ಸ್ಫೂರ್ತಿ ಸೆಲೆ: ಸ್ನೇಹ ಅಮೃತಕ್ಕಿಂತ ಮಿಗಿಲು

Chandrashekhara Kulamarva
0


ಹಲೋ, ಹೇಗಿದ್ದೀರಾ? ಹೇಗಿದೆ ನಿಮ್ಮ ಫ್ರೆಂಡ್ಶಿಪ್ ಕಾನ್ಸೆಪ್ಟ್?


ನಾವು ಪ್ರತಿ ವರ್ಷ ಆಗಸ್ಟ್ ಮೊದಲನೇ ಭಾನುವಾರ "ವಿಶ್ವ ಸ್ನೇಹ ದಿನ"ವನ್ನಾಗಿ ಆಚರಿಸಲಾಗುತ್ತಿದೆ. ರಕ್ತ ಸಂಬಂಧಕ್ಕಿಂತ. ಸ್ನೇಹ ಸಂಬಂಧ ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.


ಸ್ನೇಹವೆಂದರೆ ನಮಗೆ ಮೊದಲು ನೆನಪು ಬರುವುದು ಕೃಷ್ಣ, ಸುಧಾಮರ ಸ್ನೇಹ ಮತ್ತು ಕರ್ಣ ಮತ್ತು ದುರ್ಯೋಧನರ ಸ್ನೇಹ.

ಒಂದು ಹಿಡಿ ಅವಲಕ್ಕಿಗೆ ತನ್ನ ರಾಜ್ಯವನ್ನೇ ಕೊಡಲು ತಯಾರಾದ ಕೃಷ್ಣ ಸ್ನೇಹದ  ಉನ್ನತ ಉದಾಹರಣೆ. ಈಗಲೂ  ನಮ್ಮಲ್ಲಿ ಅವಲಕ್ಕಿ ಕೊಟ್ಟರೆ ಬೇಡ ಅನ್ನ ಬಾರದು ಎಂಬ ಮಾತಿದೆ.


ತಾನು ಸಾಯುತ್ತೇನೆ ಎಂದು ಗೊತ್ತಿದ್ದರೂ ಕೊನೆ ಉಸಿರಿನ ತನಕ ದುರ್ಯೋಧನನ ಪರ ಹೋರಾಡಿ ವೀರ ಮರಣವನ್ನಪ್ಪಿದ ಕರ್ಣನ ಗುಂಡಿಗೆ ಎಲ್ಲರಿಗೂ ಬರುವುದಿಲ್ಲ.


ಅಂಗನವಾಡಿಯಲ್ಲಿ ಚಾಕಲೇಟ್ ಹಂಚಿಕೊಂಡು ಉಂಟಾದ ಸ್ನೇಹ ಕಾಲೇಜಿನ ಲಾಸ್ಟ್ ಬೆಂಚಿನ ತನಕ ಮುಂದುವರಿಯುತ್ತದೆ. ಸ್ಕೂಲಿನ ಕ್ಲಾಸ್ ಮೇಟ್, ಡಿಗ್ರಿಯ ಬ್ಯಾಚ್ಮೆಟ್, ಆಫೀಸಿನ ಕಲೀಗ್ ಎಲ್ಲರೂ ಸ್ನೇಹ ಸಂಬಂಧಕ್ಕೆ ಒಳಗಾದವರೆ.


ಯೌವನ ಮುಗಿದು ವೃದ್ದಾಪ್ಯಕ್ಕೆ ಬಂದಾಗ ಸ್ನೇಹ ಸಂಬಂಧಗಳು ಮತ್ತೆ ಬೇಕೆನಿಸುತ್ತವೆ. ಆಗ ಹಿಂದಿನ ಸಿಟ್ಟು, ದ್ವೇಷ, ಹಟಕ್ಕೆ ಯಾವ ಬೆಲೆಯೂ ಇಲ್ಲ. ಮನೆಯಲ್ಲಿ ಏನಾದರೂ ಸಮಾರಂಭ ಇದ್ದರೆ ನನ್ನ ಗೆಳೆಯನ್ನ ಕರಿಯಪ್ಪ ಎಂದು ಮಕ್ಕಳ ಮುಂದೆ ಅಲವತ್ತುಕೊಳ್ಳುವ ಹಿರಿಯರನ್ನು ನೋಡಿದ್ದೇನೆ. ಸ್ನೇಹ ಸಂಬಂಧ ರಕ್ತ ಸಂಬಂಧಕ್ಕೂ ಮೀರಿದ್ದು.


ಮನೆಯ ಸದಸ್ಯರ ಮುಖದ ಮೇಲಿನ ಪ್ರಶ್ನಾರ್ಥಕ ಚಿಹ್ನೆ ನೋಡಿದಾಗಲೆಲ್ಲ ಸ್ನೇಹ ಹಿತ ಅನಿಸುತ್ತದೆ. ಆದರೆ ಹೆಣ್ಣು ಮಕ್ಕಳ ಸ್ಥಿತಿ ಇದಕ್ಕಿಂತ ಬೇರೆ ಇಲ್ಲ. ಭಜನಾ ಮಂಡಳಿ ಸ್ನೇಹಿತೆಯರು, ಶಾಪಿಂಗ್ ಗೆಳತಿಯರು, ಗುಸು ಗುಸು ಗೆಳತಿಯರು ಎಂದು ತಮ್ಮ ಲೋಕವನ್ನೇ ಸೃಷ್ಟಿಸಿ ಇರುತ್ತಾರೆ. ಪಕ್ಕದ್ಮನೆ ಜಲಜಾಕ್ಷಮ್ಮ, ಸಾವಿತ್ರಮ್ಮ ಹೊಸ ಸೀರೆ ಉಟ್ಟು ಕೊಂಡರೂ ಕಣ್ಣು ಕೆಂಪಗೆ ಮಾಡಿ ಕೊಂಡರೂ, ಮನೆಗೆ ಬಂದಾಗ ಸೊಸೆಯರ ಮುಂದೆ ಇವಳು ನಿಮ್ಮ ಅತ್ತೆ ಇದ್ದ ಹಾಗೆ ಎಂದು ಗೆಳತಿಯನ್ನು ಪರಿಚಯಿಸುವ ಸ್ನೇಹ ಮಧುರ ಎನಿಸುತ್ತದೆ.


ಬನ್ನಿ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿ ಬದುಕೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ


إرسال تعليق

0 تعليقات
إرسال تعليق (0)
To Top