ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ ಶಿಪ್ ಮುಗಿಸಿ ಹೊಸ ವೃತ್ತಿಗೆ ತೆರಳಲಿರುವ ನೂತನ ಪದವೀಧರ ವೈದ್ಯರಿಗೆ ಶುಭ ಕೋರುವ ವಿಶಿಖಾನುಪ್ರವೇಶ ಎಂಬ ಕಾರ್ಯಕ್ರಮವನ್ನು ಗುರುವಾರ (ಸೆ.11) ಆಚರಿಸಲಾಯಿತು.
ಪ್ರಾರ್ಥನೆಯ ನಂತರ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ ಮಂಜುನಾಥ ಭಟ್ಟರವರು ಸ್ವಾಗತ ಹಾಗೂ ಆಶಯ ನುಡಿಗಳನ್ನಾಡಿದರು.
ಅನಂತರ ಇಲ್ಲಿನ ಪೂರ್ವ ಪ್ರಾಚಾರ್ಯ ಹಾಗೂ ಕಣಚೂರಿನ ಹಾಲಿ ವೈದ್ಯಕೀಯ ನಿರ್ದೇಶಕ ಡಾ. ಸುರೇಶ ನೆಗಳಗುಳಿಯವರು ಪ್ರಾಂಶುಪಾಲ ಡಾ. ಸಜಿತ್ ರವರ ಸಹಿತವಾಗಿ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು.
ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದ ಶಾಸ್ತ್ರದಲ್ಲಿ ಸುಶ್ರುತಾಚಾರ್ಯರು ಕಲಿಕೆ ಮುಗಿಸಿದ ನಂತರ ವೃತ್ತಿ ಧರ್ಮಕ್ಕೆ ತೆರಳುವ ಸಿದ್ಧತೆಗೆ 'ವಿಶಿಖಾನು ಪ್ರವೇಶ' ಎಂದು ಕರೆದಿದ್ದಾರೆ. ಅದೇ ರೀತಿ ಚರಕಾಚಾರ್ಯರು ವೃತ್ತಿ ಪೂರ್ವ ಶಪಥವನ್ನು ಸಹ ನಿರ್ದೇಶಿಸಿದ್ದಾರೆ. ಇದೇ ಶಪಥವೇ ಆಧುನಿಕವೈದ್ಯ ಪದ್ಧತಿಯಲ್ಲಿಯೂ ಹಿಪೋಕ್ರೆಟಿಸ್ ಉಲ್ಲೇಖಿಸಿದ್ದು ಕಂಡು ಬರುತ್ತದೆ. ವೈದ್ಯ ವೃತ್ತಿಯಲ್ಲಿ ಇರಬೇಕಾದ ವೈದ್ಯ ಮತ್ತು ರೋಗಿಗಳ ಸಂಬಂಧ ಹಾಗೂ ಶಿಸ್ತು ಬದ್ಧತೆಗಳು ಆತನಿಗೆ ಯಶಸ್ಸನ್ನು ನೀಡುವ ದಾರಿ ದೀಪಗಳಾಗಿವೆ. ಯುದ್ದಾಭ್ಯಾಸ ನಂತರ ಶಸ್ತ್ರ ಸನ್ನದ್ಧನಾಗುವ ಹಾಗೆ ಈ ಪ್ರಕ್ರಿಯೆಯೂ ನಡೆಯುತ್ತದೆ. ಇಲ್ಲಿ ಎಡವಿದರೆ ಅದು ಅಪರಾಧವೂ ಅಪಾಯಕಾರಿಯೂ ಆಗುವುದನ್ನು ಮರೆಯಬಾರದು ಎಂದರು.
ಅವರು ಮುಂದುವರಿದು ಸತತ ಅಭ್ಯಾಸ ಯಶದ ಪಂಚಾಂಗ ಎಂಬಂತೆ ಸಾಯುವ ತನಕವೂ ಆತ ವಿದ್ಯಾರ್ಥಿಯೇ ಆಗಿರುತ್ತಾನೆ ಎಂದು ಹಲವಾರು ವೈದ್ಯ ವೃತ್ತಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಚಾರ್ಯ ಡಾ. ಸಜಿತ್ ಎಂ ರವರು ವಿದ್ಯಾರ್ಥಿಯಾಗಿದ್ದಾಗ ಇರುವ ಶ್ರದ್ಧೆಯೇ ಮುಂದಿನ ವೃತ್ತಿ ಜೀವನಕ್ಕೆ ಬುನಾದಿ ಹಾಗೂ ಕಲಿಸಿದ ಗುರು ಹಾಗೂ ಕಲಿತ ಸಂಸ್ಥೆಯನ್ನು ಎಂದಿಗೂ ಮರೆಯ ಬಾರದು ಎಂದರು.
ಪ್ರಾಧ್ಯಾಪಕರಾದ ಡಾ ಸುಮಂತ್ ಶೆಣೈ, ಡಾ ಮಹಾಬಲೇಶ್ ಸರ್ವಜ್ಞ, ಡಾ ಸುಕೇಶ, ಡಾ ಸುಬ್ರಹ್ಮಣ್ಯ ಪದ್ಯಾಣ, ಡಾ ಸುರೇಖಾ ಪೈ, ಡಾ ಸುರೇಶ ವೈ ಮುಂತಾದವರು ಉಪಸ್ಥಿತರಿದ್ದರು.
ಇಂಟರ್ನಿಗಳ ಪರವಾಗಿ ಡಾ ಅಂಬಿಕಾ ಮತ್ತಿತರರು ತಮ್ಮಕಲಿಕಾ ಅನುಭವಗಳನ್ನು ಹಂಚಿಕೊಂಡರು. ಪ್ರಾಧ್ಯಾಪಕ ಡಾ ಕೆ. ಕಿರಣ್ ಧನ್ಯವಾದ ಸಮರ್ಪಿಸಿದರು. ಉಪಾನ್ಯಾಸಕಿ ಡಾ ಸ್ಮಿತಾ ಸಂಪೂರ್ಣ ನಿರ್ವಹಣೆ ಮಾಡಿದ್ದರು.
ಇದೇ ವೇಳೆ ಸಂಸ್ಥೆಯ ಚೇರ್ಮನ್ ಡಾ ಮೋಹನ ಆಳ್ವರಿಗೆ ಡಾ ಸುರೇಶ ನೆಗಳಗುಳಿಯವರ ನೂತನ ಗಜಲ್ ಸಂಕಲನ ಕುವಲಯವನ್ನು ನೀಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ