ಸುರತ್ಕಲ್: ಜೀವನದ ಸತ್ಯ ಹಾಗೂ ಮೌಲ್ಯಗಳಿಗೆ ಮಹತ್ವವನ್ನು ನೀಡಿ ನುಡಿದಂತೆ ನಡೆದ ವಿಶಿಷ್ಟ ಸಾಹಿತಿ ಡಾ. ಎಸ್. ಎಲ್. ಭೈರಪ್ಪರು. ನವ್ಯ ಸಾಹಿತ್ಯದ ಪ್ರಭಾವದ ಕಾಲದಲ್ಲಿ ವಿಭಿನ್ನವಾಗಿ ಕಲಾಕೃತಿಗಳನ್ನು ನೀಡಿದ ಭೈರಪ್ಪರು ನಮಗೆ ಹೆಚ್ಚು ಆಪ್ತರಾಗುತ್ತಾರೆ. ಧರ್ಮಶ್ರೀ ಕಾದಂಬರಿಯಿಂದ ತೊಡಗಿ ಉತ್ತರ ಕಾಂಡದ ವರೆಗಿನ ಅವರ ಕೃತಿಗಳು ಅನನ್ಯ ಅನುಭವಗಳನ್ನು ನೀಡುತ್ತವೆ ಎಂದು ಚಿಂತಕ ಡಾ. ಅಜಕ್ಕಳ ಗಿರೀಶ್ ಭಟ್ ನುಡಿದರು.
ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ, ಚಿರಂತನ ಚಾರಿಟೇಬಲ್ ಟ್ರಸ್ಟ್, ನಾಗರಿಕ ಸಲಹಾ ಸಮಿತಿ, ಸುರತ್ಕಲ್ ಮತ್ತು ಸಪ್ತಕ ಬೆಂಗಳೂರು ಜೊತೆಯಾಗಿ ಸುರತ್ಕಲ್ನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಸಂಯೋಜಿಸಿದ ಭೈರಪ್ಪ ನಮನ-ಗಾಯನ-ವಾದನ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.
ಹಿರಿದಾದ ಅನುಭವ, ವಸ್ತು ವೈವಿಧ್ಯ, ಕಲೆಗಾರಿಕೆ, ನಂಬಿದ ತತ್ವಗಳ ಕುರಿತು ಬದ್ಧತೆಗಳಿಂದ ವಿವಿಧ ನೆಲೆಗಳ ಕಾದಂಬರಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಲು ಅವರಿಗೆ ಸಾಧ್ಯವಾಯಿತು. ತನ್ನನ್ನು ಅಕ್ಕರೆಯಿಂದ ಕಂಡ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ಮೂಲಕ ವಿಶಿಷ್ಟ ಸಾಹಿತಿಯಾಗಿ ಜನಮಾನಸದ ಪ್ರೀತಿ ಗಳಿಸಿದರು ಎಂದು ಅವರು ನುಡಿದರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಹರಿಕೃಷ್ಣ ಪುನರೂರು ಪುಷ್ಪ ನಮನ ಸಲ್ಲಿಸಿದರು. ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ದೀಪ ಬೆಳಗಿಸಿದರು.
ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ಕೃಷ್ಣಮೂರ್ತಿ ಸ್ವಾಗತಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ವಂದಿಸಿದರು. ಪ್ರಾಧ್ಯಾಪಕ ಕುಮಾರಸ್ವಾಮಿ ಹೊಸಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ಚಿರಂತನ ಚಾರಿಟೇಬಲ್ ಟ್ರಸ್ಟ್ ನ ಮೂರ್ತಿ ದೇರಾಜೆ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ನೀಹಾರಿಕ ದೇರಾಜೆ, ಸುರತ್ಕಲ್ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಿತು. ತಬಲಾದಲ್ಲಿ ಶ್ರೀವತ್ಸ ಶರ್ಮಾ, ಪಡುಬಿದ್ರೆ ಮತ್ತು ಸಂವಾದಿನಿಯಲ್ಲಿ ಮೇಧಾ ಭಟ್, ಮಂಗಳೂರು ಮತ್ತು ಸುಜಾತ ಭಟ್ ಸಹಕರಿಸಿದರು. ಕಿರಣ್ ಹೆಗಡೆ ಮಗೆಗಾರ ಅವರಿಂದ ಬಾನ್ಸುರಿ ವಾದನ ಕಚೇರಿ ನಡೆಯಿತು. ಭಾರವಿ ದೇರಾಜೆ ತಬಲಾದಲ್ಲಿ ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

