ಬೆಂಗಳೂರು: ವಿಕ್ರಮ ಟಿವಿಯ ಸಂಪಾದಕರಾದ ಮಹೇಶ್ ವಿಕ್ರಮ ಹೆಗ್ಡೆ ಅವರು ಸಾಮಾಜಿಕ ಜಾಲತಾಣ Facebook ಮೂಲಕ ರಾಜ್ಯದಲ್ಲಿ ನಡೆದ ಘಟನೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿರುವುದನ್ನು ಹಿಂದೂ ಜನಜಾಗೃತಿ ಸಮಿತಿ ಖಂಡಿಸಿದೆ. ಇದು ಸಂಪೂರ್ಣವಾಗಿ ಭಾರತೀಯ ಸಂವಿಧಾನದ ಕಲಂ 19(1)(a) – ವಾಕ್ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ತರುವ ಕೃತ್ಯ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಅಧ್ಯಕ್ಷರಾದ ಪುನೀತ್ ಕೆರೆಹಳ್ಳಿ ಅವರನ್ನು, ಅವರು ಮದ್ದೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಮತ್ತು ಅಲ್ಲಿ "ದ್ವೇಷ ಭಾಷಣ" ಮಾಡುವ ಸಾಧ್ಯತೆ ಇದೆ ಎಂಬ ನೆಪದಲ್ಲಿ ಮುಂಜಾಗ್ರತಾ ಬಂಧನಕ್ಕೆ ಒಳಪಡಿಸಿರುವುದು ಕೂಡ ಕಾನೂನು ಬಾಹಿರ ಎಂದು ಪ್ರತಿಕ್ರಿಯಿಸಿದ್ದಾರೆ.
CrPC ಸೆಕ್ಷನ್ 151 ಅಡಿಯಲ್ಲಿ ಮುಂಜಾಗ್ರತಾ ಬಂಧನವು ಗಂಭೀರ ಅಪರಾಧವನ್ನು ತಡೆಯಲು ಮಾತ್ರ ಅನ್ವಯವಾಗಬೇಕಾದರೆ, ಇಲ್ಲಿ ಯಾವುದೇ ಅಪರಾಧ ನಡೆದಿದೆ ಎಂಬುದು ಸಾಬೀತಾಗಿಲ್ಲ. ಆದ್ದರಿಂದ ಈ ಬಂಧನವು ಅಸಂವಿಧಾನಿಕವಾಗಿದೆ.
ಇಂತಹ ಕ್ರಮಗಳು ಸರ್ಕಾರದ ಪಕ್ಷಪಾತಿ ನಿಲುವನ್ನು ಬಹಿರಂಗಪಡಿಸುತ್ತವೆ. ಗಣೇಶೋತ್ಸವದ ಶಾಂತಿಯುತ ಆಚರಣೆಗಳನ್ನು ಭದ್ರಗೊಳಿಸುವ ಬದಲು, ಹಿಂದೂ ನಾಯಕರನ್ನೇ ಗುರಿಯಾಗಿಸಿ ಬಂಧಿಸುವ ಮೂಲಕ, ಸರ್ಕಾರವು ಹಿಂದೂಗಳ ಧಾರ್ಮಿಕ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ. ಹಿಂದೂ ಜನಜಾಗೃತಿ ಸಮಿತಿ ಈ ಅನ್ಯಾಯ ಬಂಧನವನ್ನು ತೀವ್ರವಾಗಿ ಖಂಡಿಸುತ್ತಿದ್ದು,
* ಮಹೇಶ್ ವಿಕ್ರಮ ಹೆಗಡೆ ಮತ್ತು ಪುನೀತ್ ಕೆರೆಹಳ್ಳಿಯವರ ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು.
* ಭವಿಷ್ಯದಲ್ಲಿ ಯಾವುದೇ ಹಿಂದೂ ನಾಯಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜಕೀಯ ಅಥವಾ ಧಾರ್ಮಿಕ ಪಕ್ಷಪಾತದ ಆಧಾರದ ಮೇಲೆ ಗುರಿಯಾಗಿಸುವುದನ್ನು ನಿಲ್ಲಿಸಬೇಕು.
* ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರಬೇಕು ಮತ್ತು ರಾಜ್ಯದ ಕಾನೂನು - ಸುವ್ಯವಸ್ಥೆಯನ್ನು ಸಮಾನತೆಯ ಆಧಾರದ ಮೇಲೆ ಪಾಲಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


