ಶಿವಮೊಗ್ಗ: ದಿನಾಂಕ 17 ಅಕ್ಟೋಬರ್ 2025 ರಂದು ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಮಾನಸಿಕ ಆರೋಗ್ಯ ಅರಿವು ಸಪ್ತಾಹ ಕಾರ್ಯಕ್ರಮಗಳ ಸಮಾರೋಪ ನುಡಿಗಳನ್ನು ಆಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಸಂತೋಷ್ ಎಂ ಎಸ್ ರವರು ಮಾನಸಿಕ ಆರೋಗ್ಯ ಸಂರಕ್ಷಣೆಯು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಎಂದು ತಿಳಿಸಿದರು.
ಮಾನಸಿಕ ಆರೋಗ್ಯ ಕಾಯಿದೆ 2017ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಆರೋಗ್ಯವೆಂಬುದು ತನ್ನ ಹಕ್ಕು ಎಂದು ಅವರು ತಿಳಿಸಿದರು.
ಈ ನಿಟ್ಟಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ದಿನಾಂಕ 10 ಅಕ್ಟೋಬರ್ 2025 ರಿಂದ ದಿನಾಂಕ 17 ಅಕ್ಟೋಬರ್ 2025 ರವರೆಗೆ ಸತತ ಏಳು ದಿನಗಳ ಕಾಲ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ಕಟೀಲ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನ ಸಂಸ್ಥೆ ಮತ್ತು ಕಟೀಲ ಅಶೋಕ್ ಪೈಸ್ಮಾರಕ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿರುವ ಅರಿವಿನ ಕಾರ್ಯಕ್ರಮಗಳು ಒಂದು ಆಂದೋಲನವೇ ಸರಿ. ಅಂದು ಡಾ. ಅಶೋಕ್ ಪೈರವರು ಮಾನಸಿಕ ಆರೋಗ್ಯದ ಕುರಿತಾದ ಹಲವಾರು ಮಿಥೈಗಳನ್ನು ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಹೋಗಲಾಡಿಸಲು ಶ್ರಮಿಸಿದರು.
ಇಂದು ಡಾ. ರಜನಿ ಪೈ ಹಾಗೂ ಡಾಕ್ಟರ್ ಪ್ರೀತಿ ಶಾನಭಾಗ ರವರು ತಮ್ಮ ಸಂಸ್ಥೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಿವಿಧ ಸೇವೆಗಳನ್ನು ನೀಡುವುದಲ್ಲದೆ ಇಲ್ಲಿಯ ವಿದ್ಯಾರ್ಥಿಗಳ ಮೂಲಕ ಒಂದು ಮಾನಸಿಕ ಆರೋಗ್ಯ ಸಂರಕ್ಷಣೆಯ ಪಡೆಯನ್ನೇ ನಿರ್ಮಾಣ ಮಾಡುತ್ತಿದ್ದಾರೆ. ಮಾನಸಿಕ ಆರೋಗ್ಯದ ಕುರಿತು ಆಗಲಿ ಮಾನಸಿಕ ಅನಾರೋಗ್ಯದ ಕುರಿತಾಗಲಿ ಜನರು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಮಾನಸ ಸಂಸ್ಥೆ ಇಂತಹ ಸಾರ್ವಜನಿಕ ಸ್ಥಳದಲ್ಲೂ ಮಾನಸಿಕ ಆರೋಗ್ಯವನ್ನು ಮುಕ್ತವಾಗಿ ಮಾತನಾಡಬೇಕು ಹಾಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ತೋರಿಸಿ ಕೊಡುತ್ತಿದೆ. ಇದು ಒಂದು ಅತ್ಯಂತ ಪ್ರಶಂಸನೀಯ ವಿಷಯ. ನಮ್ಮ ಕಾನೂನು ಸೇವಾ ಪ್ರಾಧಿಕಾರವೂ ಕೂಡ ಮಾನಸಿಕ ಆರೋಗ್ಯ ಪರಿಶೀಲನಾ ಸಮಿತಿಯನ್ನು ರಚಿಸಿ ನಿನ್ನೆಯಷ್ಟೇ ಮೆಗನ್ ಆಸ್ಪತ್ರೆಯಲ್ಲಿ ಅದನ್ನು ಉದ್ಘಾಟಿಸಿದೆ. ಅದಕ್ಕೆ ಡಾಕ್ಟರ್ ರಜನೀ ಪೈರವರು ಒಬ್ಬ ಸದಸ್ಯರಾಗಿರುತ್ತಾರೆ. ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಅಸ್ವಸ್ಥತೆ, ಇವೆರಡರ ಕುರಿತು ಮುಕ್ತವಾಗಿ ಮಾತನಾಡುವ ಪರಸ್ಪರ ಬೆಂಬಲ ಮೂಡಿಸುವ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗಬೇಕು ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮನೋಸಾಮಾಜಿಕ ಸಂರಕ್ಷಣೆಗಾಗಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವ ಕಾರ್ಯವನ್ನು ನಡೆಸಲಾಯಿತು. ಇದನ್ನು ಬೋಧಿಸಿದ ಶಿವಮೊಗ್ಗದ ಖ್ಯಾತ ಕವಯತ್ರಿ ಶ್ರೀಮತಿ ಸವಿತಾ ನಾಗಭೂಷಣರವರು ಮಾತನಾಡುತ್ತಾ ಮಾನಸಿಕ ಆರೋಗ್ಯ ಎಂಬುದು ಜೀವನದಲ್ಲಿ ಅತ್ಯಂತ ಪ್ರಮುಖ ಅಂಶ .ಮನಸ್ಸಿನ ಆರೋಗ್ಯವಿಲ್ಲದ ವ್ಯಕ್ತಿ ಯಾವುದನ್ನು ಸಾಧಿಸಲಾರ. ನಮ್ಮ ಮಾನಸಿಕ ಆರೋಗ್ಯವನ್ನು ಉಳಿಸಿಕೊಳ್ಳಬಲ್ಲ ದಾರಿಯನ್ನು ನಾವು ಕಂಡುಕೊಳ್ಳಬೇಕು, ಮಾತ್ರವಲ್ಲ ಮಾನಸಿಕ ತೊಂದರೆಗೆ ಒಳಗಾದ ಯಾವುದೇ ವ್ಯಕ್ತಿಗೆ ಸೂಕ್ತ ಸಮಾಧಾನ ಬೆಂಬಲ ಹಾಗೂ ಭರವಸೆಯನ್ನು ನೀಡುವ ಮನೋಭಾವ ನಮ್ಮೆಲ್ಲರದ್ದು ಆಗಿರಬೇಕು. ನೊಂದವರಿಗೆ ಹೆಗಲು ನೀಡಲು ಪ್ರತಿಯೊಬ್ಬರೂ ಸಿದ್ದರಿರಬೇಕು ಎಂದು ಅವರು ತಿಳಿಸಿದರು. ಮನೋ ಸಾಮಾಜಿಕ ಸಂರಕ್ಷಣೆಗಾಗಿ ಎಲ್ಲರೂ ಕೂಡ ಪ್ರತಿಜ್ಞೆಯನ್ನು ಸ್ವೀಕರಿಸುವಂತೆ ಅವರು ತಿಳಿಸಿದರು.
ಈ ಪ್ರತಿಜ್ಞೆಯಲ್ಲಿ ಮಾನಸಿಕ ಆರೋಗ್ಯವನ್ನು ಹಕ್ಕು ಎಂದು ಪರಿಗಣಿಸುವ ಹಾಗೂ ಅದರ ವಿರುದ್ಧದ ಮಿತ್ಯಗಳನ್ನುಗಳನ್ನು ಹೋಗಲಾಡಿಸಿಕೊಳ್ಳುವ ಹಾಗೂ ಮಾನಸಿಕ ಆರೋಗ್ಯವನ್ನು ಎತ್ತಿ ಹಿಡಿಯುವ ಕಾಯಿದೆಗಳನ್ನು ಸಮರ್ಥಿಸುವ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು .ಈ ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಎ ಫೈ ರವರು ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ಶಾನ್ಭಾಗ್, ಆಡಳಿತಾಧಿಕಾರಿ ಪ್ರೊಫೆಸರ್ ರಾಮಚಂದ್ರ ಬಾಳಿಗ ಹಾಗೂ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಎಲ್ಲರ ನೋವನ್ನು ಬಲ್ಲವೆಯಾದರೆ ಗೆಲ್ಲುವೆ ನೀನು ಬಾಳಲ್ಲಿ ಎಂದು ಅರ್ಥಪೂರ್ಣವಾಗಿ ಹಾಡನ್ನು ಹೇಳಿದರು .ಉಪನ್ಯಾಸಕರಾದ ಶ್ರೀಮತಿ ಶ್ರೀದೇವಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಮಂಜುನಾಥ ಸ್ವಾಮಿ ಎಲ್ಲರನ್ನು ವಂದಿಸಿದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರ್ಚನಾ ಭಟ್, ಡಾಕ್ಟರ್ ಹರಿಹರನ್, ಶ್ರೀ ಮಂಜುನಾಥ್ ಹಾಗೂ ಡಾಕ್ಟರ್ ಕೆ ಟಿ ಶ್ವೇತಾ ವಹಿಸಿದ್ದರು.
ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಸಿಬ್ಬಂದಿಗಳು ಹಾಗೂ ಹಲವಾರು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಂಬತ್ತಿ ಬೆಳಗಿಸಿ ಪ್ರತಿಜ್ಞಾವಿಧಿಯನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ದೇಶ, ಏಳು ದಿನಗಳ ಕಾಲ ನಡೆಸಲಾದ ವಿವಿಧ ಅರಿವಿನ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಅವರು ಎಲ್ಲರನ್ನು ಈ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಮನೋ ಸಾಮಾಜಿಕ ಸಂರಕ್ಷಣೆ ಎಂಬುದು ಮಾನಸಿಕ ಆರೋಗ್ಯದ ಕುರಿತ ಅರಿವು, ಮಾನಸಿಕ ಸ್ವಾಸ್ಥ್ಯಕ್ಕೆ ತೊಂದರೆಯಾದಾಗ ಆರೋಗ್ಯ ಸೇವೆಗಳನ್ನು ಶೀಘ್ರವಾಗಿ ಪಡೆಯುವುದು ಹಾಗೂ ದೊರಕಿಸುವುದು, ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು, ಮಾನಸಿಕ ಬೆಂಬಲವನ್ನು ನೀಡಬಲ್ಲ ಸಾಮರಸ್ಯದ ಸಹಕಾರದ ವಿಶ್ವಾಸದ ಸಾಮಾಜಿಕ ವಾತಾವರಣವನ್ನು ಕಲ್ಪಿಸಿಕೊಳ್ಳುವುದು, ಮಾನಸಿಕ ಆರೋಗ್ಯವನ್ನು ಹಕ್ಕು ಎಂದು ಪರಿಗಣಿಸಿ ಗೌರವಿಸುವುದು, ಪ್ರತಿಯೊಬ್ಬರ ಘನತೆ ಗೌರವ ಹಾಗೂ ಭಾವನಾತ್ಮಕ ಸ್ಥಿತಿಗತಿಗಳನ್ನು ಗೌರವಿಸಿ ಬಾಳುವುದು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ ಎಂದು ಡಾಕ್ಟರ್ ಸಂಧ್ಯಾ ಕಾವೇರಿ ತಿಳಿಸಿದರು.
ಮಾನಸಿಕ ಆರೋಗ್ಯವೆಂಬುದು ಇಡೀ ಸಮಾಜ ಅತಿ ಅಗತ್ಯವಾಗಿ ಪರಿಗಣಿಸಬೇಕಾದ ಹಾಗೂ ಸಮಗ್ರ ಆರೋಗ್ಯದಲ್ಲಿ ಸೇರಿಸಿಕೊಳ್ಳಬೇಕಾದ ಅಂಶ ಎಂಬುದನ್ನು ಸಾರ್ವಜನಿಕರ ಗಮನ ಸೆಳೆದು ಮನವರಿಕೆ ಮಾಡುವುದು ಸಪ್ತಾಹ ಕಾರ್ಯಕ್ರಮದ ಹಾಗೂ ಇಂದಿನ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಉದ್ದೇಶ ಎಂದು ಅವರು ತಿಳಿಸಿದರು. ಮೊಂಬತ್ತಿ ಬೆಳಗಿ ಗೋಪಿ ವೃತ್ತದಿಂದ ಮಾನಸ ನರ್ಸಿಂಗ್ ಹೋಮ್ ವರೆಗೆ ಸಾಗುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು. ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 10 ಅಕ್ಟೋಬರ್ 2025 ರಂದು ಶಿವಮೊಗ್ಗದ ಡಿಎಆರ್ ಸಭಾಂಗಣದಿಂದ ಮಾನಸ ನರ್ಸಿಂಗ್ ಹೋಮ್ ವರೆಗೆ ಜಾಗೃತಿ ಜಾತಾವನ್ನು ನಡೆಸಿದ್ದರು. ಅದೇ ದಿನ ಜಿಲ್ಲಾ ಪೊಲೀಸ್ ಇಲಾಖೆಯ ಸುಮಾರು 200 ಸಿಬ್ಬಂದಿಗಳಿಗೆ ಒತ್ತಡ ನಿರ್ವಹಣೆ ಹಾಗೂ ತುರ್ತು ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸೇವೆ ವಿಷಯಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀ ಮಂಜುನಾಥ ನಾಯಕರವರು ನಡೆಸಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಸಂತೋಷ್ ಎಂ ಎಸ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರು ಉಪಸ್ಥಿತರಿದ್ದರು. ಅದೇ ದಿನ ವೆಬಿನಾರ್ ಮೂಲಕ ಮಾನಸಿಕ ಆರೋಗ್ಯ ಸೇವೆ ಲಭ್ಯತೆ _ತುರ್ತು ಹಾಗೂ ಬಿಕ್ಕಟ್ಟು ಸನ್ನಿವೇಶದಲ್ಲಿ ಎಂಬ ವಿಷಯದ ಕುರಿತು ವೆಬಿನಾರ್ ಮೂಲಕ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ದಿನಾಂಕ 11 ಅಕ್ಟೋಬರ್ 2025 ರಂದು ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗ ಸಿಟಿ ಸೆಂಟರ್ ಮಾಲ್ ನಲ್ಲಿ ನೃತ್ಯರೂಪಕದ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಸಾರ್ವಜನಿಕರ ಗಮನವನ್ನು ಸೆಳೆದರು. ಅದೇ ಸ್ಥಳದಲ್ಲಿ ವಿದ್ಯಾರ್ಥಿಗಳು ಎಕ್ಸ್ಪ್ರೆಸ್ವೆ ಆರ್ಟ್ ಅಥವಾ ಅಭಿವ್ಯಕ್ತಿ ಕಲೆ ಹಾಗೂ ಚಿಕಿತ್ಸೆ ಎಂಬ ವಿಷಯದ ಪ್ರಾತ್ಯಕ್ಷಿಕೆಯನ್ನು ನೀಡಿದರು.
ದಿನಾಂಕ 12 ಅಕ್ಟೋಬರ್ 2025 ರಂದು ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಮಾನಸಿಕ ಆರೋಗ್ಯದ ಕುರಿತಾಗಿ ನಡೆಸಲಾಯಿತು. ಇದರಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ದಿನಾಂಕ 13 ಅಕ್ಟೋಬರ್ 2025 ರಂದು ಕಾಲೇಜಿನ ಮನಸ್ ಶಾಸ್ತ್ರ ವಿಭಾಗದ ಮೂಲಕ ಹದಿಹರೆಯದ ವಿದ್ಯಾರ್ಥಿಗಳಿಗಾಗಿ ಆಪ್ಟಿಟ್ಯೂಡ್ ಪರೀಕ್ಷೆ ಅಂದರೆ ಅಭಿಕ್ಷಮತೆ ಪರೀಕ್ಷೆಯನ್ನು ನಡೆಸಿ ಮುಂದಿನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಅವರನ್ನು ಪ್ರೋತ್ಸಾಹಿಸಲಾಯಿತು.
ದಿನಾಂಕ 14 ಅಕ್ಟೋಬರ್ 2025 ರಂದು ಕಾಲೇಜಿನ ಮನಶಾಸ್ತ್ರ ವಿದ್ಯಾರ್ಥಿಗಳು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥವಾ ಬಿಕ್ಕಟ್ಟು ನಿರ್ವಹಣೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು. ದಿನಾಂಕ 15 ಅಕ್ಟೋಬರ್ 2025 ರಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಪ್ತ ಎಂಬ ಆಪ್ತ ಸಮಾಲೋಚನಾ ಹಾಗೂ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ಆಪ್ತ ಸಮಾಲೋಚನೆಯ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮನೋವೈದ್ಯರಾದ ಡಾಕ್ಟರ್ ಪ್ರವೀಣ್ ಹಾಗೂ ಹಿರಿಯ ಆಪ್ತ ಸಮಾಲೋಚಕರಾದ ಗಣೇಶ ರಾವ್ ನಾಡಿಗೇರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ದಿನಾಂಕ 16 ಅಕ್ಟೋಬರ್ 2025 ರಂದು ಕಟೀಲ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಶಾಸ್ತ್ರ ಪದವಿ ವಿದ್ಯಾರ್ಥಿಗಳು ಶಿವಮೊಗ್ಗ ಎಫ್ ಎಂ ಮೂಲಕ ಮಾನಸಿಕ ಆರೋಗ್ಯ ಹಾಗೂ ಅದರ ಪ್ರಾಮುಖ್ಯತೆಯ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಿನಾಂಕ 17 ಅಕ್ಟೋಬರ್ 2025 ರಂದು ಡಾಕ್ಟರ್ ಸುಭಾಸಿಸ್ ಭಾದ್ರ, ಮುಖ್ಯಸ್ಥರು ಬಿಕ್ಕಟ್ಟು ನಿರ್ವಹಣಾ ಮನಶಾಸ್ತ್ರಜ್ಞ ವಿಭಾಗ, ಬೆಂಗಳೂರು ಇವರಿಂದ "ಮಾನಸಿಕ ಆರೋಗ್ಯ ಪ್ರಥಮ ಚಿಕಿತ್ಸೆ /ಸೈಕಲಾಜಿಕಲ್ ಫಸ್ಟೇಡ್" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಅಲ್ಲದೆ ಏಳು ದಿನಗಳ ಸಪ್ತಾಹ ಕಾರ್ಯಕ್ರಮವನ್ನು ನಗರದ ಗೋಪಿ ವೃತ್ತದಲ್ಲಿ ಸಾರ್ವಜನಿಕರೊಂದಿಗೆ ಮಾನ್ಯ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ರವರ ಸಮ್ಮುಖದಲ್ಲಿ ಹಾಗೂ ಹಿರಿಯ ಕವಯತ್ರಿ ಸವಿತಾ ನಾಗಭೂಷಣರವರ ನೇತೃತ್ವದಲ್ಲಿ ಮನೋ ಸಾಮಾಜಿಕ ಸಂರಕ್ಷಣೆಗಾಗಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿ ಮೊಂಬತ್ತಿ ಬೆಳಗಿಸುವುದರ ಮೂಲಕ ಸಮಾರೋಪಗೊಳಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ