ಉಜಿರೆ: ಎಸ್ಡಿಎಂ ಕಾಲೇಜಿನಲ್ಲಿ ಎನ್ಸಿಸಿ ಘಟಕದ ವತಿಯಿಂದ ನದಿ ಸಂರಕ್ಷಣೆ ಮತ್ತು ಜಲ ಸಂಪನ್ಮೂಲಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ನದಿಗಳ ದಿನಾಚರಣೆ ಸೆ.25ರಂದು ನಡೆಯಿತು.
ಮುಖ್ಯ ಅತಿಥಿ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಎ.ಜೆ. ಮಾತನಾಡಿ, ವಿದ್ಯಾರ್ಥಿಗಳು ಪರಿಸರ, ನದಿ ಸಂರಕ್ಷಣೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದರು.
ಜೀವನವನ್ನು ನದಿಗೆ ಹೋಲಿಸುತ್ತಾರೆ. ನದಿಯು ಹೇಗೆ ತನಗೆದುರಾದ ಕಲ್ಲು ಮುಳ್ಳುಗಳನ್ನು ತನ್ನೊಳಗೆ ಮುಳುಗಿಸಿಕೊಂಡು ಹರಿಯುತ್ತದೆಯೋ ಅದೇ ರೀತಿ ನಮ್ಮ ಜೀವನದಲ್ಲಿಯೂ ಕಲ್ಲು ಮುಳ್ಳಿನಂತೆ ಎದುರಾಗುವ ಕಷ್ಟಗಳನ್ನು ಎದುರಿಸಿ ಮುಂದೆ ಹೋಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ಭಾನುಪ್ರಕಾಶ್ ಬಿ.ಇ., ಹರಿಯುವ ನದಿಯಂತೆಯೇ ಬದುಕು ಕೂಡ ಹಿಂದಕ್ಕೆ ಹರಿಯುವುದಿಲ್ಲ. ಹಾಗಾಗಿ ನಾವು ಇಡುವ ಒಂದೊಂದು ಹೆಜ್ಜೆಯೂ ಸರಿಯಾದ ನಿರ್ಧಾರವಾಗಿರಬೇಕು ಎಂದರು.
ಎನ್ಸಿಸಿ ಕೆಡೆಟ್ ಗಳು ನದಿ ಹಾಗೂ ನೀರಿನ ಸಂರಕ್ಷಣೆ ಸಂಬಂಧಿತ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ಕೊಟ್ಟರು.
ಎನ್ಸಿಸಿ ಘಟಕದ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಅನಾವರಣಗೊಳಿಸಲಾಯಿತು. ‘ಕಪ್ಪೆರಾಗ’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕೆಡೆಟ್ ಜಶ್ಮಿತ ಸ್ವಾಗತಿಸಿದರು, ಕೆಡೆಟ್ ಶೀತಲ್ ಅತಿಥಿ ಪರಿಚಯ ನೀಡಿದರು. ಕಾರ್ಪೊರಲ್ ರಾಮಸ್ವಾಮಿ ವಂದಿಸಿದರು. ಕಾರ್ಪೊರಲ್ ಉನ್ನತಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
