ಬಫರ್ ಜೋನ್: ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಕ್ರೋಶ

Upayuktha
0


ಬೆಂಗಳೂರು: ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರವು ಕೆರೆಗಳ ಸುತ್ತಲಿನ ಬಫರ್ ಜೋನ್ ಅನ್ನು ಕಡಿಮೆ ಮಾಡುವ ಮಸೂದೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಿರುವುದು ನಾಡಿನ ಸಮಸ್ತ ಕೆರೆಗಳ ಕಗ್ಗೊಲೆ ಮಾಡುವ ತೀರ್ಮಾನ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.



ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ಮಸೂದೆ-2025ಕ್ಕೆ ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಆದರೆ, ಕೆರೆಗಳ ಸುತ್ತಲಿನ ಬಫರ್ ಜೋನ್ ಕಡಿಮೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ, ಜಲ ಜಾಗೃತಿ ವಿಭಾಗದ ಉಪಾಧ್ಯಕ್ಷರಾದ ಕೆ.‌ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿ ಟಿ. ರುದ್ರಮುನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 


ಸರ್ಕಾರವು ರಾಜ್ಯದ ಕೆರೆಗಳನ್ನು ಭವಿಷ್ಯಕ್ಕಾಗಿ ರಕ್ಷಿಸಬೇಕಾದ ಸಂದರ್ಭದಲ್ಲಿ ಬಫರ್ ಜೋನ್ ಕಡಿಮೆ ಮಾಡುವುದು ಕೆರೆ ಸುತ್ತ ಕಮರ್ಷಿಯಲ್ ಮತ್ತು ಇಂಡಸ್ಟ್ರೀಯಲ್ ಚಟುವಟಿಕೆಗೆ ಅವಕಾಶ ಕೊಟ್ಟಂತೆ ಆಗುತ್ತೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆರೆಗಳ ಸುತ್ತಲಿನ ಬಫರ್ ಜೋನ್ ಕಡಿಮೆ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.


ಬಫರ್ ಜೋನ್ ಎಂದರೆ, ಕೆರೆಯ ಸುತ್ತಲಿನ ಖಾಲಿ ಜಾಗ, ಈ ಜಾಗದಲ್ಲಿ ಪ್ರವಾಹ ನಿಯಂತ್ರಣ, ಪರಿಸರ ಸಂರಕ್ಷಣೆ ಮಾಡಲಾಗುತ್ತೆ. ಬಫರ್ ಜೋನ್ ನಲ್ಲಿ ಯಾವುದೇ ಕಟ್ಟಡಗಳನ್ನು ಕಟ್ಟುವಂತಿಲ್ಲ. ಇನ್ನೂ ಈಗ ಕಾಯಿದೆಯ ತಿದ್ದುಪಡಿ ಮೂಲಕ ಈ ಬಫರ್ ಜೋನ್ ಪ್ರದೇಶವನ್ನು ಕಡಿಮೆ ಮಾಡಲಾಗುತ್ತಿದೆ. ಕೆರೆಯ ಗಾತ್ರಕ್ಕೆ ಅನುಗುಣವಾಗಿ ಬಫರ್ ಜೋನ್ ಅನ್ನು ಕಡಿಮೆ ಮಾಡಿ ಹೊಸ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರಲಾಗುತ್ತಿದೆ. ಹೊಸ ತಿದ್ದುಪಡಿ ಕಾಯಿದೆಯಲ್ಲಿ ಕೆರೆಗಳ ಗಾತ್ರಕ್ಕೆ ಅನುಗುಣವಾಗಿ 3 ಮೀಟರ್​ನಿಂದ 30 ಮೀಟರ್​ವರೆಗೂ ಮಾತ್ರ ಬಫರ್ ಜೋನ್ ಇರಲಿದೆ.


ಬಫರ್ ಜೋನ್ ಕಡಿಮೆ ಮಾಡುವುದರಿಂದ ಪ್ರವಾಹದ ರಿಸ್ಕ್ ಜಾಸ್ತಿಯಾಗುತ್ತೆ. ಬೆಂಗಳೂರಿನ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತೆ. ಬೆಂಗಳೂರಿನಲ್ಲಿ ಶೇ.5ಕ್ಕಿಂತ ಕಡಿಮೆ ಪ್ರದೇಶದಲ್ಲಿ ಮಾತ್ರವೇ ಕೆರೆಗಳಿವೆ. ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿಗಿಂತ ರಿಯಲ್ ಎಸ್ಟೇಟ್ ಲಾಬಿ, ಹಿತಾಸಕ್ತಿಯನ್ನು ರಕ್ಷಣೆ ಮಾಡುತ್ತೆ. ದೊಡ್ಡ ಮಟ್ಟದ ಒತ್ತುವರಿಯನ್ನು ಸಕ್ರಮಗೊಳಿಸುತ್ತೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ ಅವರು ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.


ರಾಜ್ಯ ಸರ್ಕಾರ ಬಫರ್ ಜೋನ್ ಒತ್ತುವರಿಯ ತೆರವು ಬಗೆಗಿನ ಜವಾಬ್ದಾರಿಯಿಂದ ಎಸ್ಕೇಪ್ ಆಗಲು ಹೊರಟಿದೆ. ಎಲ್ಲ ಕೆರೆಗಳಲ್ಲೂ ಒತ್ತುವರಿಗಳಿವೆ. ಇಂಥ ಒತ್ತುವರಿಗಳನ್ನು ಸರ್ಕಾರ ತೆರವುಗೊಳಿಸುವ ಬದಲು ಕಾನೂನುಬದ್ದಗೊಳಿಸುತ್ತಿದೆ. ರಾಜ್ಯ ಸರ್ಕಾರವೇ ಬಿಲ್ಡರ್​ಗಳಿಗೆ ಬಫರ್ ಜೋನ್ ನಲ್ಲಿ ಬ್ರಿಡ್ಜ್, ರಸ್ತೆ ನಿರ್ಮಿಸಿ ಒತ್ತುವರಿಗೆ ಪೋತ್ಸಾಹ ನೀಡುತ್ತಿದೆ ಎಂದು ಪರಿಸರವಾದಿಗಳು ಆನ್ ಲೈನ್ ಸಭೆಯಲ್ಲಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬಫರ್ ಜೋನ್ ಅನ್ನು ಎಷ್ಟಕ್ಕೆ ಹೊಸ ತಿದ್ದುಪಡಿ ಕಾಯಿದೆಯಲ್ಲಿ ನಿಗದಿ?


6 ಸೆಂಟ್ ನಿಂದ 1 ಎಕರೆವರೆಗಿನ ಕೆರೆ- 3 ಮೀಟರ್

1-10 ಎಕರೆವರೆಗಿನ ಕೆರೆ-6 ಮೀಟರ್

10-25 ಎಕರೆವರೆಗಿನ ಕೆರೆ- 12 ಮೀಟರ್

25- 100 ಎಕರೆವರೆಗಿನ ಕೆರೆ- 24 ಮೀಟರ್

100 ಎಕರೆಗೂ ಹೆಚ್ಚು ವಿಶಾಲ ಕೆರೆ- 30 ಮೀಟರ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top