ಬೆಂಗಳೂರು: ‘ನಮ್ಮ ಮಾತೃಭೂಮಿಯನ್ನು ಕಲುಷಿತ ವಾತಾವರಣದಿಂದ ಸಂರಕ್ಷಿಸಿಕೊಳ್ಳಲು ನಾವೆಲ್ಲರೂ ಪ್ರಾಥಮಿಕವಾಗಿ ಪೆಟ್ರೋಲ್/ ಡೀಸೆಲ್ ವಾಹನಗಳು ಹೊರಸೂಸುವ ಹಾನಿಕಾರಕ ಮಾಲಿನ್ಯದಿಂದ ಸಂಪೂರ್ಣ ಮುಕ್ತರಾಗಲೇಬೇಕು. ಇದಕ್ಕಿರುವ ಸದ್ಯದ ಏಕೈಕ ಮಾರ್ಗ – ವಿದ್ಯುತ್ಚಾಲಿತ ವಾಹನಗಳ ಬಳಕೆ. ನಗರ ಪ್ರದೇಶಗಳ ನಾಗರೀಕರು ಈ ಬದಲಾವಣೆಗೆ ಅನಿವಾರ್ಯವಾಗಿ ಸ್ಪಂದಿಸಲೇಬೇಕು'' ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ನುಡಿದರು.
ಅವರು, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಹಾಗೂ ಇಂಟರ್ನ್ಯಾಶನಲ್ಎಲೆಕ್ಟ್ರಿಕ್ ವೆಹಿಕಲ್ ಅಸೋಸಿಯೇಶನ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ವಿದ್ಯುತ್ ಚಾಲಿತ ವಾಹನಗಳ ರ್ಯಾಲಿ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರ ಪ್ರದೇಶಗಳು ವಾಹನ ಹೊರಸೂಸುವ ಮಾಲಿನ್ಯದಿಂದ ಬಹುತೇಕ ತೀವ್ರ ಹಾನಿಗೀಡಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ವಾಹನಗಳಲ್ಲಿ ಬಳಸುವ ಶಕ್ತಿಶಾಲಿ ಬ್ಯಾಟರಿಗಳ ತಯಾರಿಕೆ ಕುರಿತಂತೆ ಸಂಶೋಧನೆ ಹಾಗೂ ಹೊಸ ಹೊಸತನ್ನು ಅನ್ವೇಷಿಸಲು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶೇಷ ಘಟಕವನ್ನೇ ಸ್ಥಾಪಿಸಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಈ ಸಮರ್ಥ ಬ್ಯಾಟರಿಗಳು ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ತಿಳಿಸಿದರು.
‘ಪರಿಸರ ಸಂರಕ್ಷಣೆಗೋಸ್ಕರ ಸಾಂಪ್ರದಾಯಿಕ ಇಂಧನ ಮೂಲಗಳಿಂದ ಚಲಿಸುವ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಬದಲಾಗಲು ನಾವು ಕಂಕಣಬದ್ಧರಾಗಬೇಕು’ ಎಂದು ಅವರು ಕರೆ ನೀಡಿದರು.
ಇಂಟರ್ನ್ಯಾಶನಲ್ ಇಲೆಕ್ಟ್ರಿಕ್ ವೆಹಿಕಲ್ ಅಸೋಸಿಯೇಶನ್ನ ಜಾಗತಿಕ ಚಟುವಟಿಕೆಗಳ ಉಪಾಧಕ್ಷ ಶ್ರೀನಿವಾಸ್ ಕುಮಾರ್ ರ್ರಾಪೋತು, ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೀವ್ ಮಿಶ್ರಾ, ಧನ್ವನ್ತಿç ಡ್ರೋನ್ ಪೈಲೆಟ್ ಅಕಾಡೆಮಿಯ ನಿರ್ದೇಶಕ ಡಾ. ಎ.ಟಿ. ಕಿಶೋರ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಎನ್. ಸಮನ್ವಿತಾ ಉಪಸ್ಥಿತರಿದ್ದರು.
ನಂತರ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ವಿದ್ಯುತ್ ಚಾಲಿತ ವಾಹನ ಕುರಿತಂತೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿದ್ಯುತ್ ವಾಹನ ಉದ್ಯಮದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


