ಬೀಳಬಾರದು ನಡಿಗೆ
ಸಂದೇಹಗಳ ಮಡಿಲಿಗೆ
ಬೆಚ್ಚಬಾರದು ಗುಂಡಿಗೆ
ಸವಾಲುಗಳ ಸಿಡಿಲಿಗೆ.!
ನಾರಬಾರದು ವ್ಯಕ್ತಿತ್ವ
ಹೆಸರಿನ ತೆವಲಿಗೆ.!
ಜಾರಬಾರದು ಸತ್ವತತ್ವ
ದುಮ್ಮಾನ ದಿಗಿಲಿಗೆ.!
ಸೊಕ್ಕಬಾರದು ಹೆಗಲು
ಹೊಗಳಿಕೆ ಹೊನಲಿಗೆ
ಬಿಕ್ಕಬಾರದು ಒಡಲು
ತೆಗಳಿಕೆಗಳ ಕಡಲಿಗೆ.!
ಹಪಿಸಬಾರದು ಜೀವ
ವಾಂಛೆಗಳ ತೊಟ್ಟಿಲಿಗೆ
ತಪಿಸಬಾರದು ಭಾವ
ಅವಕಾಶಗಳ ಮೆಟ್ಟಿಲಿಗೆ.!
ಆಡಬಾರದು ಮನಸು
ಅಸೂಯೆ ಕೆನ್ನಾಲಿಗೆಗೆ.
ಈಡಾಗಬಾರದು ಕನಸು
ಭ್ರಮೆಗಳ ಹೊನ್ನಾಲಿಗೆಗೆ.!
ಕೆಡಬಾರದು ಸಂಬಂಧ
ಮೇಲಾಟಗಳ ಅಳಲಿಗೆ
ಸುಡಬಾರದು ಅನುಬಂಧ
ನಿರೀಕ್ಷೆಗಳ ತೊಳಲಿಗೆ.!
ಹಿಗ್ಗಲೇಬಾರದು ನಡಿಗೆ
ಕೀರ್ತಿಶನಿಯ ಅಮಲಿಗೆ
ಕುಗ್ಗಬಾರದು ಅಡಿಗಡಿಗೆ
ಕುಹಕಗಳ ಘಮಲಿಗೆ.!
ಬರಬಾರದು ಬದುಕು
ಬೆತ್ತಲಾಗುತ ಬಯಲಿಗೆ
ಆರಬಾರದು ಬೆಳಕು
ಕತ್ತಲಿನಾ ಖಯಾಲಿಗೆ.!
- ಎ.ಎನ್.ರಮೇಶ್.ಗುಬ್ಬಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ