ಯಕ್ಷಗಾನ ಶ್ರೇಷ್ಠ ಕಲೆ, ತುಳುನಾಡಿನಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ: ಕನ್ಯಾನ ಡಾ.ಸದಾಶಿವ ಶೆಟ್ಟಿ

Upayuktha
0


ಯಕ್ಷಧ್ರುವ ಪಟ್ಲ ದಶಮ ಸಂಭ್ರಮ-2025





ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ “ದಶಮ ಸಂಭ್ರಮ” ಕಾರ್ಯಕ್ರಮ ಆದಿತ್ಯವಾರ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಕಟೀಲು ದುರ್ಗಾಪರಮೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. 



ಪ್ರಾಸ್ತಾವಿಕ ಮಾತನ್ನಾಡಿದ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅವರು, “ಇಂದು ಮೂರು ವೇದಿಕೆಗಳಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಇಷ್ಟೊಂದು ಯಶಸ್ವಿಯಾಗಿ ನಡೆಯಬೇಕಾದರೆ ಕೇಂದ್ರೀಯ ಸಮಿತಿಯ ಪ್ರತೀ ಪದಾಧಿಕಾರಿಗಳು, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮವಿದೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಟ್ಲ ಫೌಂಡೇಶನ್ ದಾನಿಗಳ ನೆರವಿನಿಂದ ಇನ್ನಷ್ಟು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಎಲ್ಲರ ಒಗ್ಗಟ್ಟಿನಲ್ಲಿ ಮಾತ್ರ ಸಾಧ್ಯ” ಎಂದರು.


ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಹೇರಂಭ ಇಂಡಸ್ಟ್ರಿಸ್ ಸಿಎಂಡಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಮಾತಾಡಿ, ”ನನಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಭಾಗವಾಗಿರಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದಕ್ಕಾಗಿ ಎಲ್ಲಾ ಪದಾಧಿಕಾರಿಗಳು, ದೇಶ ವಿದೇಶದಲ್ಲಿರುವ ಘಟಕದ ಪದಾಧಿಕಾರಿಗಳಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ. ಪಾರ್ತಿಸುಬ್ಬರಿಂದ ಆರಂಭವಾದ ಯಕ್ಷಗಾನ ಕ್ಷೇತ್ರ ಇಂದು ಪಟ್ಲ ಸತೀಶ್ ಶೆಟ್ಟಿ ಅವರಿಂದ ಬೆಳಗುತ್ತಿದೆ. ಹಲವಾರು ಜನ ಯಕ್ಷಾಭಿಮಾನಿಗಳು, ದಾನಿಗಳು ಈ ಫೌಂಡೇಶನ್ ಬೆಳಗಲು ಕಾರಣರಾಗಿದ್ದಾರೆ. ಯಕ್ಷಗಾನ ನಮ್ಮ ತುಳುನಾಡಿನ ಶ್ರೇಷ್ಠ ಕಲೆ. ಇಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ. ಪರಿಪೂರ್ಣವಾದ ಕಲೆಯನ್ನು ಬೇರೆ ಯಾವ ಪ್ರದೇಶದಲ್ಲೂ ನಾನು ನೋಡಿಲ್ಲ. ಯಕ್ಷಗಾನ ಮೂಲಕ ನಾವು ಮಕ್ಕಳಿಗೆ ಧಾರ್ಮಿಕ ಶಿಕ್ಷಣ, ಸಂಸ್ಕಾರವನ್ನು ನೀಡುತ್ತಿದ್ದೇವೆ. ಇಂತಹ ಕಾರ್ಯ ನಿರಂತರವಾಗಿ ಮುಂದುವರಿಯಲಿ" ಎಂದರು.


ದಶಮಾನೋತ್ಸವ ಸಂಭ್ರಮದ ಅಧ್ಯಕ್ಷ ಬರೋಡಾ ಶಶಿಧರ್ ಶೆಟ್ಟಿ ಮಾತಾಡಿ, “ಇಲ್ಲಿ ಇಷ್ಟು ಜನರು ಸೇರಿರುವುದು ಪಟ್ಲ ಸತೀಶ್ ಶೆಟ್ಟಿಯವರ ಅಭಿಮಾನದಿಂದ. ನಾವು ದಶಮಾನೋತ್ಸವ ಸಂಭ್ರಮಕ್ಕೆ 10 ಕೋಟಿ ರೂ. ಒಟ್ಟುಗೂಡಿಸುವ ಉದ್ದೇಶ ಹೊಂದಿದ್ದೆವು ಆದರೆ ನಿರೀಕ್ಷೆಗೂ ಮೀರಿ 15 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹಗೊಂಡಿದೆ. ನಮ್ಮದು ಸಾವಿರದ ಕನಸು, ಪಟ್ಲ ಫೌಂಡೇಶನ್ ನ ಮುಂದಿನ ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲಿ ಎಂದರು.


ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಆಶೀರ್ವಚನದ ಮಾತನ್ನಾಡಿ, “ಒಂದು ಸಂಘಟನೆ ಮನಸ್ಸು ಮಾಡಿದಲ್ಲಿ 10 ವರ್ಷಗಳಲ್ಲಿ ಸಮಾಜಕ್ಕೆ ಯಾವ ಸೇವೆ ಸಲ್ಲಿಸಬಹುದು ಅನ್ನುವುದಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಉದಾಹರಣೆ. ಇದೊಂದು ಮ್ಯಾಜಿಕ್ ಎಲ್ಲಾ ಕಲಾಭಿಮಾನಿಗಳಿಗೆ ಇದೊಂದು ಅಚ್ಚರಿ. ಇದರ ರೂವಾರಿ ಪಟ್ಲ ಸತೀಶ್ ಶೆಟ್ಟಿ ಅವರಿಂದ ಇದೆಲ್ಲವೂ ಸಾಧ್ಯವಾಗಿದೆ. ಜಿಲ್ಲೆಯ ಬೇರೆ ಬೇರೆ ರಂಗದ ಕಲಾವಿದರಿಗೆ ಆರೋಗ್ಯ, ಬಡ ಕಲಾವಿದರಿಗೆ ಆಶ್ರಯಕ್ಕೆ ಮನೆ, ಆಸರೆ ಎಲ್ಲವನ್ನೂ ಟ್ರಸ್ಟ್ ಒದಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದಶಮಾನೋತ್ಸವ ಸಂಭ್ರಮ ಇಂದು ವಿನೂತನ, ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಡೆಯುತ್ತಿದೆ. ಈ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸವಾಗುತ್ತಿದೆ. ಟ್ರಸ್ಟ್ ಪದಾಧಿಕಾರಿಗಳು, ದಾನಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತೇನೆ“ ಎಂದರು.


ವೇದಿಕೆಯಲ್ಲಿ ಒಡಿಯೂರು ಮಠದ ಮಾತಾನಂದಮಯಿ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಉದ್ಯಮಿ ಕಟೀಲು ದಿವಾಕರ್ ರಾವ್, ಸಂಜೀವಿನಿ ಆಸ್ಪತ್ರೆ ಮುಖ್ಯಸ್ಥ ಡಾ.ಸುರೇಶ್ ರಾವ್ ಕಟೀಲು, ಫೌಂಡೇಶನ್ ನ ಮಹಾದಾನಿ ಎಂ.ಎಲ್. ಸಾಮಗ ಉಡುಪಿ, ನಿಟ್ಟೆ ಯುನಿವರ್ಸಿಟಿಯ ಸತೀಶ್ ಭಂಡಾರಿ, ಕನ್ಯಾನ ರಘುರಾಮ ಶೆಟ್ಟಿ, ಸಿಎ ಸುಭಾಷ್ಚಂದ್ರ ಬೆಹರಿನ್, ಶ್ಯಾಮ್ ಪ್ರಸಾದ್, ಪಳ್ಳಿ ಕಿಶನ್ ಹೆಗ್ಡೆ, ಸಿಎ ಸುರೇಂದ್ರ ಶೆಟ್ಟಿ, ಪೆರ್ಮುದೆ ಅಶೋಕ್ ಶೆಟ್ಟಿ, ಪ್ರೊಫೆಸರ್ ಡಾ.ಮನು ರಾವ್, ಕೆರೆಕಟ್ಟೆ ಉದಯ ಶೆಟ್ಟಿ, ಪ್ರೀತಮ್ ಶೆಟ್ಟಿ, ಕೇಂದ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ, ಕದ್ರಿ, ಕರುಣಾಕರ ರೈ ದೇರ್ಲ, ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ದುರ್ಗಾಪ್ರಸಾದ್, ನಾಗಭೂಷಣ್, ಸವಣೂರು ಸೀತಾರಾಮ್ ರೈ, ಲಯನ್ ತಾರಾನಾಥ್ ಶೆಟ್ಟಿ ಬೋಳಾರ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಮತ್ತಿತರರು ಉಪಸ್ಥಿತರಿದ್ದರು. 


ಕುಣಿತ ಭಜನಾ ಸ್ಪರ್ಧೆಯನ್ನು ಒಡಿಯೂರು ಕ್ಷೇತ್ರದ ಮಾತಾನಂದಮಯಿ ಉದ್ಘಾಟಿಸಿದರು. ಯಕ್ಷಗಾನ ಕ್ಷೇತ್ರದ ಸಾಧಕಿ ಆರ್ಷಿಯ ತನು ವಿಟ್ಲರನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು. ಕದ್ರಿ ನವನೀತ್ ಶೆಟ್ಟಿ, ಪೃಥ್ವಿ ಕಾರಿಂಜ ಕಾರ್ಯಕ್ರಮ ನಿರೂಪಿಸಿದರು. ರವಿಚಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top