ದಾವಣಗೆರೆ: ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಆರಾಧಕರಾದ ಕನ್ನಡದ ಅಸ್ಮಿತೆಯನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ಕಂಕಣಬದ್ಧರಾಗಿ ಕಳೆದ ನಾಲ್ಕು ದಶಕಗಳಿಂದ “ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ”ಯಾಗಿ ನಾಡಿನಾದ್ಯಂತ ಸ್ವಯಂ ಪ್ರೇರಣೆಯಿಂದ ನಿರಂತರವಾಗಿ ಹೊಸ ಹೊಸ ಸಾಂಸ್ಕೃತಿಕ ಪರಿಕಲ್ಪನೆಗಳೊಂದಿಗೆ ಅನನ್ಯ ಸೇವೆಗಳನ್ನು ಪರಿಗಣಿಸಿ ಸಾಲಿಗ್ರಾಮ ಗಣೇಶ್ ಶೆಣೈಯವರನ್ನು “ಕದಂಬ ಕಲಾರಾಧಕ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಶಿಯ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಹಾಗೂ ಕರ್ನಾಟಕ ಸಗಮ ಸಂಗೀತ ಪರಿಷತ್ ಸಹಯೋಗದಲ್ಲಿ 12-10-2025 ರಂದು ಆಯೋಜಿಸಿರುವ ಶಿರಶಿಯ ಹೋಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಕಾವೆಂಶ್ರೀ “ಕಾವ್ಯಯಾನ-ಭಾವಯಾನ” ಶತಕಂಠ ಗೀತಗಾಯನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಶೆಣೈಯವರಿಗೆ ಈ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಹಾಗೂ ಕರ್ನಾಟಕ ಸಗಮ ಸಂಗೀತ ಪರಿಷತ್ನ ಅಧ್ಯಕ್ಷರಾದ ಕದಂಬ ರತ್ನಾಕರ ತಿಳಿಸಿದ್ದಾರೆ.
ಕರ್ನಾಟಕ ಸಗಮ ಸಂಗೀತ ಪರಿಷತ್ ಸೇರಿದಂತೆ, ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ದಾವಣಗೆರೆ ಜಿಲ್ಲಾ ಛಾಯಾಗ್ರಾಹಕ ಸಂಘ, ಕರಾವಳಿ ಮಿತ್ರ ಮಂಡಳಿ, ಶ್ರೀ ಗಾಯತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು, ಶೆಣೈಯವರಿಗೆ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.