ಮಾಧವ ತಿಂಗಳಾಯ- ಬದುಕು ಬರಹ: ವಿವಿ ಕಾಲೇಜಿನಲ್ಲಿ ಸಂಸ್ಮರಣಾ ಉಪನ್ಯಾಸ

Chandrashekhara Kulamarva
0


ಮಂಗಳೂರು: “ನಾಟಕ ಕಲೆಯ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಾ, ತುಳುನಾಡಿನ ಸಾಮಾಜಿಕ ಪರಿವರ್ತನೆಗಾಗಿ ದುಡಿದ ಅಪೂರ್ವ ವ್ಯಕ್ತಿತ್ವಗಳಲ್ಲಿ ಮಾಧವ ತಿಂಗಳಾಯರು ಒಬ್ಬರು. ಸ್ವಾತಂತ್ರ್ಯಪೂರ್ವದಲ್ಲಿ ಮಾಡಿದ ಸಾಮಾಜಿಕ ಸಂಘಟನೆಗಳು, ರಾಜಕೀಯ ಚಳುವಳಿಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಕೈಗೊಂಡ ಸೇವೆ, ಅಸ್ಪೃಶ್ಯತೆ ನಿವಾರಣೆಯಲ್ಲಿ ಗಾಂಧಿ ತತ್ವದ ಅಳವಡಿಕೆ, ಸಾಹಿತ್ಯದಿಂದ ಸಾಮಾಜದಲ್ಲಿ ಜಾಗೃತಿ ಸಾಧ್ಯ” ಹೀಗೆ ಬಹುಮುಖ ಪ್ರತಿಭೆಯ ಹಿರಿಯ ಚೇತನ ಯುವ ಜನತೆಗೆ ಮಾದರಿ. ಇಂತಹ ಹಿರಿಯ ಸಾಧಕರನ್ನು ನೆನಪಿಸುವುದು ಬಹಳ ಅತ್ಯಗತ್ಯ” ಎಂದು ಸಂಕೇತ ಮಂಗಳೂರಿನ ಸಂಚಾಲಕ ಮತ್ತು ಕಲಾವಿದ ಜಗನ್‌ ಪವಾರ್‌ ಬೇಕಲ್‌ ಹೇಳಿದರು.


ಅವರು ವಿಶ್ವವಿದ್ಯಾನಿಲಯ ಕಾಲೇಜು (ಸಂಧ್ಯಾ ಕಾರ್ಯಕ್ರಮ), ಮಂಗಳೂರು ಇಲ್ಲಿ ನಡೆದ “ಮಾಧವ ತಿಂಗಳಾಯೆರ್ ಸಂಸ್ಮರಣೆ”‌ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ, ಮಾಧವ ತಿಂಗಳಾಯರ ಬದುಕು-ಬರಹಗಳ ಬಗ್ಗೆ ತುಳು ಎಂ.ಎ. ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಮುಂದಿನ ಪೀಳಿಗೆಗೆ ತುಳುನಾಡಿನ ಮಹಾಪುರುಷರ ಅಸ್ಮಿತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನ ನಿರಂತರವಾಗಿ ನಡೆಯಬೇಕೆಂದು ಕಳಕಳಿಯ ಕರೆ ನೀಡಿದರು. 


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಕೃಷ್ಣಮೂರ್ತಿ, ನಿಕಟಪೂರ್ವ ಪ್ರಾಂಶುಪಾಲರು, ಗೋವಿಂದದಾಸ ಕಾಲೇಜು ಹಾಗೂ ಸಿಂಗಾರ ಸುರತ್ಕಲ್‌ನ ಕಾರ್ಯದರ್ಶಿ ಮಾತನಾಡುತ್ತಾ “ಮಾಧವ ತಿಂಗಳಾಯರ ʼಜನಮರ್ಲ್‌ʼ ನಾಟಕವು ತುಳು ಭಾಷೆಯ ಮೊದಲ ಪ್ರಕಟಿತ ನಾಟಕವಾಗಿದ್ದು, ಐತಿಹಾಸಿಕ ಮಹತ್ವವನ್ನು ಹೊಂದಿದೆ, ಇಂತಹ ಹಲವಾರು ದೇಶೀಯ, ವಿದೇಶಿಯ ಸಾಹಿತಿಗಳು ತುಳುನಾಡಿನ ಬಗೆಗೆ ಅಧ್ಯಯನ ನಡೆಸಿದ್ದು, ಅಂತಹ ಸಾಹಿತ್ಯಗಳನ್ನು ಅಧ್ಯಯನ ಮಾಡಬೇಕು, ಇಂದು ಶೈಕ್ಷಣಿಕ ಮಾನ್ಯತೆಯನ್ನು ಪಡೆದ ತುಳುವಿನಲ್ಲಿ ಸಂಶೋದನಾ ಪ್ರಬಂಧಗಳನ್ನು ಪ್ರಕಟಿಸಬೇಕು, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವಲ್ಲಿ ತುಳು ಸ್ನಾತಕೋತ್ತರ ವಿದ್ಯಾರ್ಥಿಗಳು ಮುಂದೆ ಬರಬೇಕು” ಎಂದು ಕರೆ ನೀಡಿದರು. 


ಇನ್ನೊರ್ವ ಅತಿಥಿ ತುಳು, ಕನ್ನಡ ಲೇಖಕ, ಉಪನ್ಯಾಸಕ ರಘು ಇಡ್ಕಿದು, ಮಾಧವ ತಿಂಗಳಾಯರ ಜನ್ಮ ದಿನದ ಸಂಸ್ಮರಣೆ ಮಾಡಿಕೊಂಡು, ಅವರ ಇತರ ನಾಟಕಗಳ ಅವಲೋಕನ ಹಾಗೂ ಸ್ವಾತಂತ್ರ್ಯಪೂರ್ವ ದಲ್ಲಿ ನಾಟಕಗಳು ಯಾವ ರೀತಿ ಪರಿಣಾಮಕಾರಿಯಾಗಿದ್ದುವು ಎಂಬುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 


ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು (ಸಂಧ್ಯಾ ಕಾರ್ಯಕ್ರಮ)ದ ಸಂಯೋಜಕರಾದ ಡಾ. ಜಯವಂತ್‌ ನಾಯಕ್‌ ಮಾತನಾಡುತ್ತಾ, “ಸ್ವಾತಂತ್ರ್ಯಪೂರ್ವದಲ್ಲಿ ಶೋಷಿತ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಕುದ್ಮಾಲ್‌ ರಂಗರಾವ್‌, ಮಾಧವ ತಿಂಗಳಾಯ, ಕಾರ್ನಾಡ್‌ ಸದಾಶಿವರಾಯರು ಹೀಗೆ ಹಲವು ಸಾಧಕರ ಕುರಿತಾಗಿ ಮಾತನಾಡುತ್ತಾ, ಇಂತಹ ವಿಚಾರಗಳು ಶೈಕ್ಷಣಿಕ ಮಟ್ಟದಲ್ಲಿ ಯುವಜನತೆಗೆ ತಲುಪಿದಲ್ಲಿ ಸದೃಢ ಸಮಾಜ ನಿರ್ಮಿಸಬಹುದು” ಎಂದರು.


ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕಿ ಮಣಿ ಎಂ.ರೈ ಕಾರ್ಯಕ್ರಮವನ್ನು ಆಯೋಜಿಸಿ, ಶ್ರೀಮತಿ ಸಂಧ್ಯಾ ಆಳ್ವ ವಂದನಾರ್ಪಣೆ ಮಾಡಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top