ಕೋಟ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಇದರ ವತಿಯಿಂದ ಸಂಸ್ಥೆಯ ದಶಮಾನೋತ್ಸವ ಸಮಾರಂಭ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಶಮಾನೋತ್ಸವ ಗೌರವ ಪುರಸ್ಕಾರ ಪ್ರಧಾನ ಕಾರ್ಯಕ್ರಮ ಕೋಟ ಆಶ್ರಿತ್ ವಿದ್ಯಾಸಂಸ್ಥೆಯಲ್ಲಿ ಸೆ.15 ರಂದು ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕನ್ನಡ ಜಾನಪದ ಪರಿಷತ್ ಕಳೆದ 10 ವರ್ಷದಿಂದ ಜನಪದ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜನಪದವು ಅಳಿದರೆ ಮಾನವ ಕುಲವೇ ನಾಶವಾದಂತೆ ನಮ್ಮ ಹಿರಿಯರು ನೀಡಿದ ಈ ಅಪೂರ್ಣವಾದ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೋಟ ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ಜನಪದವು ನಮ್ಮ ಪೂರ್ವಜರ ಜೀವನ ಪದ್ಧತಿಯಾಗಿತ್ತು. ಜನಪದವು ದೊಡ್ಡ ಸಾಗರವಿದ್ದಂತೆ. ಇದರ ಸದುಪಯೋಗವನ್ನು ನಾವೆಲ್ಲರೂ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಜನಪದ ಕುರಿತು ಮಾಹಿತಿ ನೀಡಿದರು. ಸಭಾಧ್ಯಕ್ಷತೆಯನ್ನು ಆಶ್ರಿತ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿದ್ಯಾಧರ್ ಶೆಟ್ಟಿ ವಹಿಸಿ ಶುಭ ಹಾರೈಸಿದರು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಮೋಹನ್ ಎಸ್, ಉದ್ಯಮಿ ಸುಧೀರ್ ಶೆಟ್ಟಿ, ಕನ್ನಡ ಜಾನಪದ ಪರಿಷತ್ ಬೈಂದೂರು ತಾಲೂಕಿನ ಅಧ್ಯಕ್ಷ ಗಣೇಶ್ ದೇವಾಡಿಗ, ಹೆಬ್ರಿ ತಾಲೂಕು ಅಧ್ಯಕ್ಷೆ ಶೈಲಜಾ ಶಿವಪುರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಿ.ಟಿ ನಾಯ್ಕ್, ಉಡುಪಿ ತಾಲೂಕ ಅಧ್ಯಕ್ಷರಾದ ಮಾಯಾ ಕಾಮತ್, ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ನರಸಿಂಹ ನಾಯಕ್, ಜಿಲ್ಲಾ ಕಾರ್ಯಾಧ್ಯಕ್ಷ ಉದಯ್ ಕುಮಾರ್, ಕೋಶಾಧಿಕಾರಿ ಚಂದ್ರ ಬಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿಯ ಆಪತ್ಬಾಂಧವ ಎಂದು ಹೆಸರಾದ ಖ್ಯಾತ ಸಮಾಜಸೇವಕ ಈಶ್ವರ್ ಮಲ್ಪೆ ರವರಿಗೆ ದಶಮಾನೋತ್ಸವ ವಿಶೇಷ ಗೌರವ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಗೀತ ಕ್ಷೇತ್ರದ ಕೆ.ಕೆ ಕಾಳವಾರ್ಕಾರ್, ಕನ್ನಡ ಪ್ರಾಧ್ಯಾಪಕ ಸಂದೀಪ್ ಕುಮಾರ್ ಶೆಟ್ಟಿ, ಭಜನಾ ಕ್ಷೇತ್ರದ ರಾಜೇಂದ್ರ ಬಸ್ರೂರು, ಜಾನಪದ ಸಂಗೀತ ಕ್ಷೇತ್ರದ ಡಾ. ಮಂಜುನಾಥ್ ದೇವಾಡಿಗ, ಯಕ್ಷಗಾನ ಕ್ಷೇತ್ರದ ಸತೀಶ್ ಮಡಿವಾಳ, ದಫ್ ಕುಣಿತದ ಮಹಮ್ಮದ್ ಬಶೀರ್ ಉಸ್ತಾದ್, ಶಶಿ ಹೆಜಮಾಡಿ (ಸಂಗೀತ ಕ್ಷೇತ್ರ), ಸಖಾರಾಮ್ ಹಾವಂಜೆ (ಸಂಗೀತ), ಮಾಧವ ಪಾಣರ (ದೈವನತ೯ಕ), ನಾರಾಯಣ ಮೊಗವೀರ ಬಿಜೂರು (ಯಕ್ಷಗಾನ), ರವರುಗಳಿಗೆ ದಶಮಾನೋತ್ಸವ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕುಂದಾಪುರ ತಾಲೂಕು ಅಧ್ಯಕ್ಷೆ ಸುಪ್ರಿತಾ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್ ಸನ್ಮಾನಿತರ ಪರಿಚಯ ಮಾಡಿದರು. ಚಂದ್ರ ಬಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಪ್ರಸ್ತಾವನೆಗೈದು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಗಣೇಶ್ ಗಂಗೊಳ್ಳಿ, ಸಂಸ್ಥೆಯ ಮುಖ್ಯಸ್ಥ ಡಾ.ವಿದ್ಯಾಧರ್ ಶೆಟ್ಟಿ, ಪ್ರಾಂಶುಪಾಲ ಡಾ. ಮೋಹನ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಬಳಿಕ ಡಾ. ಗಣೇಶ್ ಗಂಗೊಳ್ಳಿ ಮತ್ತು ಬಳಗದ ವತಿಯಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ಸದಸ್ಯರು ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ