ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಿಂದ ರಾಜ್ಯಾದ್ಯಂತ 8 ದಿನಗಳ ಶಿಬಿರ
ರಾಜ್ಯದ 236 ತಾಲೂಕುಗಳಲ್ಲಿ ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ
ನವೆಂಬರ್ 18ರ ವರೆಗೆ ಏಕಕಾಲದಲ್ಲಿ ನಡೆಯುತ್ತಿರುವ ಶಿಬಿರ
ಉಜಿರೆ: 8 ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಎಸ್.ಡಿ.ಎಂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ನೆರವಿನೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ಆಯುಷ್ ಮಂತ್ರಾಲಯ ಭಾರತ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಬೆಂಗಳೂರು, ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳು ಸೇರಿದಂತೆ ಭಾರತೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದವೀಧರರ ಸಂಘ (ಇನಿಗ್ರಾ) ಇಂಡಿಯಾ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಎಂಟು ದಿನಗಳ ಉಚಿತ ಪ್ರಕೃತಿ ಚಿಕಿತ್ಸಾ ಮತ್ತು ಆರೋಗ್ಯ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.
ನವೆಂಬರ್ 10 ರಿಂದ ಆರಂಭವಾಗಿರುವ ಉಚಿತ ಪ್ರಕೃತಿ ಚಿಕಿತ್ಸಾ ಮತ್ತು ಆರೋಗ್ಯ ಜಾಗೃತಿ ಶಿಬಿರವು ದಿನಾಂಕ 18 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳು ಸೇರಿದಂತೆ 236 ತಾಲೂಕುಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ. ಈಗಾಗಲೇ ಪ್ರತೀ ಜಿಲ್ಲೆಯನ್ನು ತಲುಪಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳ ತಂಡವು 200ಕ್ಕೂ ಅಧಿಕ ತಾಲೂಕುಗಳಲ್ಲಿ ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸಿದೆ.
ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆಯ ಪಂಚಸೂತ್ರಗಳು ಎಂಬ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ದಿನಕ್ಕೆ 2 ರಿಂದ 3 ಲೀಟರ್ ನೀರು ಸೇವನೆ, ಪ್ರತಿದಿನ ಒಂದು ಗಂಟೆ ವ್ಯಾಯಾಮ, ವಾರದಲ್ಲಿ ಒಮ್ಮೆ ಉಪವಾಸ, ದಿನಕ್ಕೆ ಎರಡು ಬಾರಿ ಪ್ರಾರ್ಥನೆ, ದಿನಕ್ಕೆ ಎರಡು ಭೋಜನದಂತಹ ಆರೋಗ್ಯ ಸಲಹೆಗಳನ್ನು ಪ್ರತಿ ಶಿಬಿರಗಳಲ್ಲಿ ತಂಡವು ಆರೋಗ್ಯ ಜಾಗೃತಿಯನ್ನು ಮೂಡಿಸುತ್ತಿದೆ. ಸುಮಾರು 500ಕ್ಕೂ ಹೆಚ್ಚಿನ ವೈದ್ಯರ ತಂಡ ಈ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಗ್ರಾಮೀಣ ಜನರಿಗೆ ಶಿಬಿರವು ಫಲಕಾರಿಯಾಗಲಿದೆ. ಅದರಂತೆ ಅನೇಕ ಜನ ಗಣ್ಯರು, ಚಿತ್ರ ನಟರು ಹಾಗು ರಾಜಕೀಯ ಮುಖಂಡರುಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಪ್ರಕೃತಿ ಚಿಕಿತ್ಸಾ ಶಿಬಿರಗಳಲ್ಲಿ ಉಪಚರಿಸುತ್ತಿರುವ ಕಾಯಿಲೆಗಳು :
- ಉಬ್ಬಸ, ನೇಸಲ್ ಅಲರ್ಜಿ, ಅತಿಶೀತ, ಕೆಮ್ಮು ಬ್ರಂಕೈಟಿಸ್, ರಕ್ತದೊತ್ತಡ, ಹೃದಯದ ತೊಂದರೆಗಳು
- ಮಧುಮೇಹ, ಸ್ಕೂಲಕಾಯ, ಥೈರೋಟಾಕ್ಸಿಕೋಸಿಸ್
- ಪಿತ್ತ ಕಾಮಾಲೆ, ಜಿರ್ಣಾಂಗದ ತೊಂದರೆಗಳು, ಭೇದಿ, ಆಮಶಂಕೆ
- ಚರ್ಮದ ಕಾಯಿಲೆಗಳು, ಸೋರಿಯಾಸಿಸ್, ಲೈಂಗಿಕ ಕಾಯಿಲೆಗಳು
- ತಲೆಸಿಡಿತ, ನಿದ್ರಾಹೀನತೆ, ಮಾನಸಿಕ ಉದ್ವೇಗ
- ನರಗಳ ದೌರ್ಬಲ್ಯ
- ಬೆನ್ನು ನೋವು, ಸಂಧಿವಾತ, ಪಕ್ಷವಾತ
"ಪ್ರಾಕೃತಿಕ ಚಿಕಿತ್ಸೆಯ ಕುರಿತು ನಮಗೆ ಈವರೆಗೆ ಯಾವುದೇ ಅರಿವಿರಲಿಲ್ಲ. ಈ ಶಿಬಿರದಲ್ಲಿ ಪಾಲ್ಗೊಂಡ ಬಳಿಕ ಸಹಜ ಆರೋಗ್ಯ ಸಮಸ್ಯೆಗಳನ್ನು ನಾವಾಗಿಯೇ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಮಾಹಿತಿ ದೊರಕಿದೆ. ಇಂತಹ ಶಿಬಿರಗಳು ಕಲ್ಯಾಣ ಕರ್ನಾಟಕದಂತಹ ಭಾಗಗಳಲ್ಲಿ ನಿಜಕ್ಕೂ ಅವಶ್ಯಕತೆ ಇತ್ತು. ಈ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಯಿಂದ ಸಾಕಾರವಾಗಿದೆ. ಇದು ಗ್ರಾಮೀಣ ಭಾಗದ ಜನರಿಗೆ ಬಹು ಉಪಯೋಗವಾಗಲಿದೆ."
- ಶೃತಿ, ಅಳಂದ ತಾಲೂಕು, ಕಲಬುರಗಿ
"ನಮ್ಮ ಮೇಲಿನ ಆರೋಗ್ಯದ ಕಾಳಜಿ ಮತ್ತು ಜವಾಬ್ದಾರಿಯನ್ನು ಈ ಶಿಬಿರದಿಂದ ಮತ್ತಷ್ಟು ಹೆಚ್ಚಿಸಿದ್ದಾರೆ. ದೇಹವನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಸದೃಢ ಮತ್ತು ಆರೋಗ್ಯದಿಂದ ಕಾಪಾಡಿಕೊಳ್ಳಬೇಕು ಎಂಬ ಅರಿವನ್ನು ನಮ್ಮ ಹಳ್ಳಿಗೆ ಬಂದು ಶ್ರೀ ಧರ್ಮಸ್ಥಳ ಸಂಸ್ಥೆಯ ತಂಡ ತಿಳಿಸಿದೆ. ಜಾಗೃತಿ ಮೂಡಿಸಿರುವ ಆರೋಗ್ಯದ ಸರಳ ಸೂತ್ರಗಳು ಎಳೆಯರಿಂದ ಇಳಿವಯಸ್ಸಿನ ವೃದ್ದರ ವರೆಗೂ ಉಪಕಾರಿ ಯಾಗಲಿದೆ."
- ಭಾಮೇಶ ಬಂಕಾಪುರ,ಕೊಪ್ಪಳ ಜಿಲ್ಲೆ
ಪ್ರಕೃತಿ ಚಿಕಿತ್ಸೆಯನ್ನು ಪಡೆಯುವುದು ಮತ್ತು ಅದರ ಸದುಪಯೋಗಗಳನ್ನು ಗ್ರಾಮೀಣ ಜನರಿಗೆ ತಿಳಿಸುವ ಬಹಳ ಮಹತ್ವದ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆ ಇಂದು ಮಾಡುತ್ತಿದೆ. ಜನರು ಪ್ರಾಕೃತಿಕವಾಗಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ದೈಹಿಕ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಇದು ತಿಳಿ ಹೇಳುತ್ತದೆ.
- ಬಿ.ಸಿ ಪಾಟೀಲ್ ಚಿತ್ರನಟ, ಮಾಜಿ ಸಚಿವರು, ಕರ್ನಾಟಕ ಸರ್ಕಾರ
ಪ್ರಕೃತಿ ಚಿಕಿತ್ಸೆ ಜನಮಾನಸದಲ್ಲಿ ಬೇಗನೆ ಸ್ವೀಕಾರವಾಗುತ್ತಿರುವುದು, ಮತ್ತು ಜನರನ್ನು ಆರೋಗ್ಯಕರ ಜೀವನಶೈಲಿಯತ್ತ ಸಾಗಿಸುತ್ತಿರುವುದು ನಮಗೆ ಸಂತೋಷವನ್ನು ತಂದಿದೆ. ಈ ಕಾರ್ಯಕ್ರಮದ ಮೂಲಕ ಪ್ರಕೃತಿ ಚಿಕಿತ್ಸಾ ವ್ಯವಸ್ಥೆಯ ಮಹತ್ವವನ್ನು ಎಲ್ಲರಿಗೂ ತಲುಪಿಸಲು ನಾವು ಯಶಸ್ವಿಯಾಗುತ್ತಿದ್ದೇವೆ. ಈ ಮಹತ್ವದ ಆರೋಗ್ಯ ಚಳವಳಿಯಲ್ಲಿ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಹಕರಿಸಿದ ಸಂಸ್ಥೆಗಳಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಮುಂದುವರೆಸಲಿದೆ.
- ಡಾ. ಪ್ರಶಾಂತ ಶೆಟ್ಟಿ ಪ್ರಾಂಶುಪಾಲರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಉಜಿರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







