ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-7

Upayuktha
0


 

ಕುರುಕುಲದ ಒಂದೇ ಕುಟುಂಬದ ಎರಡು ಕವಲುಗಳೊಳಗೆ ಹುಟ್ಟಿದ ಸಂಘರ್ಷದ ಕಥೆಯೇ ಮಹಾಭಾರತ. ಎರಡೂ ಮಹಾಕಾವ್ಯಗಳಿಗೆ ಕಾರಣವಾಗಿದ್ದು ಆಸ್ತಿ ವಿಚಾರ, ಅಯೋಧ್ಯಾ, ಕಿಷ್ಕಿಂದ ಹಾಗೂ ಲಂಕಾದ ಸಿಂಹಾಸನ ರಾಮಾಯಣದ ಕಥೆಯಾದರೆ, ಹಸ್ತಿನಾಪುರದ ಸಿಂಹಾಸನಕ್ಕೆ ನಡೆದ ಯುದ್ಧದಿಂದಾಗಿ ಮಹಾಭಾರತ ಕಥೆ ಹುಟ್ಟಿಕೊಳ್ಳುತ್ತದೆ ರಾಜಧರ್ಮದ ಪ್ರಕಾರ ರಾಜನಾದವನು ತನ್ನವರ ಹಿತಾಸಕ್ತಿ ಕಾಪಾಡಿಕೊಳ್ಳುವುದರ ಜತೆ ಜತೆಗೆ ಪರರ ಹಿತದೃಷ್ಟಿಯತ್ತಲೂ ಗಮನ ಹರಿಸಬೇಕು. ಈ ದೃಷ್ಟಿಯಲ್ಲಿ ಕಂಡಾಗ ತನ್ನ ಆಸೆ, ಆಕಾಂಕ್ಷೆಗಳನ್ನೇ ಬದಿಗೊತ್ತಿದ ಶ್ರೀರಾಮ ಆದರ್ಶನಾಗುತ್ತಾನೆ. ಆದರೆ ಶ್ರೀಕೃಷ್ಣನದು ರಾಜತಾಂತ್ರಿಕ ದೃಷ್ಟಿ. ಸಮರವೆನ್ನುವುದು ದ್ವೇಷ ಸಾಧನೆ ಮತ್ತು ಮಹತ್ವಾಕಾಂಕ್ಷೆಯ ಭೂಮಿಕೆಯಾಗಬಾರದು. ಬದಲಿಗೆ ಅದುವೇ ಸಮರ್ಥ ಆಡಳಿತದ ಸಾಧನ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡುತ್ತಾನೆ. 


ಸಮಸ್ಯೆ ಬಂದಾಗ ಮನಸ್ಸಿನಲ್ಲೇ ಕೊರಗುವುದಕ್ಕಿಂತ ಉತ್ತರ ಕಂಡುಕೊಳ್ಳಲು ಯೋಗ್ಯರ ಮುಂದೆ ಪ್ರಸ್ತಾಪಿಸಬೇಕು ಎನ್ನುತ್ತದೆ ಭಗವದ್ಗೀತೆ. 


ವೇದಾಂತದ ಗಹನ ತತ್ವಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬೋಧಿಸಿದ್ದು ಗೀತೆಯ ಮೊದಲ ವಿಶೇಷತೆಯಾದರೆ, ಸರ್ವಜನಗ್ರಾಹ್ಯವಾದ ಅನೇಕ ಲೌಕಿಕ ವಿಷಯಗಳನ್ನು ಸಾಂದರ್ಭಿಕವಾಗಿ ಬೋಧಿಸಿದ್ದು ಅದರ ಎರಡನೆಯ ವಿಶೇಷತೆ. ಹಾಗೆಂದೇ ಗೀತೆ ಎಲ್ಲ ಆಯಾಮಗಳಿಂದಲೂ ಜನಪ್ರಿಯವಾಗಿದೆ. 


ಮೂವರು ಕೃಷ್ಣರು:

ಭಗವದ್ಗೀತೆ ಎಂದರೆ ಮೂವರು ಕೃಷ್ಣರ ಸಂಗಮ. ಇದನ್ನು ಉಪದೇಶಿಸಿದವನು ವಾಸುದೇವಕೃಷ್ಣ. ಉಪದೇಶವನ್ನು ಪಡೆದವನು ಅರ್ಜುನ. ಅವನೂ ಕೃಷ್ಣನೇ. ಮಹಾಭಾರತದ ವಿರಾಟಪರ್ವದಲ್ಲಿ ಅರ್ಜುನ ಉತ್ತರಕುಮಾರನ ಬಳಿ ತನ್ನ ಹತ್ತು ಹೆಸರುಗಳಲ್ಲಿ 'ಕೃಷ್ಣ' ಎಂಬುದೂ ಒಂದು ಎಂದಿದ್ದಾನೆ. ಪಾಂಡು ಮಹಾರಾಜ ಅರ್ಜುನನಿಗೆ 'ಕೃಷ್ಣ' ಎಂದೇ ನಾಮಕರಣ ಮಾಡಿದ್ದ. ಈ ಇಬ್ಬರ ಸಂವಾದವನ್ನು ತನ್ನ ಶಬ್ದಗಳಿಂದ ಸೆರೆಹಿಡಿದು ಮಾತಿಗೆ ಅಕ್ಷರದ ಉಡುಗೆ ತೊಡಿಸಿ ಗ್ರಂಥರೂಪದಲ್ಲಿ ಲೋಕಕ್ಕೆ ಕೊಟ್ಟವನೂ ಕೃಷ್ಣ. ಅವರೇ ದ್ವೈಪಾಯನಕೃಷ್ಣ. ಅವರೇ ವ್ಯಾಸರು. 

 ಈ ಅಭಿಪ್ರಾಯವನ್ನು ಹೀಗೂ ಹೇಳಬಹುದು- ಒಬ್ಬ ಕೃಷ್ಣನು ಮನೋರೋಗಿ. ಇನ್ನೊಬ್ಬ ಕೃಷ್ಣನು ಆ ಮನೋರೋಗಕ್ಕೆ ಮದ್ದು ಕೊಡುವ ವೈದ್ಯ. ಮತ್ತೊಬ್ಬ ಕೃಷ್ಣನು ಈ ಚಿಕಿತ್ಸಾ ವಿಧಾನವನ್ನು ಸಂಗ್ರಹಿಸಿ ದಾಖಲು ಮಾಡಿದವನು. ಅದಕ್ಕಿಂತ ಹೆಚ್ಚುಗಾರಿಕೆ ಇನ್ನೇನಿದೆ. 


ಅರ್ಜುನನ ವಿಷಾದ:

ಅರ್ಜುನ ಸ್ವ-ಇಚ್ಛೆಯಿಂದಲೇ ಯುದ್ಧ ಮಾಡಲು ಮುಂದಾಗಿದ್ದ. ಯುದ್ಧಭೂಮಿಯಲ್ಲಿ ಎರಡು ಸೇನೆಗಳ ನಡುವೆ ರಥವನ್ನು ನಿಲ್ಲಿಸುವಂತೆ ಕೃಷ್ಣನಿಗೆ ಸೂಚಿಸಿದ. ಅದರಂತೆ ಕೃಷ್ಣನು ಭೀಷ್ಮ-ದ್ರೋಣ ಮೊದಲಾದವರ ಮುಂಬದಿಯಲ್ಲಿ ರಥವನ್ನು ನಿಲ್ಲಿಸಿದ. ಎರಡೂ ಬದಿಯ ಸೇನೆಯತ್ತ ದೃಷ್ಟಿಹಾಯಿಸಿದ ಅರ್ಜುನನ ಮನಸ್ಸಿನಲ್ಲಿ ಸುಪ್ತವಾಗಿದ್ದ ವ್ಯಥೆ ಉಲ್ಬಣವಾಯಿತು. ಸ್ಮೃತಿಯ ಕಾರಣ ಇವರೆಲ್ಲರೂ ನನ್ನವರು. ನನ್ನಿಂದಾಗಿ ಸಾಯುತ್ತಾರಲ್ಲ ಎಂದು ವ್ಯಥಿತನಾದ. ಅರ್ಜುನನು ಕೌರವಾದಿಗಳನ್ನು ನನ್ನವರು ಎನ್ನುತ್ತಾನೆ. ಆದರೆ, 'ನಾನು' ಎಂಬುದನ್ನು ಅರಿತವನು ಮಾತ್ರ 'ನನ್ನವರು' ಎಂಬುವವರನ್ನೂ ತಿಳಿಯಬಲ್ಲ. ಇಲ್ಲದಿದ್ದರೆ ಅದು ರೋಗಗ್ರಸ್ಥ ಯೋಚನೆಯಾಗುತ್ತದೆ. ಅಂತಹ ಯೋಚನೆ ಮನೋರೋಗವಲ್ಲದೇ ಮತ್ತೇನು? ಹೀಗೆ ಮನೋವ್ಯಥೆಯಿಂದ ನಿತ್ರಾಣಗೊಂಡ ಅರ್ಜುನ ಹುರುಪು ಕಳೆದುಕೊಳ್ಳುತ್ತಾನೆ. ಮೋರೆ ಬಾಡುತ್ತದೆ. ಕಾಯ ಕಂಪಿಸಿ ಕೈಯಿಂದ ಗಾಂಡೀವ ಧನಸ್ಸು ಜಾರುತ್ತದೆ. ತನಗೆ ಹೀಗೇಕೆ ಆಗುತ್ತಿದೆ ಎಂದು ತಿಳಿಯದ ಅರ್ಜುನ ಕೃಷ್ಣನಲ್ಲಿ 'ಕಾರ್ಪಣ್ಯದೋಷೋಪಹತಃ ಸ್ವಭಾವಃ ಎನ್ನುತ್ತಾನೆ. 



ಕೃಷ್ಣ! ನನ್ನಲ್ಲಿ ದೈನ್ಯತೆ ಉಂಟಾಗಿ ಕ್ಷತ್ರಿಯ ಸ್ವಭಾವ ಮರೆಯಾಗುತ್ತಿದೆ. ಕರ್ತವ್ಯ ವಿಷಯದಲ್ಲಿ ಮನಸ್ಸಿಗೆ ಮಬ್ಬು ಕವಿದಿದೆ. ಆದ್ದರಿಂದ ನನಗೆ ಯಾವುದು ಶ್ರೇಯಸ್ಸು? ಯಾವುದು ಶ್ರೇಯಸ್ಸಲ್ಲ ಎಂಬ ನಿರ್ಣಯಕ್ಕೆ ಬರಲಾಗುತ್ತಿಲ್ಲ. ನಿನಗೆ ಶರಣಾಗಿದ್ದೇನೆ. ಶ್ರೇಯಸ್ಸಾದುದನ್ನು ಉಪದೇಶಿಸು ಎಂದು ಕೃಷ್ಣನಲ್ಲಿ ಅಂಗಲಾಚುತ್ತಾನೆ. ಕೆಚ್ಚೆದೆಯ ಕಲಿ ಪಾರ್ಥನಿಗೇಕೆ ಈ ಬವಣೆ? ಆತನೇನಾದರೂ ಕುರುಕ್ಷೇತ್ರದಲ್ಲಿ ನೆರೆದ ಸೇನೆಯನ್ನು ಕಂಡು ಹೆದರಿದನೆ? ಇರಲಿಕ್ಕಿಲ್ಲ. ಈ ಹಿಂದೆ ಧರ್ಮರಾಜನು ಮಾಡಿದ ರಾಜಸೂಯ ಯಾಗದ ಸಂದರ್ಭದಲ್ಲಿ ಕಪ್ಪ ಸಂಗ್ರಹಿಸಲು ಸಾಕಷ್ಟು ರಾಜರನ್ನು ಬಗ್ಗುಬಡಿದು ವಿಜಯಿಯಾದವನಲ್ಲವೇ ಅವನು. ಅಲ್ಲದೇ ಮಹಾಭಾರತ ಯುದ್ಧಕ್ಕೆ ಮುನ್ನ ನಡೆದ ಗೋಗ್ರಹಣ ಯುದ್ಧದಲ್ಲಿ ಏಕಾಂಗಿಯಾಗಿ ಭೀಷದ್ರೋಣ ಕರ್ಣಾದಿಗಳ ವಿರುದ್ಧ ಕಾದಾಡಿ ಹಿಮ್ಮೆಟ್ಟಿಸಿದ್ದ. ಇದೆಲ್ಲದರಿಂದ ಅರ್ಜುನನಿಗೆ ಯುದ್ಧವೆಂದರೆ ಉತ್ಸಾಹದ ತಾಣವೇ ಹೊರತು ಅದು ಅವನಿಗೆ ಎಂದೂ ಭಯಸ್ಥಾನವಾಗಿರಲಿಲ್ಲ. ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಇಂದೇಕೆ ಧೈರ್ಯ ಅಡಗಿ ಹೋದುದಾದರೂ ಎಲ್ಲಿ? 'ನ ಯೋತ್ಸ್ಯ ಇತಿ ಗೋವಿಂದಂ ಉಕ್ತ್ವಾ ತೂಷ್ಣೀಂ ಬಭೂವಹ -ಕೃಷ್ಣ! ನಾನು ಯುದ್ಧ ಮಾಡಲಾರೆ ಎಂದು ಹೇಳಿ ಗಾಂಡೀವವನ್ನು ಕೆಳಗೆ ಹಾಕಿ ಸುಮ್ಮನೆ ಕುಳಿತುದಾದರೂ ಏಕೆ? ಅರ್ಜುನನ ಈ ದೈನ್ಯತೆಯಿಂದ ಕಲಿಯಬೇಕಾದ ಪಾಠವೇನು? ಇದಕ್ಕೆ ಗೀತೆ ನೀಡುವ ಉತ್ತರವೇನು? 

ಬದುಕಿಗೆ ಹತ್ತಿರ:

ಮಹಾಭಾರತ ಯುದ್ಧ ನಡೆದು ಸುಮಾರು ಐದು ಸಾವಿರ ವರ್ಷಗಳೇ ಕಳೆದಿವೆ. ಆದರೂ ಆ ಯುದ್ಧ ಭೂಮಿಯಲ್ಲಿ ಹುಟ್ಟಿದ ಗೀತೆ ಮಾತ್ರ ನಮಗೆ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಏಕೆ ಹೀಗೆ? ಗೀತೋಪದೇಶವನ್ನು ಗ್ರಹಣ ಮಾಡಿದ ಅರ್ಜುನ ನಮ್ಮ ಇಂದಿನ ಬದುಕಿಗೆ ತೀರಾ ಹತ್ತಿರವಾಗುತ್ತಾನೆ. ಅಂದು ಅರ್ಜುನ ಯುದ್ಧ ಭೂಮಿಯಲ್ಲಿ ಎದುರಿಸಿದ ಸಮಸ್ಯೆಯನ್ನು ಇಂದು ನಾವು ದಿನವೂ ಎದುರಿಸುತ್ತಿದ್ದೇವೆ. ವೈಜ್ಞಾನಿಕ ವಸ್ತುಗಳ ಅತಿಯಾದ ಉಪಯೋಗದಿಂದ ಒಂದಿಷ್ಟು ಸುಖ ಪಡುತ್ತಿದ್ದರೂ ಇನ್ನೊಂದು ಕಡೆಯಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮನಸ್ಸು ಅರ್ಜುನನ ಮನಸ್ಸಿನಂತೆ ತಲ್ಲಣಗೊಂಡಿದೆ. ದೈನ್ಯತೆಯಿಂದ ಶಕ್ತಿಗುಂದಿ ಕ್ಷಿಪ್ತಗೊಂಡಿದೆ. ಹತಾಶೆಯಿಂದ ಬಳಲಿ ಬದುಕಿನ ಬಗ್ಗೆ ಭರವಸೆ ಕಳೆದುಕೊಂಡಿದೆ. ನಮ್ಮ ಧೈರ್ಯಸ್ಥಾನವು ಕುಸಿದು ಭವಿಷ್ಯ ಸಂಶಯಗ್ರಸ್ಥವಾಗಿದೆ. ಇದು ಇಂದಿನ ಸಮಸ್ಯೆ. ನಮಗೂ ಅರ್ಜುನನಿಗೂ ಇರುವ ವ್ಯತ್ಯಾಸವೆಂದರೆ ಅವನು ಶ್ರೀಕೃಷ್ಣನಲ್ಲಿ ಹೇಳಿಕೊಂಡು ಸಮಸ್ಯೆಯಿಂದ ಮುಕ್ತನಾದ. ಆದರೆ ನಾವು? ಶ್ರೀಕೃಷ್ಣನಂತೆ ಸೂಕ್ತ ಮಾರ್ಗದರ್ಶನ ನೀಡುವವರಿಲ್ಲದಿರುವುದರಿಂದ ಸಮಸ್ಯಾಗ್ರಸ್ತರಾಗಿಯೇ ತೊಳಲುತ್ತಿದ್ದೇವೆ. ಸಮಸ್ಯೆಗೆ ಶ್ರೀಕೃಷ್ಣನಿಂದ ಪರಿಹಾರ ಸಿಕ್ಕಿತೆಂಬ ಭರವಸೆಯಿಂದ ಗೀತೆಯನ್ನು ನೋಡುತ್ತಿದ್ದೇವೆ. 


ಸಮಸ್ಯೆಗೆ ಕಾರಣ:

ಸಮಸ್ಯೆ ಬಂದಾಗ ಮನಸ್ಸಿನಲ್ಲೇ ಕೊರಗಿದರೆ ಪ್ರಯೋಜನವಿಲ್ಲ. ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕು. ಆತ್ಮೀಯರಲ್ಲಿ ಹೇಳಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಮನಸ್ಸು ಸಮಸ್ಯಾಗ್ರಸ್ತವಾದಾ, ಯೋಗ್ಯರಾದ ಆತ್ಮೀಯರಲ್ಲಿ ಹೇಳಿಕೊಳ್ಳುವುದೇ ಪ್ರಥಮಮೋಪಾಯ ಭವಭೂತಿ ಹೇಳಿದಂತೆ 'ಪೂರೋತ್ಪೀಡೇ ಪ್ರವಾಹಸ್ಯ ಪರೀವಾಹಃ ಪ್ರತಿಕ್ರಿಯಾ' ಅಂದರೆ ಪ್ರವಾಹದಿಂದ ನೀರು ತುಂಬಿ ಉಕ್ಕೇರಿದಾಗ ಅಣೆಕಟ್ಟೆಯ ಬಾಗಿಲನ್ನು ತೆರೆಯುವುದೊಂದೇ ದಾರಿ. ಇಲ್ಲದಿದ್ದರೆ ಆಣೆಕಟ್ಟೆಯೇ ಒಡೆಯಬಹುದು. ಅರ್ಜುನನು ಇದನ್ನೇ ಮಾಡಿದ. ತನ್ನ ಗೊಂದಲವನ್ನೆಲ್ಲ ಆತ್ಮೀಯನಾದ ಕೃಷ್ಣನಲ್ಲಿ ಹೇಳಿಕೊಂಡ. ಎಲ್ಲವನ್ನೂ ಅಲಿಸಿದ ಕೃಷ್ಣ ಕೆಲ ಸಮಸ್ಯೆಗಳಿಗೆ ಮಂದಹಾಸದಿಂದ, ಮತ್ತೆ ಕೆಲವು ಪ್ರಶ್ನೆಗಳಿಗೆ ಸುದೀರ್ಘ ವಿವರಣೆಯಿಂದ, ಕೆಲ ಪ್ರಶ್ನೆಗಳನ್ನು ನಿರ್ಲಕ್ಷಿಸುವುದರಿಂದ, ಮತ್ತೆ ಕೆಲವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವ ಮೂಲಕ ಉತ್ತರಿಸಿದ. 

(ಮುಂದುವರಿಯುವುದು...)



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top