ನಿಟ್ಟೆ: ‘ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ಪೆಟ್ರೊಲಿಯಂ, ನೈಸರ್ಗಿಕ ಅನಿಲ ಇತ್ಯಾದಿ ಸೃಷ್ಟಿಸಿರುವ ಹಾನಿಕಾರಕ ಇಂಗಾಲದ ಹಜ್ಜೆಗುರುತುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಹಸಿರು ಜಲಜನಕ ಅಥವಾ ಶುದ್ಧ ಜಲಜನಕದ ಉತ್ಪಾದನೆಯ ಪ್ರಯತ್ನಗಳು ಹೊಸ ಭರವಸೆಯನ್ನು ಮೂಡಿಸಿವೆ. ವಾತಾವರಣದಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡ 0.005 ರಷ್ಟು ಮಾತ್ರ ಇರುವ ಜಲಜನಕ ಹೇರಳವಾಗಿ ಲಭ್ಯವಿರುವುದು ನೀರಿನಲ್ಲಿ. ನೀರನ್ನು ಪರ್ಯಾಯ ಇಂಧನಗಳ ಮೂಲಕ ವಿಭಜಿಸಿ ಶುದ್ಧ ಜಲಜನಕವನ್ನು ಉತ್ಪಾದನೆ ಮಾಡಬಹುದು. ಆದರೆ ಪರಿಶುದ್ಧ ನೀರನ್ನು ಇದಕ್ಕಾಗಿ ಬಳಸುವುದು ತಪ್ಪಾಗುತ್ತದೆ. ಏಕೆಂದರೆ ಶುದ್ಧ ಜೀವಜಲದ ಪ್ರಮಾಣ ಕೂಡ ಬಹಳ ಕಡಿಮೆಯಿದೆ. ಇದರಿಂದ ತ್ಯಾಜ್ಯ ನೀರು ಅಥವಾ ಕಲುಷಿತ ನೀರನ್ನು ಸಂಸ್ಕರಿಸಿ ಹಸಿರು ಜಲಜನಕವನ್ನು ಉತ್ಪಾದಿಸುವುದು ವಿವೇಕಯುತ ಮಾರ್ಗ. ಈ ನಿಟ್ಟಿನಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ, ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ತನ್ನ ಸಂಸ್ಥೆಯ ಆವರಣದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ, ಅಪಾಸ್ ಎನರ್ಜಿ ಟೆಕ್ನಾಲಜಿಯ ಜತೆ ಕೈ ಜೋಡಿಸಿ, ಬಹು ದೀರ್ಘಕಾಲ ಸಂಶೋಧನೆ ನಡೆಸಿ, ಇಂದು ಜಲಜನಕ ಉತ್ಪಾದನೆ ಹಾಗೂ ಬಳಕೆಗಳ ಯಶಸ್ವಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದು ನಿಜಕ್ಕೂ ಹೆಮ್ಮೆಯ ಹಾಗೂ ಸಂಭ್ರಮದ ಸಂಗತಿ',
ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ನುಡಿದರು. ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲದ ಅಟಲ್ ಕಮ್ಯುನಿಟಿ ಇನ್ನೊವೇಶನ್ ಸೆಂಟರ್ ಹಾಗೂ ಅಪಾಸ್ ಎನರ್ಜಿ ಟೆಕ್ನಾಲಜಿ, ತ್ಯಾಜ್ಯ ನೀರು ಘಟಕದಲ್ಲಿ ಉತ್ಪಾದಿಸಿದ ಹಸಿರು ಜಲಜನಕ ಹಾಗೂ ಅದರ ಬಳಕೆಯ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಹಾಗೂ ಪರಿವೀಕ್ಷಿಸಿ ಮಾತನಾಡುತ್ತಿದ್ದರು. ಮುಂದುವರಿದು ಶ್ರೀಯುತರು,
‘ಈ ಯಶಸ್ವೀ ಪ್ರಾತ್ಯಕ್ಷಿಕೆ, ಮತ್ತಷ್ಟು ಸುಧಾರಿತ ಅನ್ವೇಷಣೆಗಳಿಗೆ ಉತ್ತೇಜನ ನೀಡುವುದರಲ್ಲಿ ಸಂಶಯವಿಲ್ಲ. ಸರ್ಕಾರದ ‘ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ' ಕೂಡ ಇದಕ್ಕೆ ಪ್ರೋತ್ಸಾಹ ಮತ್ತು ಹಣದ ನೆರವುಗಳನ್ನುನೀಡುತ್ತದೆ. ಏಕೆಂದರೆ ನವೀಕೃತ ಇಂಧನಗಳ ಬಳಕೆಯಲ್ಲಿ ಮತ್ತು ಈ ನಿಟ್ಟಿನ ಸಂಶೋಧನೆಗಳಲ್ಲಿ ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ಅಗ್ರಶ್ರೇಣಿಯಲ್ಲಿದೆ', ಎಂದರು.
ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಹಿರಿಯ ಕೈಗಾರಿಕೋದ್ಯಮಿಗಳು ಹಾಗೂ ವಿಜ್ಞಾನಿಗಳು- ಬೊರುಕ ಸಮೂಹದ ಅಧ್ಯಕ್ಷ ಎಸ್.ಎನ್. ಅಗರವಾಲ್; ಐ.ಇ.ಟಿ.ಇ ಅಧ್ಯಕ್ಷ ಡಾ.ಸಿ.ವಿ.ರವಿಶಂಕರ್; ಬೋಯಿಂಗ್ ಕಂಪನಿಯ ಹರ್ಷಆರ್.ಎಂ; ಸಿ.ಪಿ.ಆರ್.ಐ ನನಿರ್ದೇಶಕ ಡಾ. ಮಲ್ಲಿಕಾರ್ಜುನ ರಾವ್; ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಅರ್ಚನಾಮಾಗಡಿ ಮತ್ತು ಡಾ.ನವನೀತ ಕುಮಾರ ಗುಪ್ತ; ಎನ್.ಎಂ.ಐ.ಟಿ ಅಟಲ್ ಕಮ್ಯುನಿಟಿ ಇನ್ನೊವೇಶನ್ಸೆಂಟರ್ನ ಡಾ.ಶಿವಪ್ರತಾಪಸಿಂಗ್ ಯಾದವ್ಹಾಗೂ ಎನ್.ಎಂ.ಐ.ಟಿ ಐಡಿಯಾಲ್ಯಾಬ್ನಮುಖ್ಯಸ್ಥ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ತಂತ್ರಜ್ಞಾನ ಸಲಹೆಗಾರ ಪ್ರೊ. ಪ್ರಹ್ಲಾದ ಎನ್.ತೆಂಗಳಿ ಅಧ್ಯಕ್ಷತೆ ವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ