ಶಿವಮೊಗ್ಗ: ಶಿವಮೊಗ್ಗದ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾಕ್ಟರ್ ರಜನಿ ಎ ಪೈರವರು ಮಲ್ಲಿಗೆನಹಳ್ಳಿಯ ಕೆರೆಯ ದಂಡೆಯಲ್ಲಿ ಹೊಂಗೆ ಗಿಡವನ್ನು ನೆಡುವುದರ ಮೂಲಕ ಈ ವನಮಹೋತ್ಸವ ಆಚರಣೆಗೆ ಚಾಲನೆಯನ್ನು ನೀಡಿದರು.
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಲೆನಾಡಿನ ಮಳೆಗಾಲದ ತುಂತುರು ಹನಿ ಲೇಪನ ದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಕೆರೆಯ ದಂಡೆಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಮಳೆಗಾಲ ದ ಪರಿಸರವನ್ನು ಅರ್ಥಪೂರ್ಣವಾಗಿ ಅನುಭವಿಸಿದರು.
"ಮಲ್ಲಿಗೆನಹಳ್ಳಿ ಕೆರೆಯ ದಂಡೆಯಲ್ಲಿ ಹಲವರು ಅನಗತ್ಯ ಕಸಗಳನ್ನು ಚೆಲ್ಲಾಡುತ್ತಾರೆ, ಇದರಿಂದ ಕೆರೆಯ ಸೌಂದರ್ಯವು ಹಾಳಾಗುತ್ತಿದೆ ಮಾತ್ರವಲ್ಲದೆ ಪರಿಸರಕ್ಕೆ ಹಾನಿಯಾಗುತ್ತಿದೆ. ಇದನ್ನು ಮನಗಂಡು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕೆರೆಯ ದಂಡೆಯಲ್ಲಿ ಮರ ಗಿಡಗಳನ್ನು ಬೆಳೆಸುವ ಯೋಜನೆಯನ್ನು ರೂಪಿಸಲಾಗಿದೆ" ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ತಿಳಿಸಿದರು.
ಈ ದಂಡೆಯನ್ನು ಒಂದು ರಮ್ಯ ಹಾಗೂ ಪರಿಸರಕ್ಕೆ ಪೂರಕವಾದ ಮರಗಳ ತಾಣವನ್ನಾಗಿ ಮಾಡುವ ಯೋಜನೆ ಇದೆ ಎಂದು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾಕ್ಟರ್ ಸುಕೀರ್ತಿ ಹಾಗೂ ಮೋಹನ್ ಕುಮಾರ್ ರವರು ತಿಳಿಸಿದರು. ಪರಿಸರಕ್ಕೆ ಪೂರಕವಾದ ಹೊಂಗೆ, ಬಾದಾಮಿ, ಹೊಳೆಮತ್ತಿ ಇತ್ಯಾದಿ ಮರಗಳ ಗಿಡಗಳನ್ನು ಇಲ್ಲಿ ನೆಡಲಾಗುತ್ತಿದೆ. ಈ ಗಿಡ ಮರಗಳನ್ನು ಸಂರಕ್ಷಿಸುವ ಜವಾಬ್ದಾರಿಯು ವಿದ್ಯಾರ್ಥಿಗಳು ಹಾಗೂ ಕಾಲೇಜಿನದ್ದಾಗಿದೆ ಎಂದು ತಿಳಿಸಿದರು.
"ಶಿವಮೊಗ್ಗದ ಮಲ್ಲಿಗೆನಹಳ್ಳಿ ಕೆರೆಯು ಅತ್ಯಂತ ಸಂಪನ್ಮೂಲ ಭರಿತ ಹಾಗೂ ಪರಿಸರಕ್ಕೆ ಶೋಭೆಯುಳ್ಳ ಒಂದು ಕೆರೆಯಾಗಿದೆ. ಇದನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕು. ಇಲ್ಲಿ ಕಸಗಳನ್ನು ಯಾರೂ ಎಸೆಯಬಾರದೆಂದು ಮಾನಸ ಟ್ರಸ್ಟ್ನ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಅವರು ಶಿವಮೊಗ್ಗದ ಜನತೆಗೆ ಮನವಿಯನ್ನು ಮಾಡಿದರು. ಮುಂದಿನ ದಿನಗಳಲ್ಲಿ ಕಾಲೇಜು ಶಿವಮೊಗ್ಗ ಹಾಗೂ ಸುತ್ತಲಿನ ಕೆರೆಗಳ ಬದಿಗಳಲ್ಲಿ ಗಿಡಗಳನ್ನು ನೆಡುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಎಂದು ನಿರ್ಧರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ