ಪೆರ್ಲ: "ಭಾರತೀಯ ಸಾಹಿತ್ಯವೆಲ್ಲವೂ ಪ್ರಾಚೀನ ಕಾವ್ಯಗಳ ತಳಹದಿಯಲ್ಲಿ ನಿಂತಿವೆ. ಕಾವ್ಯಗಳ ಆಸ್ವಾದನೆಗೆ ಗಮಕ ಪೂರಕವಾಗಿದೆ. ಅಲ್ಲಿ ಸುಶ್ರಾವ್ಯವಾದ ವಾಚನ ಹಾಗೂ ಪ್ರೌಢಶೈಲಿಯ ವ್ಯಾಖ್ಯಾನವೂ ಮೇಳೈಸಿಕೊಂಡಿವೆ. ಆದುದರಿಂದ ನಮ್ಮ ಕಾವ್ಯ ಪರಂಪರೆಯ ಉತ್ತುಂಗಕ್ಕೆ ಗಮಕ ಕಲೆ ಪೂರಕವಾಗಿದೆ" ಎಂದು ಸಾಹಿತಿ, ಶಿಕ್ಷಣತಜ್ಞ ವಿ.ಬಿ. ಕುಳಮರ್ವ ಅಭಿಪ್ರಾಯ ಪಟ್ಟರು.
ಅವರು ಶನಿವಾರ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವರ ಶ್ರೀ ಸನ್ನಿಧಿಯಲ್ಲಿ ಗಮಕಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಜರಗಿದ ಗಮಕ ಶ್ರಾವಣದ ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಮಿತ್ತೂರು ಪುರುಷೋತ್ತಮ ಭಟ್ ಅವರು ದೀಪ ಬೆಳಗುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ "ಭಾರತೀಯ ಸಂಸ್ಕೃತಿಯ ನೆಲೆ-ಬೆಲೆಗಳು ಗಮಕ ಕಲೆಯಲ್ಲಿ ಹಾಸುಹೊಕ್ಕಾಗಿವೆ" ಎಂದು ಅಭಿಪ್ರಾಯ ಪಟ್ಟರು. ದೇವಾಲಯ ಆಡಳ್ತೆ ಮೊಕ್ತೇಸರರಾದ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಅವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ "ಪ್ರಾಚೀನ ಗಮಕ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ" ಎಂದು ಕರೆಯನ್ನಿತ್ತರು.
ಗಮಕಿಗಳಾದ ಶ್ರೀ ಕೊಚ್ಚಿ ಗೋಪಾಲಕೃಷ್ಣ ಭಟ್ಟರು ತೊರವೆರಾಮಾಯಣದಿಂದಾಯ್ದ "ದಶರಥನ ವಿಲಾಪ ಮತ್ತು ಋಷ್ಯಶೃಂಗನ ಆಗಮನ" ಎಂಬ ಭಾಗವನ್ನು ಸುಶ್ರಾವ್ಯವಾಗಿ ವಾಚನ ಗೈದರು. ನಿವೃತ್ತ ಶಿಕ್ಷಕ ಪೆಲ್ತಾಜೆ ಶ್ರೀಹರಿ ಭಟ್ ಅವರು ವ್ಯಾಖ್ಯಾನ ಮಾಡಿದರು.
ವಿ.ಬಿ.ಕುಳಮರ್ವ ವಿರಚಿತ ಭಾಮಿನಿ ಷಟ್ಪದಿಯ ಗಮಕ ಗೀತೆಯನ್ನು ಶ್ರೀಮತಿ ಯಶೋದಾ ಭಟ್ ಉಪ್ಪಂಗಳ ಅವರು ಪ್ರಾರ್ಥನೆಯ ರೂಪದಲ್ಲಿ ಹಾಡಿದರು. ಕೋಡ್ಮಾಡು ಸುಬ್ರಹ್ಮಣ್ಯ ಭಟ್ ಅವರು ಶುಭಾಶಂಸನೆಯೊಂದಿಗೆ ವಂದನಾರ್ಪಣೆ ಗೈದರು. ನಿವೃತ್ತ ಶಿಕ್ಷಕ ಲೋಕನಾಥ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಣೆ ಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


