ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ನಿನಾದ 90.4 ಎಫ್ಎಂನಲ್ಲಿ ಕೊಂಕಣಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ಕುರಿತು ಸಮಾಲೋಚನಾ ಸಭೆ ಡಿ.15ರಂದು ಕಾಲೇಜಿನಲ್ಲಿ ನಡೆಯಿತು.
ಸೈಂಟ್ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯ ಸಮುದಾಯ ಬಾನುಲಿ ಸಾರಂಗ್ ಸಮುದಾಯ ಪ್ರತಿನಿಧಿ ಎಡ್ವರ್ಡ್ ಲೋಬೊ ತೊಕ್ಕೊಟ್ಟು ಅವರು ಮಾತನಾಡಿ, ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿಯಲ್ಲಿ ಕೊಂಕಣಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಕೊಂಕಣಿ ಭಾಷೆ ಮಾತನಾಡಬಲ್ಲ ಸ್ಥಳೀಯ ವ್ಯಾಪಾರಿಗಳು, ಕಲಾವಿದರು, ಹಾಡುಗಾರರು, ಸಾಹಿತ್ಯ ಬರಹಗಾರರು ವೈವಿಧ್ಯಮಯ ಕಾರ್ಯಕ್ರಮ ನೀಡುವ ಮೂಲಕ ಸಮುದಾಯ ಬಾನುಲಿಯೊಂದಿಗೆ ಕೈಜೋಡಿಸಬೇಕು ಎಂದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಮಾತನಾಡಿ, ಅಪರೂಪವಾಗಿರುವ ಕೊಂಕಣಿ ಶಬ್ದಗಳು, ಕೊಂಕಣಿ ಸಂಗೀತ ರಸಮಂಜರಿಗಳು ಜನರನ್ನು ಹೆಚ್ಚು ತಲುಪಲು ಸಾಧ್ಯವಿದೆ. ಈ ಮೂಲಕ ಕೊಂಕಣಿ ಸಮುದಾಯದ ಸಾಂಸ್ಕೃತಿಕ ಅವಲೋಕನಕ್ಕೆ ಒತ್ತು ನೀಡಬೇಕೆಂದರು.
ಎಸ್.ಡಿ.ಎಂ. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಬಿ. ಗಣೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಜೊತೆಗೆ ಕೊಂಕಣಿ ಭಾಷೆಯಲ್ಲಿರುವ ವೈವಿಧ್ಯಮಯ ವಿಚಾರಗಳನ್ನು ಪ್ರಸ್ತುತಪಡಿಸಲು ಉತ್ತಮ ವೇದಿಕೆ ಎಂದರು.
ಸಭೆಯಲ್ಲಿ ಉಜಿರೆ ಗ್ರಾ.ಪಂ. ಸದಸ್ಯೆ ಜಾನೆಟ್ ರೋಡ್ರಿಗಸ್, ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಪ್ಲಾವಿಯ ಪೌಲ್, ಎಸ್.ಡಿ.ಎಂ. ಕಾಲೇಜಿನ ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಲೀಡಿಯಾ ಅವರು ಸಲಹೆ, ಸೂಚನೆ ನೀಡಿದರು.
ರೇಡಿಯೋ ನಿನಾದ ಕಾರ್ಯಕ್ರಮ ಸಂಯೋಜಕ ವಿ.ಕೆ. ಕಡಬ ಸ್ವಾಗತಿಸಿ, ವಂದಿಸಿದರು.
ಪ್ರಸ್ತುತ ರೇಡಿಯೋದಲ್ಲಿ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ.
ಕೊಂಕಣಿ ಕಾರ್ಯಕ್ರಮ ನೀಡಲು ಅವಕಾಶ:
ರೇಡಿಯೋ ನಿನಾದ 90.4 FM ನಲ್ಲಿ ಕೊಂಕಣಿ ಕಾರ್ಯಕ್ರಮ ನೀಡಲು ಅವಕಾಶವಿದೆ. ಬೆಳ್ತಂಗಡಿ ತಾಲೂಕಿನ ಕೊಂಕಣಿ ಭಾಷೆ ಬಲ್ಲ ಆಸಕ್ತರು ಹಾಡು, ಸಂದರ್ಶನ, ಅನುಭವ, ಸಾಂಸ್ಕೃತಿಕ ವೈವಿಧ್ಯ, ಕಥೆ, ಕವನ ಪ್ರಸ್ತುತಪಡಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ಸಂಯೋಜಕ ವಿ.ಕೆ. ಕಡಬ ಅವರನ್ನು 9686392283 ಮೂಲಕ ಸಂಪರ್ಕಿಸಬಹುದಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpg)
