ಮಂಗಳೂರು: ಸೇವೆ ಮೂಲಕ ಭವಿಷ್ಯ ಕಟ್ಟಬೇಕು. ಬದುಕಿನಲ್ಲಿ ಶಿಸ್ತು, ಸಂಯಮವಿದ್ದರೆ ಮಾತ್ರ ಸೇವಾ ಮನೋಭಾವ ಮೂಡುತ್ತದೆ. ಸೇವಾ ಮನೋಭಾವ ಶಾಲಾ ಕಾಲೇಜುಗಳಿಂದ ಬರಬೇಕು. ಸೇವೆಗೆ ಸಾವಿಲ್ಲ ಅದು ಚಿರಂಜೀವಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ದಯಾನಂದ ನಾಯಕ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೇವೆ ಮಾಡಲು ನಿಸ್ವಾರ್ಥವಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ನಿಸ್ವಾರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಎನ್ಎಸ್ಎಸ್ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಬೇಕು.
ವಿದ್ಯಾರ್ಥಿಗಳು ಬಾಹ್ಯವಾಗಿ ಸೆಳೆಯಲ್ಪಡುವ ನಕಾರಾತ್ಮಕತೆಗೆ ಕಡೆಗೆ ಮುಖ ಮಾಡದೇ ಜಾಗರೂಕರಾಗಿ, ಒಗ್ಗಟ್ಟಿನಿಂದ ಕೆಸಲ ಮಾಡಬೇಕಿದೆ. ಮನುಷ್ಯನಿಗೆ ಹಕ್ಕಿಗಳ ಹಾಗೆ ಹಾರಲು ಸಾಧ್ಯವಿಲ್ಲದಿದ್ದರೂ, ಮಾನಸಿಕವಾಗಿ ಹಾರಲು ಸಾಧ್ಯವಿದೆ. ಬದುಕಿನಲ್ಲಿ ಉತ್ತಮ ಗುಣಗಳನ್ನು ಸಾಮಾಜಿಕ ಪರಿಸರದಲ್ಲಿ ಬೆರೆತು ಕಲಿಯಬೇಕಿದೆ.
ಸಮಾಜಕ್ಕೆ ಯಾವಾಗಲೂ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ಹೊರತು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ಕೈ ಜೋಡಿಸಬಾರದು. ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಸಮಾಜದಲ್ಲಿರುವ ಅಶಾಂತಿಯನ್ನು ಹೋಗಲಾಡಿಸುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ನಾಯಕತ್ವ ಎನ್ನುವುದು ಸಮಾಜದಲ್ಲಿ ಹೇಗೆ ಮಾದರಿಯಾಗಿದ್ದೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಚೈತನ್ಯ ಹೆಚ್ಚಿಸುವುದರ ಜೊತೆಗೆ ಜೀವನದ ಪಾಠವನ್ನು ಹೇಳಿಕೊಡುತ್ತದೆ.
ಕೇವಲ ಸಮಾಜವನ್ನು ಸ್ವಚ್ಛ ಮಾಡಿದರೆ ಸಾಲದು, ಅದರ ಜೊತೆಗೆ ನಮ್ಮ ಮನಸ್ಸನ್ನು ಸ್ವಚ್ಛಗಳಿಸುವ ನಿಟ್ಟಿನಲ್ಲಿ ನಮ್ಮ ಆಲೋಚನೆ ನಡೆಸಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಇದೆ. ಆ ಶಕ್ತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಪರಿಪೂರ್ಣವಾಗಿ ಹಾಗೂ ಮೌಲ್ಯಯುತವಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಕಿವಿ ಮಾತುಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಸುರೇಶ್, ಜಯಶ್ರೀ, ಭವ್ಯ ಸೇರಿದಂತೆ ಇತರೆ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

