ನಾರಾಯಣ ಗುರು ಜಯಂತಿ ಸಂಭ್ರಮದ ಆಚರಣೆ; 11 ವಿದ್ಯಾರ್ಥಿಗಳ ದತ್ತು ಸ್ವೀಕಾರ

Upayuktha
0

ಜಯಂತಿ ಉತ್ಸವ ಅಧ್ಯಕ್ಷ ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ಘೋಷಣೆ





ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಸೆಪ್ಟೆಂಬರ್ 16ರಂದು ಕಲಬುರಗಿಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಈಡಿಗ ಸಮುದಾಯದ 11 ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿ ಜಯಂತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತಿ ಉತ್ಸವದ ಅಧ್ಯಕ್ಷರಾದ ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ಘೋಷಣೆ ಮಾಡಿದ್ದಾರೆ.


ಕಲಬುರಗಿಯ ರಾಮ ಮಂದಿರ ಸಮೀಪದ ಅಲ್ಲಿ ದತ್ತ ಡೆವಲಪರ್ಸ್ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 17 ರಂದು ನಡೆದ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಲು ಸಮಾಜದ ಹಿರಿಯ ಮುಂದಾಳು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಸಮ್ಮತಿ ಸೂಚಿಸಿದ್ದಾರೆ ಹಾಗೂ ಚಲನಚಿತ್ರ ರಂಗದ ಜನಪ್ರಿಯ ನಟ ವಿಜಯ ರಾಘವೇಂದ್ರ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಕಲಬುರಗಿ ಜಿಲ್ಲೆಯ ಎಂಟು ತಾಲೂಕುಗಳ ಸಮುದಾಯದಲ್ಲಿರುವ ಬಡ 11 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎಂಟರಿಂದ ಹತ್ತನೇ ತರಗತಿಯವರೆಗೆ ಪೂರ್ಣ ಶಿಕ್ಷಣದ ಖರ್ಚು ವೆಚ್ಚವನ್ನು ನೀಡುವುದಕ್ಕಾಗಿ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲು ನಿರ್ಧರಿಸಲಾಗಿದೆ ಎಂದು ಹಿರಿಯ ಮುಖಂಡರಾದ ಸತೀಶ್ ವಿ. ಗುತ್ತೇದಾರ್ ಹೇಳಿದರು.


ಈಗಾಗಲೇ ಸಮಾಜದ ದಾನಿಗಳು ದತ್ತು ಸ್ವೀಕರಿಸಲು ಒಪ್ಪಿಕೊಂಡಿದ್ದು ಜಯಂತಿ ಉತ್ಸವದ ದಿನ ವಿದ್ಯಾರ್ಥಿಗಳನ್ನು ಕರೆಸಿ, ಸನ್ಮಾನಿಸಿ ದತ್ತು ಸ್ವೀಕಾರ ಪತ್ರವನ್ನು ನೀಡಲಾಗುವುದು. ಈ ಬಾರಿಯ ಶೋಭಾ ಯಾತ್ರೆಯಲ್ಲಿ ಸಾಂಸ್ಕೃತಿಕ ವೈಭವ ಬಿಂಬಿಸುವ ಹುಲಿ ಕುಣಿತ ತಂಡ, ಚಿಟ್ಟಲಗೆ, ಡೊಳ್ಳು ಮೇಳ, ಭಜನಾ ತಂಡ ಮುಂತಾದವುಗಳು ವಿಶೇಷ ಆಕರ್ಷಣೆಯಾಗಲಿದೆ ಎಂದು ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ಹೇಳಿದರು. ಜಯಂತಿ ಉತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ಆಚರಿಸುವ ಭಾಗವಾಗಿ ವಿದ್ಯಾರ್ಥಿ ಪುರಸ್ಕಾರ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆಸುವುದರ ಮೂಲಕ ನೂತನ ಜಯಂತಿ ಉತ್ಸವ ಸಮಿತಿಯು ಉತ್ತಮ ನಿರ್ಧಾರ ಕೈಗೊಂಡಿದೆ ಎಂದರು.


ಜಯಂತಿ ಉತ್ಸವ ಆಚರಣೆಯು ಸಮಾಜವನ್ನು ಬಲಿಷ್ಠಗೊಳಿಸಲು ಹಾಗೂ ಗುರುಗಳ ತತ್ವ ಸಂದೇಶವನ್ನು ಪಾಲಿಸಲು ಪ್ರೇರಣೆ ನೀಡಬೇಕು. ಆ ನಿಟ್ಟಿನಲ್ಲಿ ನೂತನ ಸಮಿತಿಯು ಉತ್ಸವವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿ ಮೆರುಗು ತರಬೇಕು ಎಂದು ಚಿತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ  ತಿಳಿಸಿದರು.


ಜಯಂತಿ ಉತ್ಸವದ ದಿನ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಹಾಗೂ ವೀರಶೈವ ಸಮಾಜದ ಪೂಜ್ಯರನ್ನು ಕರೆಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಗೌರವ ತಂದುಕೊಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಚ್ಚುಕಟ್ಟಾಗಿ ನಡೆಸುವಂತೆ ಸ್ವಾಮೀಜಿ ಸಲಹೆ ನೀಡಿದರು. ಜಯಂತಿ ಉತ್ಸವದ ಸಂಚಾಲಕ ಡಾ. ಸದಾನಂದ ಪೆರ್ಲ ಪ್ರಸ್ತಾವಿಕವಾಗಿ ಮಾತನಾಡಿ, ವಿವಿಧ ಸಮಿತಿಗಳ ಹಾಗೂ ಶೋಭಾಯಾತ್ರೆಯ ರೂಪುರೇಷೆ ನೀಡಿ ಜಯಂತಿ ಉತ್ಸವವನ್ನು ಸ್ಮರಣೆಯ ಉತ್ಸವವನ್ನಾಗಿ ಮಾಡಲು ಎಲ್ಲರೂ ಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಜಯಂತ್ಯೋತ್ಸವದ ಸಮಿತಿಯ ಅಧ್ಯಕ್ಷರಾದ ಡಾ. ವಿನಯ್ ಗುತ್ತೇದಾರ್ ಈಟಿಗ ಸಮುದಾಯದ ಸ್ವಾಮೀಜಿಗಳಾದ ಡಾಕ್ಟರ್ ಪ್ರಣವಾನಂದ ಶ್ರೀಗಳನ್ನು ಶಾಲು ಹಾರ ಹಾಗೂ ಕಾಣಿಕೆ ನೀಡಿ ಗೌರವಿಸಿದರು.


ಸಮಾಜದ ಹಿರಿಯ ಮುಖಂಡರಾದ ಮಹಾದೇವ ಗುತ್ತೇದಾರ್, ವೆಂಕಟೇಶ್ ಎಂ ಕಡೇಚೂರ್, ಸಂತೋಷ್ ಗುತ್ತೇದಾರ್ ಆಳಂದ್, ಪ್ರವೀಣ್ ಶಿವಯ್ಯ ಗುತ್ತೇದಾರ್, ಶಿವರಾಜ್ ಗುತ್ತೇದಾರ್ ಜೇವರ್ಗಿ, ಹರ್ಷಾನಂದ ಗುತ್ತೇದಾರ್, ಮಲ್ಲಿಕಾರ್ಜುನ ಕುಕ್ಕುಂದಿ,ಮಹೇಶ್ ಹೋಳ್ಕುಂದ, ವಿನಾಯಕ ಚಂದ್ರಕಾಂತ್ ಗುತ್ತೇದಾರ್, ಬಸಯ್ಯ ಗುತ್ತೇದಾರ್ ತೆಲ್ಲೂರ, ರವಿ ದತ್ತು ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ತಡಕಲ್, ಬಸಯ್ಯ ಗುತ್ತೇದಾರ್ ಜೀವಣಗಿ, ರಾಜೇಶ್ ದತ್ತು ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಶರಣಯ್ಯ ಗುತ್ತೇದಾರ್ ಕೊಂಚೂರು, ತಿಮ್ಮಪ್ಪ ಗಂಗಾವತಿ, ವಿಶ್ವನಾಥ ಈಳಿಗೇರ ಲಿಂಗಸುಗೂರು, ಜಗದೇವ ಗುತ್ತೇದಾರ್ ಕಲ್ ಬೇನೂರು, ದೇವೇಂದ್ರಪ್ಪ ಗುತ್ತೇದಾರ್ ಜೇವರ್ಗಿ, ಅಂಬಯ್ಯ ಗುತ್ತೇದಾರ್ ಶಾಬಾದಿ ಮತ್ತಿತರ ಅನೇಕರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top