500 ಕಿ.ಮೀ ಕ್ರಮಿಸಿ 25 ನೇ ದಿನಕ್ಕೆ ಕಾಲಿರಿಸಿದ ಡಾ.ಪ್ರಣವಾನಂದ ಶ್ರೀಗಳ ಪಾದಯಾತ್ರೆ
ಚಿತ್ರದುರ್ಗ: ಕರಾವಳಿಯ ಶಾಸಕರಿಗೆ ಈಡಿಗ- ಬಿಲ್ಲವ ಸಮಾಜದ ಋಣ ಅಧಿಕವಾಗಿದ್ದು ನಾನು ಕೂಡ ಬಿಲ್ಲವ ಸೇರಿದಂತೆ ಎಲ್ಲ ಸಮಾಜದ ಮತಗಳಿಂದ ಶಾಸಕನಾಗಿದ್ದೇನೆ. ಅಂತಹ ದೊಡ್ಡ ಋಣ ನನ್ನ ತಲೆಯ ಮೇಲಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.
ಡಾ. ಪ್ರಣವಾನಂದ ಶ್ರೀಗಳ 700 ಐತಿಹಾಸಿಕ ಪಾದಯಾತ್ರೆಯು 25ನೇ ದಿನಕ್ಕೆ ಚಿತ್ರದುರ್ಗ ತಲುಪಿದ್ದು ಇಲ್ಲಿನ ಪೊಲೀಸ್ ಭವನದಲ್ಲಿ ಶುಕ್ರವಾರ ನಡೆದ ಸಮಾಜ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಡಾ ಪ್ರಣವಾನಂದ ಶ್ರೀಗಳ ಪಾದಯಾತ್ರೆಯಲ್ಲಿ ಆಗ್ರಹಿಸಿದ 18 ಬೇಡಿಕೆಗಳು ನ್ಯಾಯೋಚಿತವಾಗಿದ್ದು ಸರಕಾರ ತಕ್ಷಣ ಸ್ಪಂದಿಸಬೇಕು. ಈಡಿಗ ನಿಗಮಕ್ಕೆ 500 ಕೋಟಿ ರೂ. ಅನುದಾನ ಘೋಷಣೆ, ಬ್ರಹ್ಮಶ್ರೀ ನಾರಾಯಣ ಗುರು ಮೂರ್ತಿಸ್ಥಾಪನೆ, ಮಂಗಳೂರು ವಿಶ್ವವಿದ್ಯಾಲಯಕ್ಕೆ ನಾರಾಯಣ ಗುರುಗಳ ಹೆಸರನ್ನಿಟ್ಟು ಪುನರ್ ನಾಮಕರಣ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಸೇರಿದಂತೆ 18 ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಾಗಿದೆ. ಸನ್ಯಾಸಿಗಳು ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ದುಡಿಯುವ ಸಂತ ರಾಗಿದ್ದು ಸರಕಾರವು ಪಾದಯಾತ್ರೆಯನ್ನು ಮುಂದುವರಿಸದಂತೆ ಸ್ವಾಮೀಜಿಯವರ ಜೊತೆಗೆ ಮಾತುಕತೆ ನಡೆಸಬೇಕು ಎಂದು ಗುರ್ಮೆ ಸುರೇಶ್ ಶೆಟ್ಟಿ ಒತ್ತಾಯಿಸಿದರು. ಸಮಾಜದ ಹಿರಿಯ ನಾಯಕರಾದ ಕಾರ್ಕಳ ಸುನಿಲ್ ಕುಮಾರ್ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಡಾ ಪ್ರಣವಾನಂದ ಶ್ರೀಗಳು ಮಾತನಾಡಿ, ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಪಡೆಯಲು ಈ ಪಾದಯಾತ್ರೆಯನ್ನು ಕೈಗೊಳ್ಳಲಾಗಿದೆ. ಈ ಸಮಾಜದ ಬಗ್ಗೆ ಅತೀವ ಕಾಳಜಿ ವಹಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಳೆದ ವಿಧಾನಸಭಾ ಅಧಿವೇಶದ ಸಂದರ್ಭದಲ್ಲಿ ನಿಗಮಕ್ಕೆ 500 ಕೋಟಿ ಅನುದಾನ ನೀಡುವಂತೆ ಹಾಗೂ ಸಮಾಜಕ್ಕೆ ಸೌಲಭ್ಯಗಳನ್ನು ಕಲ್ಪಿಸುವಂತೆ ಧ್ವನಿ ಎತ್ತಿದ ಏಕೈಕ ಶಾಸಕ. ಮುಂದಿನ ಬಾರಿ ಚುನಾವಣೆಯಲ್ಲಿ ಮಂತ್ರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸ್ವಕುಳ ಸಾಲಿ ಸಮಾಜದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಮಾದಿಗ ಸಮುದಾಯದ ಶ್ರೀ ಶಿವಮೂರ್ತಿ ಸ್ವಾಮೀಜಿ, ನಾಯಕನಹಟ್ಟಿ ಬೋವಿ ಗುರುಮಠದ ಶ್ರೀ ಬಸವ ಗುರುಲಿಂಗಸ್ವಾಮಿ,ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಈಡಿಗ ಸಮಾಜದ ಮರಿಸ್ವಾಮಿ ಶ್ರೀ ಶರಣಬಸವ ವೇದ ಪ್ರಕಾಶ ಸ್ವಾಮೀಜಿ, ಚಲವಾದಿ ಮಠದ ಶ್ರೀ ಬಸವ ದೇವನಾಗಿ ಶರಣರು, ಈಡಿಗ ಮಹಾಮಂಡಳಿ ರಾಜ್ಯ ಅಧ್ಯಕ್ಷ ತಿಪ್ಪೇಶ್, ಚಿತ್ರದುರ್ಗ ತಾಲೂಕ ಈಡಿಗ ಸಂಘದ ಅಧ್ಯಕ್ಷ ಜಗದೀಶ್ ಮತ್ತು ಬಿಲ್ಲವ ಮುಖಂಡ ಪ್ರವೀಣ್ ಜತ್ತನ್ ಮತ್ತು ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯ ಮುಖಂಡರು ಕೂಡ ಪಾಲ್ಗೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಮಾದನಾಯಕನಹಳ್ಳಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯು ಗುಡ್ಡದ ರಂಗನಹಳ್ಳಿ ಮೂಲಕ ಚಿತ್ರದುರ್ಗ ಪಟ್ಟಣವನ್ನು ಪ್ರವೇಶಿಸಿತು. ಸ್ವಾಮೀಜಿಯವರ 25ನೇ ದಿನದ ಪಾದಯಾತ್ರೆಯು ಚಿತ್ರದುರ್ಗ ತಲುಪಿ 500 ಕಿ.ಮೀ ಯಶಸ್ವಿಯಾಗಿ ಪೂರ್ಣಗೊಳಿಸಿದಂತಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


