ಭಗವದ್ಗೀತೆ ಮತ್ತು ಶಿಕ್ಷಣ : ವೀಣಾ ಬನ್ನಂಜೆ ಅವರಿಂದ ವಿಶೇಷ ಉಪನ್ಯಾಸ
ಚಿತ್ರ: ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ “ಭಗವದ್ಗೀತೆ ಮತ್ತು ಶಿಕ್ಷಣ” ಬಗ್ಯೆ ವಿಶೇಷ ಉಪನ್ಯಾಸ ನೀಡಿದರು.
ಉಜಿರೆ: ಪ್ರಾಚೀನ ಕಾಲದ ಗುರುಕುಲ ಶಿಕ್ಷಣಪದ್ಧತಿಗೂ, ಆಧುನಿಕ ಶಿಕ್ಷಣ ಪದ್ಧತಿಗೂ ಅಜಗಜಾಂತರವಿದೆ. ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಬಾರದು ಎಂದು ಹೇಳುವ ಎಲ್ಲವನ್ನೂ ಬಲ್ಲವರೆಂಬ ಸ್ವಯಂಘೋಷಿತ ಬುದ್ಧಿಜೀವಿಗಳು ಮೂರ್ಖರು ಎಂದು ಖ್ಯಾತ ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕನ್ನಡ ವಿಭಾಗದ ಆಶ್ರಯದಲ್ಲಿ ಕೀರ್ತಿಶೇಷ ಡಾ. ಬಿ. ಯಶೋವರ್ಮ ಸ್ಮರಣಾರ್ಥ ಆಯೋಜಿಸಿದ “ಅರಿವಿನ ದೀವಿಗೆ” ಕಾರ್ಯಕ್ರಮದಲ್ಲಿ “ಭಗವದ್ಗೀತೆ ಮತ್ತು ಶಿಕ್ಷಣ” ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಬ್ದದ ಉತ್ಪತ್ತಿ, ವ್ಯಾಕರಣ, ಛಂದಸ್ಸು, ಭೂಗರ್ಭಶಾಸ್ತ್ರ, ರಾಶಿವಿದ್ಯೆ, ಕ್ಷಾತ್ರವಿದ್ಯೆ, ವೇದಗಳು, ಉಪನಿಷತ್ತುಗಳು, ಗಂಧರ್ವವಿದ್ಯೆಯನ್ನು ಕಲಿಸುತ್ತಿದ್ದರು. ಆದರೆ ಇಂದು ಪಾಶ್ಚಾತ್ಯ ಶಿಕ್ಷಣಪದ್ಧತಿಯ ಅಂಧಾನುಕರಣದಿಂದ ಗುರುಮುಖೇನ ಕಲಿಯುವ ವಿದ್ಯೆ ಕೇವಲ ಉದ್ಯೋಗ, ಹಣ ಮತ್ತು ಕೀರ್ತಿ ಸಂಪಾದನೆಗಾಗಿ ಪರೀಕ್ಷಾ ಕೇಂದ್ರಿತ ಅಂಕಗಳಿಗಾಗಿ ಒತ್ತಡದ ಶಿಕ್ಷಣವಾಗಿದೆ. ಸ್ಮರಣಶಕ್ತಿಗಾಗಿ ಕೇವಲ ಗಿಳಿ ಬಾಯಿಪಾಠ ಬದುಕಿಗೆ ಪ್ರಯೋಜನವಿಲ್ಲ. ಆತ್ಮ, ಜೀವ ಮತ್ತು ಜೀವನಕ್ಕೆ ಸಂಬAಧಿಸಿದ ಶಿಕ್ಷಣ ಅಗತ್ಯ. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ಬಗ್ಯೆ ಓದದೆ “ರೈಲು” ಬಿಡುವವರ ಕೆಟ್ಟ ಪರಂಪರೆ ಬೆಳೆಯುತ್ತಿದೆ ಎಂದು ಅವರು ವಿಷಾದಿಸಿದರು.
ಕರ್ತವ್ಯದ ದೃಷ್ಟಿಯಿಂದ ಸೋಲು-ಗೆಲುವಿನ ಬಗ್ಯೆ ಚಿಂತಿಸದೆ, ಪ್ರತಿಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಗುರುವು ಶಿಷ್ಯನ ದೌರ್ಬಲ್ಯಗಳನ್ನು ಗುರುತಿಸಿ, ಆತನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಬೇಕು. ಶಿಷ್ಯರಲ್ಲಿಯೂ ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆ ಇರಬೇಕು. “ನಾನು” ಎಂಬ ಅಂಹಕಾರ, ಮಮಕಾರ ತ್ಯಜಿಸಬೇಕು.
ಕ್ರೀಡೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಆರೋಗ್ಯಭಾಗ್ಯ ರಕ್ಷಣೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ತಂದೆ-ತಾಯಿ ಮತ್ತು ಗುರುಗಳು ಮಕ್ಕಳ ಆಸಕ್ತಿ, ಪ್ರತಿಭೆ ಮತ್ತು ಹವ್ಯಾಸಗಳನ್ನು ಗುರುತಿಸಿ ಪ್ರೊತ್ಸಾಹಿಸಿದಾಗ ಮಾತ್ರ ಶಿಕ್ಷಣದ ಮೂಲಕ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಧ್ಯಾನ, ಭಕ್ತಿಯ ಮೂಲಕ ಪರಮ ಸತ್ಯಗಳನ್ನು ಸೋತವರಿಗೆ ತಿಳಿಸಿದಾಗ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಭಗವದ್ಗೀತೆ, ವೇದ, ಪುರಾಣಗಳನ್ನು ಅಧ್ಯಯನ ಮಾಡಿ ರಾಮ, ಕೃಷ್ಣರಂತಹ ಮಹಾಪುರುಷರ ಸದ್ಗುಣಗಳನ್ನು ನಾವು ಅನುಷ್ಠಾನಗೊಳಿಸಿದಾಗ ಜೀವನ ಪಾವನವಾಗುತ್ತದೆ. ತನ್ಮೂಲಕ ಲೋಕಕಲ್ಯಾಣವಾಗುತ್ತದೆ ಎಂದು ವೀಣಾ ಬನ್ನಂಜೆ ಹೇಳಿದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್ವರ್ಮ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಡಾ. ಪ್ರದೀಪ್ ನಾವೂರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
ಡಾ. ಶ್ರೀಧರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮ ಸಂಯೋಜಕ ಡಾ. ದಿವ ಕೊಕ್ಕಡ ಉಪಸ್ಥಿತರಿದ್ದು ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


