ಇವತ್ತಿನ ಕಾಲದ ನವದಂಪತಿಗಳಿಗೆ ಹರಿಕೀರ್ತನೆ ಅದೂ ಜೊತೆಯಾಗಿ ಕುಳಿತು ಮಾಡಲು ವ್ಯವಧಾನವಿದ್ದೀತೇ? ದಾಂಪತ್ಯದ ನವೋತ್ಸಾಹದ ಗುಂಗಿನಲ್ಲಿ ತೇಲಾಡುವ ಹೊತ್ತಿಗೆ ಹರಿಕೀರ್ತನೆ ಗುನುಗುನಿಸೀತೇ?
ಇಲ್ವೇ ಇಲ್ಲ ಅನ್ಬೇಡಿ; ನಾವಿದ್ದೇಲ್ವಾ ಅಂತಿದ್ದಾರೆ ಉಡುಪಿಯ ಈ ನವಜೋಡಿ! ವಿದ್ವಾನ್ ಕೆ.ಜೆ ಪವನ- ಶ್ರೀಮತಿ ಭಾರತಿ ದಂಪತಿ ಇತ್ತೀಚೆಗಷ್ಟೆ ವಿವಾಹವಾದವರು. ಪವನ್ ಅವರು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವಿದ್ಯಾರ್ಜನೆಗೈದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಲ್ಲಿ ಶ್ರೀಮನ್ನ್ಯಾಯಸುಧಾಂತ ಶಾಸ್ತ್ರಾಧ್ಯಯನಗೈದ ತರುಣ. ಪ್ರಸ್ತುತ ಉಡುಪಿಯ ಪ್ರಸಿದ್ಧ ಕ್ಷೇತ್ರ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಕಾರ್ಯನಿರ್ವಹಿಸ್ತಾ ಇದ್ದಾರೆ. ಪತ್ನಿ ಶ್ರೀಮತಿ ಭಾರತಿ ಕೂಡಾ ಹೆತ್ತವರು ನೀಡಿದ ಉತ್ತಮ ಸಂಸ್ಕಾರ ಪಡೆದು ಬೆಳೆದ ತರುಣಿ.
ಈ ದಂಪತಿ ವಾರಕ್ಕೊಮ್ಮೆ ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ನಿರಂತರ ಭಜನೆಯಲ್ಲಿ ಜೊತೆಯಾಗಿ ಭಾಗವಹಿಸಿ ಹರಿಸಂಕೀರ್ತನೆ ನಡೆಸುತ್ತಿರುವುದು ವಿಶೇಷವಾಗಿದೆ. ಮಗಳು ಅಳಿಯನ ಜೊತೆ ಮಾವ ಶ್ರೀನಿವಾಸ ಪೆಜತ್ತಾಯ ದಂಪತಿಯೂ ಹಾರ್ಮೋನಿಯಂ ಹಿಡಿದು ರಾಗದೊಂದಿಗೆ ತಾಳ ಲಯ ಸೇರಿಸ್ತಾ ಇದ್ದಾರೆ.
ಕಲಿಯುಗದಲಿ ಹರಿನಾಮವ ನೆನೆದರೆ... ಅದೇ ಸತ್ಯ ಅದೇ ನಿತ್ಯ ಅನ್ನೋದು ಈ ದಂಪತಿಗೆ ಅರ್ಥ ಆಗ್ಬಿಟ್ಟಿದೆ....ಭೇಷ್! ಈ ನವದಂಪತಿಗೊಂದು ಪ್ರೀತಿ ಅಭಿಮಾನದ ನಮಸ್ಕಾರ.
-ಜಿ. ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ