- ಬಾಂಗ್ಲಾದೇಶದ ವ್ಯವಹಾರಗಳ ಮೇಲೆ ಭಾರತ ನಿರ್ಬಂಧ ಹೇರಬೇಕು
- ಮತಾಂಧ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಹಿಂದೂ ಸಂಘಟನೆಗಳ ಬೇಡಿಕೆ
ಬೆಂಗಳೂರು: ಬಾಂಗ್ಲಾದೇಶದ ಮೈಮನ್ಸಿಂಗ್ ಪ್ರದೇಶದಲ್ಲಿ ಹಿಂದೂ ದೀಪು ಚಂದ್ರ ದಾಸ್ ಅವರನ್ನು ಮತೀಯ ಗುಂಪೊಂದು ಮರಕ್ಕೆ ಕಟ್ಟಿಹಾಕಿ ಜೀವಂತವಾಗಿಯೇ ಬೆಂಕಿಗೆ ಆಹುತಿಗೊಳಿಸಿದೆ. ಜೊತೆಗೆ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ಅವರ ಮನೆಗಳು ಹಾಗೂ ಅಂಗಡಿಗಳನ್ನು ಸುಡಲಾಗುತ್ತಿದೆ. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಾಂಗ್ಲಾದೇಶದ ಹೈ ಕಮಿಷನರ್ ಅವರ ಹೆಸರಿನಲ್ಲಿ ಕ್ರಮಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷರಾದ ಸುಂದ್ರೇಶ್ ನರ್ಗಲ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ, ಶ್ರೀರಾಮ ಸೇನೆ ನಗರ ಅಧ್ಯಕ್ಷರಾದ ಮಂಜುನಾಥ, ದುರ್ಗಾ ಸೇನೆಯ ಸೌ. ಸರಸ್ವತಿ ಪ್ರವೀಣ, ಮಲ್ಲಿಕಾರ್ಜುನ ರಾಜು, ವಕೀಲರಾದ ಕೆ ಕೃಷ್ಣಸ್ವಾಮಿ ಮುಂತಾದವರು ಉಪಸ್ಥಿತಿ ಇದ್ದರು.
ಮನವಿ ಪತ್ರದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರವನ್ನು ತಡೆಯಲು ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ಆರ್ಥಿಕ, ವ್ಯಾಪಾರಿಕ ಹಾಗೂ ರಾಜಕೀಯ ನಿರ್ಬಂಧಗಳನ್ನು ವಿಧಿಸಬೇಕೆಂದು ಬೇಡಿಕೆ ಇಡಲಾಗಿದೆ. ಜೊತೆಗೆ ಬಾಂಗ್ಲಾದೇಶದ ಉಗ್ರ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ. ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಮೇಲೆ ಢಾಕಾದಲ್ಲಿ ಗುಂಡಿನ ದಾಳಿ ನಡೆದಿದೆ. ಅವರ ಮರಣದ ನಂತರ ಹಿಂದೂ ಸಮಾಜದ ವಿರುದ್ಧ ಸಂಯೋಜಿತ ಹಿಂಸಾಚಾರ ಆರಂಭವಾಗಿದೆ. ಹಿಂದೂ ಮನೆಗಳು, ಅಂಗಡಿಗಳು ಮತ್ತು ದೇವಸ್ಥಾನಗಳನ್ನು ಗುರಿಯಾಗಿಸಲಾಗುತ್ತಿದೆ. ನೇರ ವಿಡಿಯೋಗಳು, ಸಾಕ್ಷ್ಯಗಳು ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳು ಸತ್ಯವನ್ನು ಬಹಿರಂಗಪಡಿಸಿವೆ. ಆದರೂ ಬಾಂಗ್ಲಾದೇಶ ಸರ್ಕಾರ ಕ್ರಮ ಕೈಗೊಳ್ಳುವುದನ್ನು ತಪ್ಪಿಸುತ್ತಿದೆ. ಜನಗಣನೆಯ ಪ್ರಕಾರ 1941ರಲ್ಲಿ 28% ಇದ್ದ ಹಿಂದೂ ಜನಸಂಖ್ಯೆ ಈಗ ಕೇವಲ 7.8% ಮಾತ್ರ ಉಳಿದಿದೆ. ಇದು ಹಿಂದೂ ನಿರ್ಮೂಲನೆಯ ಪ್ರಕ್ರಿಯೆಯಾಗಿದೆ.
ಮನವಿ ಪತ್ರದಲ್ಲಿ ಭಾರತ-ಬಾಂಗ್ಲಾದೇಶ ಒಪ್ಪಂದದ ಮೂಲಕ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ, ಸಂಯುಕ್ತ ರಾಷ್ಟ್ರಗಳು ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ ವಿಷಯವನ್ನು ಎತ್ತಿ ಹಿಡಿದು ಫ್ಯಾಕ್ಟ್-ಫೈಂಡಿಂಗ್ ಮಿಷನ್ ನಡೆಸುವುದು, ಹಿಂಸೆಗೆ ಒಳಗಾದ ಹಿಂದೂಗಳಿಗೆ ನಾಗರಿಕತೆ ಹಾಗೂ ಪುನರ್ವಸತಿ ನೀತಿ, ದೇವಸ್ಥಾನಗಳು ಮತ್ತು ಧಾರ್ಮಿಕ ಆಸ್ತಿಗಳ ಸಂಯುಕ್ತ ಸಮೀಕ್ಷೆ, ಬಾಂಗ್ಲಾದೇಶದ ಹಿಂದೂ ಸಮಾಜದೊಂದಿಗೆ ನೇರ ಸಂವಹನ ವ್ಯವಸ್ಥೆ ಇತ್ಯಾದಿ ಬೇಡಿಕೆಗಳು ಸೇರಿವೆ. ವಿಶ್ವದ ಅತಿದೊಡ್ಡ ಹಿಂದೂ ಬಹುಸಂಖ್ಯಾತ ದೇಶವಾಗಿರುವ ಭಾರತವು, ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗಾಗಿ ರಾಜಕೀಯ, ಕಾನೂನು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

