಟ ಮಾರ್ಗೋಪಾಯವೇ ರಥಸಪ್ತಮಿ ಆಚರಣೆ.


ವ್ರತದ ವೈಶಿಷ್ಟ್ಯ

ರಥಸಪ್ತಮಿಯಂದು ಅಭ್ಯಂಗ ಸ್ನಾನ ಮಾಡುತ್ತಾರೆ. ಅಂದು ಶರೀರದ ವಿವಿಧ ಭಾಗಗಳ ಮೇಲ್ಭಾಗದಲ್ಲಿ (ತಲೆ, ಭುಜ, ಬೆನ್ನು ಮತ್ತು ಮಂಡಿ) ಎಕ್ಕದ ಎಲೆಯನ್ನು ಇಟ್ಟುಕೊಂಡು ಸೂರ್ಯಮಂತ್ರವನ್ನು ಹೇಳಿಕೊಳ್ಳುತ್ತಾ ಸ್ನಾನ ಮಾಡುತ್ತಾರೆ. ಸ್ನಾನ ಮಾಡಿದ ನಂತರ ಸೂರ್ಯನನ್ನು ಪೂಜಿಸುತ್ತಾರೆ. ಎಕ್ಕದ ಎಲೆಯ ಮೇಲೆ ಮೊಸರು ಅನ್ನವನ್ನು ಎಡೆಯನ್ನಾಗಿ ಇಡುತ್ತಾರೆ. ನಂತರ ಇದನ್ನು ಪ್ರಸಾದ ರೂಪದಲ್ಲಿ ಸೇವಿಸುವ ಸಂಪ್ರದಾಯ ಕೆಲವೆಡೆ ಇದೆ. ಮತ್ತೆ ಕೆಲವರು ಅಭ್ಯಂಗ ಸ್ನಾನ ಮಾಡಿದ ನಂತರ ಸೂರ್ಯಸ್ವರೂಪಿಯಾದ ಎಕ್ಕದ ಗಿಡವನ್ನು ಪೂಜಿಸುತ್ತಾರೆ.


ಎಕ್ಕದ ಗಿಡದ ಮಹತ್ವ

ಭಾರತೀಯ ವೈದ್ಯ ಪದ್ಧತಿಯಲ್ಲಿ ಒಂದು ಅಪೂರ್ವ ವನಸ್ಪತಿ ಎಂದು ಪ್ರಸಿದ್ಧ ಪಡೆದಿರುವ ಎಕ್ಕದ ಗಿಡ ಧಾರ್ಮಿಕವಾಗಿಯೂ ಒಂದು ಜನಪ್ರಿಯ ಪೂಜ್ಯನೀಯ ಸಸ್ಯವಾಗಿದೆ. ಸಂಸ್ಕೃತದಲ್ಲಿ ಊರ್ಯಹ್ವಯ, ವಿಕರಣ, ರವಿ, ಭಾಸ್ಕರ, ಅರ್ಕ ಮುಂತಾದ ಅನ್ವರ್ಥ ಹೆಸರುಗಳಿಂದ ಕರೆಯಲ್ಪಡುತ್ತದೆ. ಇದು ಉಷ್ಣ, ತೀಕ್ಷ್ಣ ಹಾಗೂ ಕ್ಷಾರ ಗುಣಗಳಿಂದ ಕೂಡಿದೆ. ವಾತ–ಕಫ ದೋಷಗಳನ್ನು ನಿವಾರಣೆ ಮಾಡುತ್ತದೆ. ನೋವು ನಿವಾರಕವಾಗಿದೆ. ಕೆಮ್ಮು, ಮೂಲವ್ಯಾಧಿ, ಕೀಲುನೋವು, ಚರ್ಮರೋಗ, ಯಕೃತ್ ರೋಗ ಮುಂತಾದ ಅನೇಕ ರೋಗಗಳಿಗೆ ಉತ್ತಮ ಔಷಧವಾಗಿದೆ.


ಎಕ್ಕದ ಗಿಡವನ್ನು ಸೂರ್ಯನ ಪ್ರತಿನಿಧಿಯನ್ನಾಗಿ ಪೂಜಿಸುತ್ತಾರೆ. ಅಂಬಾಸುತನಿಗೆ ಪ್ರಿಯವಾದ ಎಕ್ಕದ ಗಿಡದಲ್ಲಿ ಗಜಮುಖನು ವಾಸಿಸುತ್ತಾನೆ ಎಂಬ ನಂಬಿಕೆಯಿದೆ. ಸೂರ್ಯನಂತೆ ಉಷ್ಣ, ತೀಕ್ಷ್ಣ ಗುಣಗಳುಳ್ಳ ಅರ್ಕ ಅಥವಾ ಎಕ್ಕೆಗಿಡದ ಎಲೆಗಳನ್ನು ಬೇಸಿಗೆಯ ಪ್ರಾರಂಭ ದಿನವಾದ ರಥಸಪ್ತಮಿಯಂದು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಅಭ್ಯಂಗ ಸ್ನಾನದ ಸಮಯದಲ್ಲಿ ಉಪಯೋಗಿಸುತ್ತಾರೆ. ಬೇಸಿಗೆಯ ಬಿಸಿಲಿನ ಝಳದ ಪ್ರಭಾವದಿಂದ ಆರೋಗ್ಯ ರಕ್ಷಿಸಿಕೊಳ್ಳುವ ಪೂರ್ವಸಿದ್ಧತೆಯೇ ರಥಸಪ್ತಮಿ ವ್ರತದ ಮಹತ್ವ.


ವ್ರತಾಚರಣೆ

ಸೂರ್ಯನ ೧೦೮ ಹೆಸರುಗಳನ್ನು ಉಚ್ಛರಿಸಿ ನಮಸ್ಕಾರ ಮಾಡುತ್ತಾರೆ. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಸೂರ್ಯಮಂತ್ರ ಪಠಿಸಿ ನಮಸ್ಕಾರ ಮಾಡುತ್ತಾರೆ. ೧೦೮ ಆಗದಿದ್ದವರು ೧೨ ನಾಮಗಳನ್ನಾದರೂ ಜಪಿಸಿ ನಮಸ್ಕಾರ ಮಾಡುವ ಪದ್ಧತಿಯಿದೆ. ಇವುಗಳು – ಇಂದ್ರ, ವಿಧಾತ, ಪರ್ಜನ್ಯ, ತ್ವಷ್ಟ, ಪೂಷನ್, ಆರ್ಯಮ, ಭಾಗ, ವಿವಸ್ವಾನ್, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳನ್ನು ಸೂಚಿಸುತ್ತವೆ.


ಅಕ್ಷಯ ಪಾತ್ರೆ

ದ್ವಾಪರಯುಗದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ವ್ರತವನ್ನು ಬೋಧಿಸುತ್ತಾನೆ. ಈ ವ್ರತಕ್ಕೆ ಹಿನ್ನೆಲೆಯಾಗಿ ಯಶೋವರ್ಮ ರಾಜನ ಕಥೆಯನ್ನು ಹೇಳುತ್ತಾನೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಹುಟ್ಟಿನಿಂದಲೇ ರೋಗಿಷ್ಟನಾಗಿರುತ್ತಾನೆ. ಸಂಚಿತ ಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸುವಂತೆ ಕುಲಪುರೋಹಿತರು ಹೇಳುತ್ತಾರೆ. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಿದಾಗ ರಾಜಕುಮಾರನು ಆರೋಗ್ಯವಂತನೂ ಪ್ರಭಾವಶಾಲಿಯೂ ಆಗುತ್ತಾನೆ. ಇದನ್ನು ಹೇಳಿ ಕೃಷ್ಣನು ಪಾಂಡವರಿಗೆ ದ್ರೌಪದೀ ಸಹಿತವಾಗಿ ಸೂರ್ಯಾರಾಧನೆ ಮಾಡುವಂತೆ ಸೂಚಿಸುತ್ತಾನೆ. ಅದರಂತೆ ಸೂರ್ಯೋಪಾಸನೆ ಮಾಡಿದ ಪಾಂಡವರು ಎಂದಿಗೂ ಬರಿದಾಗದ ಅಕ್ಷಯಪಾತ್ರೆಯನ್ನು ವರವಾಗಿ ಪಡೆಯುತ್ತಾರೆ.


ರಥಸಪ್ತಮಿಯ ದಿನ ಸೂರ್ಯನಿಗೆ ನಮಸ್ಕಾರ ಮತ್ತು ಸೂರ್ಯಾರಾಧನೆ ದೇಶದಾದ್ಯಂತ ನಡೆಯುತ್ತದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಸೂರ್ಯ ದೈವಸ್ವರೂಪಿ – ಶ್ರೀಮನ್ನಾರಾಯಣನ ಅಂಶವೇ. ಅದರಿಂದಲೇ ಆತ ಸೂರ್ಯನಾರಾಯಣ. ಸೂರ್ಯನೆಂದರೆ ಬೆಳಕು, ತೇಜಸ್ಸು, ಚೈತನ್ಯ, ಜೀವಂತಿಕೆಯ ಸ್ವರೂಪ. ಇದು ವೈಜ್ಞಾನಿಕವಾಗಿಯೂ ವೈದ್ಯಕೀಯ ಕ್ಷೇತ್ರದಲ್ಲಿಯೂ ನಿರೂಪಿತವಾಗಿದೆ.


ರಥಸಪ್ತಮಿಯು ಮಾಘಮಾಸದ ಏಳನೆಯ ದಿನ ಬರುತ್ತದೆ. ಆ ದಿನ ಸೂರ್ಯನಾರಾಯಣನು ಏಳು ಅಶ್ವಗಳನ್ನು ಹೊಂದಿದ ತನ್ನ ರಥದಲ್ಲಿ ಕುಳಿತು ಉತ್ತರಾಭಿಮುಖವಾಗಿ ಪ್ರಯಾಣ ಮಾಡುತ್ತಾನೆಂದು ಹೇಳುತ್ತಾರೆ. ಕೋನಾರ್ಕ್‌ನ ಸೂರ್ಯ ದೇವಾಲಯ, ಲಕ್ಕುಂಡಿಯ ಸೂರ್ಯನಾರಾಯಣ ದೇವಾಲಯ ಹಾಗೂ ಯಡತೊರೆಯ (ಈಗಿನ ಕೆ.ಆರ್.ನಗರ, ಮೈಸೂರಿನ ಸಮೀಪ) ಅರ್ಕೇಶ್ವರ ದೇವಾಲಯಗಳಲ್ಲಿ ರಥಸಪ್ತಮಿಯ ದಿನ ವಿಶೇಷ ಉತ್ಸವಗಳು ನಡೆಯುತ್ತವೆ.



ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು
9739369621


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top