ಉಡುಪಿ: ಬ್ರಹ್ಮಚರ್ಯ ವಾನಸಪ್ರಸ್ಥ ಮತ್ತು ಸನ್ಯಾಸ ಈ ಮೂರೂ ಆಶ್ರಮಗಳಿಗೆ ಗೃಹಸ್ಥಾಶ್ರಮವೇ ಆಶ್ರಯವಾಗಿದೆ. ಆದ್ದರಿಂದ ಗೃಹಸ್ಥಾಶ್ರಮವನ್ನು ಶ್ರೇಷ್ಠವೆಂದೂ ಕರೆದಿರುವುದು. ಸನ್ಯಾಸಿಗಳು, ಯತಿಗಳಾದವರು ಚಾತುರ್ಮಾಸ್ಯ ವ್ರತವನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಕೈಗೊಳ್ಳುವಾಗಲೂ ಆ ಪ್ರದೇಶದ ಗೃಹಸ್ಥರಲ್ಲಿ ತಾವು ಈ ಪ್ರದೇಶದಲ್ಲಿ ವ್ರತ ಸಂಕಲ್ಪಿತರಾಗಿ ಪೂಜೆ, ಅಧ್ಯಯನ ಅಧ್ಯಾಪನಾದಿಗಳನ್ನು ಕೈಗೊಳ್ಳುವುದರಿಂದ ನಿಮಗೇನಾದರೂ ತೊಂದರೆ ಇದೆಯೇ? ಎಂದು ಬಿನ್ನವಿಸಿಕೊಳ್ಳುವುದು ಮತ್ತು ಅದಕ್ಕೆ ಉತ್ತರವಾಗಿ ಗೃಹಸ್ಥರೂ ಖಂಡಿತವಾಗಿಯೂ ಯಾವುದೇ ತೊಂದರೆ ಇಲ್ಲ; ಅದನ್ನು ನಮ್ಮೆಲ್ಲರ ಭಾಗ್ಯವಿಶೇಷವೆಂದೇ ಭಾವಿಸುತ್ತೇವೆ ಎಂದು ಉಡುಪಿ ಶ್ರೀಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸಂದೇಶ ನೀಡಿದರು.
ವ್ರತಕಾಲದಲ್ಲಿ ತಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯಲ್ಲಿ ತಮ್ಮ ಯೋಗಕ್ಷೇಮವನ್ನು ನೋಡಿಕೊಳ್ತೇವೆ ಎಂದು ಸಮ್ಮತಿಸಬೇಕು ಎಂದು ಶಾಸ್ತ್ರ ಉಲ್ಲೇಖವಿದೆ. ಅಂದರೆ ಒಂದರ್ಥದಲ್ಲಿ ಯತಿಗಳು ಮತ್ತು ಗೃಹಸ್ಥರು ಒಂದು ಶ್ರೇಷ್ಠ ವ್ರತದ ಹಿನ್ನೆಲೆಯಲ್ಲಿ ಪರಸ್ಪರ ಸಮ್ಮತಿಸಿಕೊಳ್ಳುವ ಸಂಪ್ರದಾಯ ಇದರಲ್ಲಿದೆ. ಒಟ್ಟು ತಾತ್ಪರ್ಯವೆಂದರೆ ಯತಿಗಳಾದವರು ಚಾತುರ್ಮಾಸ್ಯ ವ್ರತಕೈಗೊಳ್ಳುವುದು ಮತ್ತು ಊರಿನ ಜನ ಅದಕ್ಕೆ ಸಹಕರಿಸುವ ಎರಡರಿಂದಲೂ ವ್ಯಷ್ಟಿ ಮತ್ತು ಸಮಷ್ಟಿಗೆ ಅನೇಕ ಸತ್ಫಲಗಳನ್ನು ನಮ್ಮ ಶಾಸ್ತ್ರಗಳು ತಿಳಿಸಿವೆ. ಆದ್ದರಿಂದ ಈ ವ್ರತಕಾಲದಲ್ಲಿ ಅವರ ಭಕ್ತರು ಶಿಷ್ಯರು, ಜನರು ಯತಿಗಳಿದ್ದಲ್ಲಿಗೆ ಹೋಗಿ ಅವರ ಸೇವೆ ಉಪಚಾರಗಳನ್ನು ಮಾಡುವುದು ಅತ್ಯಂತ ವಿಹಿತವಾಗಿದೆ ಎಂದು ಶ್ರೀಗಳು ತಿಳಿಸಿದರು.
ಚಾತುರ್ಮಾಸ್ಯ ನಿಮಿತ್ತ ಶ್ರೀ ಮಠದ ಭಕ್ತರಾದ ಮಾಜಿ ಶಾಸಕ ಕೆ ರಘುಪತಿ ಭಟ್ಟರು ಕುಟುಂಬ ಸಮೇತರಾಗಿ ಶ್ರೀ ಮಠಕ್ಕೆ ಬಂದು ಪಟ್ಟದದೇವರ ಪೂಜೆ ಮಾಡಿಸಿ, ತಮಗೆ ಯಥೋಚಿತ ಸತ್ಕಾರ ನೀಡಿದ ಸಂದರ್ಭ ಅವರು ವ್ರತದ ವಿವರವನ್ನು ತಿಳಿಸಿ ಅನುಗ್ರಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ