ಮಂಗಳೂರು: ವಿಶ್ವ ರಕ್ತದಾನಿ ದಿನಾಚರಣೆಯ ಸಂದರ್ಭದಲ್ಲಿ ಎನ್.ಸಿ.ಸಿ ಘಟಕ, ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರು, 18 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ, ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಶನಿವಾರ (ಜೂ.14) ನಡೆಸಲಾಯಿತು.
ಸಂಸ್ಥೆಯ ಕಾನ್ಫರೆನ್ಸ್ ಕೊಠಡಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರಾಯ್, ಕಮಾಂಡಿಂಗ್ ಆಫೀಸರ್, 18 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಸಂಗ್ರಹ ಕೇಂದ್ರದ ಡಾ. ಶರತ್ ಕುಮಾರ್ ರಾವ್ ಜೆ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಹರೀಶ ಶೆಟ್ಟಿ ವಹಿಸಿದ್ದರು.
ಲ್ಯಾನ್ಸ್ ಕಾರ್ಪೋರಲ್ ಪ್ರಾಚಿ ಸುವರ್ಣ ಅವರು ಸ್ವಾಗತ ಭಾಷಣ ಮಾಡಿ, ಕೆಡೆಟ್ ತೃಷಾ ವಿಶ್ವ ರಕ್ತದಾನಿ ದಿನಾಚರಣೆಯ ಮಹತ್ವವನ್ನು ಸಭೆಗೆ ತಿಳಿಸಿ, ಕೆಡೆಟ್ ಸ್ವಸ್ತಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭೆಯಲ್ಲಿ ಸಂಸ್ಥೆಯ ಎಲ್ಲಾ ವಿಭಾಗಾಧಿಕಾರಿಗಳು, ಉಪನ್ಯಾಸಕ ವರ್ಗದವರು, ಸಿಬ್ಬಂದಿ ವರ್ಗದವರು, ವೈದ್ಯಕೀಯ ತಂಡದವರು, 18 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಕೆಡೆಟ್ ಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲಾ "ರಕ್ತದಾನ ಮಾಡಿ ಜೀವರಕ್ಷಣೆ ಮಾಡುವುದರ ಮೂಲಕ ಸಮಾಜಸೇವೆ ಮಾಡುವ ಬಗ್ಗೆ, ಸಮಾಜದಲ್ಲಿ ರಕ್ತ ದಾನದ ಮಹತ್ವ ಇತರರಿಗೆ ತಿಳಿಸಿ ಅವರನ್ನು ಕೂಡ ನಿಸ್ವಾರ್ಥದಿಂದ ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತೇವೆ" ಎಂದು ಪ್ರತಿಜ್ಞೆ ಸ್ವೀಕರಿಸಿದರು.
ಡಾ. ಶರತ್ ಕುಮಾರ್ ರಾವ್ ಜೆ ಅವರು ರಕ್ತದಾನದ ವೈದ್ಯಕೀಯ ಮಹತ್ವ ಮತ್ತು ಸಮುದಾಯಕ್ಕೆ ಇದರ ಪ್ರಯೋಜನಗಳ ಬಗ್ಗೆ ವಿವರಿಸಿದರು. ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ರಾಯ್ ಅವರು ತಮ್ಮ ಭಾಷಣದಲ್ಲಿ "ರಕ್ತದಾನವು ಜೀವದಾನದ ಸಮಾನ" ಎಂದು ಒತ್ತಿಹೇಳಿದರು. ಪ್ರಾಂಶುಪಾಲ ಹರೀಶ್ ಶೆಟ್ಟಿ ಅವರು, "ಇಂತಹ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದು ಅತ್ಯಂತ ಹೆಮ್ಮೆಯ ವಿಷಯ" ಎಂದು ಹೇಳಿದರು.
ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಸತೀಶ್ ಕೆ.ಎಂ ಅವರ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದಲ್ಲಿ 50 ಕೆಡೆಟ್ ಗಳು, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ತಂಡವು ರಕ್ತದಾನ ಪ್ರಕ್ರಿಯೆಯನ್ನು ನಿರ್ವಹಿಸಿತು.
ಕಾಲೇಜಿನ ಸಿಬ್ಬಂದಿ ಮತ್ತು ಎನ್ ಸಿಸಿ ಘಟಕವು ಈ ಕಾರ್ಯಕ್ರಮವನ್ನು ಸುಸಂಘಟಿತವಾಗಿ ನಡೆಸಲು ಸಹಕರಿಸಿತು. ಕಾರ್ಯಕ್ರಮದ ಕೊನೆಯಲ್ಲಿ ರಕ್ತದಾನ ಮಾಡಿದ ಎಲ್ಲಾ ಸ್ವಯಂಸೇವಕರಿಗೆ, ವೈದ್ಯಕೀಯ ತಂಡಕ್ಕೆ ಮತ್ತು ಆಯೋಜಕ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ