ಉಜಿರೆ: ಇಂಗ್ಲಿಷ್ ಭಾಷೆಯನ್ನು ಕೇವಲ ಒಂದು ಭಾಷೆ ಎಂದು ಪರಿಗಣಿಸಿ ಕಡೆಗಣಿಸಬಾರದು. ಜಗತ್ತಿನಾದ್ಯಂತ ಮನ್ನಣೆ ಪಡೆದ ಒಂದೇ ಒಂದು ಭಾಷೆ ಎಂದರೆ ಅದು ಇಂಗ್ಲಿಷ್ ಎಂದು ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರಪತ್ರಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವ ಶರ್ಮ ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.18ರಂದು ಇಂಗ್ಲಿಷ್ ವಿಭಾಗದ ಸಾಹಿತ್ಯ ಸಂಘದ 2025- 26ನೇ ಶೈಕ್ಷಣಿಕ ವರ್ಷದ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಇಂಗ್ಲಿಷ್ ಒಂದೇ ಭಾಷೆಯಲ್ಲ, ಹಲವಾರು ಭಾಷೆಗಳು ಇವೆ. ಆದರೂ ಇಂಗ್ಲಿಷ್ ವಿಶೇಷ ಮನ್ನಣೆ ಪಡೆದಿದೆ. ಆದ್ದರಿಂದ ಇಂಗ್ಲಿಷ್ ಭಾಷಾ ಜ್ಞಾನ ವೃದ್ಧಿ ಅಗತ್ಯ ಎಂದರು.
“ನಾನು ಮೊದಲಿನಿಂದಲೂ ಇಂಗ್ಲಿಷ್ ಭಾಷೆಯನ್ನು ಓದಿಕೊಂಡು ಬಂದಿದ್ದವನಲ್ಲ. ಡಿಗ್ರಿ ಜೀವನದಲ್ಲಿ ಮೊದಲಾಗಿ ಪತ್ರಿಕೋದ್ಯಮದ ಜೊತೆಗೆ ಇಂಗ್ಲಿಷ್ ಸಾಹಿತ್ಯ ಓದಿದ್ದೆ. ಆದರೂ ಕೂಡ ನಾನು ಕೆಲಸಕ್ಕಾಗಿ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಇಂಗ್ಲಿಷಿನಿಂದ ಇನ್ನೊಂದು ಭಾಷೆಗೆ ಭಾಷಾಂತರ ಮಾಡುವ ಸಂದರ್ಭದಲ್ಲಿ ಬಹಳಷ್ಟು ತೊಂದರೆ ಅನುಭವಿಸಿದ್ದೇನೆ. ದಿನನಿತ್ಯ ಕನ್ನಡ ಪತ್ರಿಕೆಗಳ ಜೊತೆಗೆ ಇಂಗ್ಲಿಷ್ ಪತ್ರಿಕೆ ಓದುವುದರಿಂದ ಭಾಷಾ ಕಲಿಕೆ ವೃದ್ಧಿಯಾಗುತ್ತದೆ” ಎಂದು ಸಲಹೆ ನೀಡಿದರು.
“ವಿಭಾಗದ ವತಿಯಿಂದ ನಡೆಸುವ ಸ್ಕೂಲ್ ಅಡಾಪ್ಶನ್ ಕಾರ್ಯಕ್ರಮ, ಅತಿಥಿ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಭಾಷಾ ಜ್ಞಾನ ವೃದ್ಧಿಸುತ್ತದೆ. ಇದು ವೈಜ್ಞಾನಿಕ ಜಗತ್ತು, ವಿಜ್ಞಾನದ ಜೊತೆಗೆ ನಾವು ಕೂಡ ಮುಂದುವರಿಯಬೇಕು. ಸೋಶಿಯಲ್ ಮೀಡಿಯಾ ಯುಗದಲ್ಲಿ ನಾವು ಅದರ ಒಂದು ಭಾಗವಾಗಿರಬೇಕು ಆದರೆ ಸಾಮಾಜಿಕ ಜಾಲತಾಣಗಳು ನಮ್ಮನ್ನು ಆಳ್ವಿಕೆ ಮಾಡದ ಹಾಗೆ ಜಾಗರೂಕರಾಗಿರಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಜಾನನ ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಮಿತಿಗಳ ವಿದ್ಯಾರ್ಥಿ ಸಂಯೋಜಕರು ತಮ್ಮ ಯೋಜನೆ ಕುರಿತು ವಿವರಿಸಿದರು. ಲಿಟರರಿ ಸಂಘದ ಅಧ್ಯಕ್ಷ ಚಂದನ್, ಸಂಯೋಜಕ, ಸಹ ಪ್ರಾಧ್ಯಾಪಕ ಸೂರ್ಯ ನಾರಾಯಣ ಭಟ್ ಪಿ., ಇತರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತೃತೀಯ ಬಿ.ಎ. ವಿದ್ಯಾರ್ಥಿನಿಯರಾದ ಗೌರವಿ ಸ್ವಾಗತಿಸಿ, ಶ್ರೇಯಾ ಮಿಂಚಿನಡ್ಕ ನಿರೂಪಿಸಿದರು. ಅನುಷಾ, ಕೃಷ್ಣವೇಣಿ, ಸುಶೀರ ಪ್ರಾರ್ಥಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಸನುಷಾ ಪಿಂಟೋ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ