ನನ್ನಪ್ಪ ಮತ್ತು ನಮ್ಮಮ್ಮನ ಕುಟುಂಬ ಎಷ್ಟು ದೊಡ್ಡದಾಗಿತ್ತೆಂದರೆ ಅಪ್ಪ ಮಕ್ಕಳ ಭೇಟಿಗಳೇ ಅಪರೂಪ ಎನ್ನುವಷ್ಟರ ಮಟ್ಟಿಗೆ. ನನ್ನಮ್ಮನ ಕಡೆಯ, ನನ್ನ ಓರಿಗೆಯ ಮಕ್ಕಳು, ನನ್ನಪ್ಪನನ್ನು 'ಚಿಕ್ಕಪ್ಪ' ಎಂದು ಸಂಬೋಧಿಸುತ್ತಿದ್ದುದರಿಂದ ನನಗೂ ನಮ್ಮಪ್ಪನನ್ನು ಚಿಕ್ಕಪ್ಪ ಎಂದೇ ಕರೆಯುವುದು ರೂಢಿಯಾಯಿತು. ಇಷ್ಟಕ್ಕೂ ಅಪ್ಪನನ್ನು ಸಂಬೋಧನೆ ಮಾಡುವ ಅವಕಾಶವಾದರೂ ಎಲ್ಲಿತ್ತು?
ಅಪ್ಪ ಎಂಬ ಸ್ಮರಣೆ ನನಗೆ ಬಂದದ್ದು ನಾನು ಹುಟ್ಟಿದ ಮೂರು ವರ್ಷಗಳ ನಂತರ. ಅಪ್ಪ ಒದ್ದಾಡಿಕೊಂಡು ಹೆಚ್ಚುಕಡಿಮೆ 30ನೇ ವಯಸ್ಸಿನಲ್ಲಿ ತನ್ನ ಹುಟ್ಟೂರಿನಿಂದ 2500 ಕಿ ಮೀ ದೂರದಲ್ಲಿ ರೈಲು ವಿಭಾಗದಲ್ಲಿ ಕೆಲಸ ಪ್ರಾರಂಭಿಸಿದ ಮೇಲೆ. ತನ್ನ ಕೂಡು ಕುಟುಂಬವನ್ನು ಬಿಟ್ಟು ನನ್ನಮ್ಮ ನನ್ನನ್ನು ಕಟ್ಟಿಕೊಂಡು ಅಪ್ಪನ ಹಿಂದೆ ಸಾಗಿದಾಗ ಅಪ್ಪ ಎಂದರೆ ಹೀಗೇ ಇರುತ್ತಾರೆ ಎಂಬ ಸ್ಪಷ್ಟ ತಿಳುವಳಿಕೆ ನನಗೆ ಮೂಡಿತು.
ಅಪ್ಪ ಅಜಾನುಬಾಹು. ಆರು ಅಡಿ ಎತ್ತರ. ಗುಂಡು ಮುಖ. ಬಿರಿಸು ದೊಡ್ಡ ಕಣ್ಣುಗಳು. ಯಾವಾಗಲು ಗಡ್ಡ ಮಾಡಿಕೊಂಡು ಅಚ್ಚುಕಟ್ಟಾಗಿ ತಲೆ ಬಾಚಿಕೊಂಡಿರುವ ಶಿಸ್ತುಗಾರ. ಮಗುವಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡ ದುರ್ದೈವಿ. ಅಕ್ಕ, ಅಣ್ಣಂದಿರ ಆಶ್ರಯದಲ್ಲಿ ಬೆಳೆದರೂ ಸ್ವಾಭಿಮಾನ ಬಿಟ್ಟುಕೊಡದವರು. ಸಣ್ಣ ವಯಸ್ಸಿನಲ್ಲಿ, ನಿರುದ್ಯೋಗಿಯಾಗಿರುವಾಗಲೇ ಮದುವೆಯಾಗಿ ಅಪ್ಪನೂ ಆಗಿ ಪರಿಪಾಡಲು ಪಟ್ಟ ಪುಣ್ಯಾತ್ಮ. ಅಣ್ಣನ ಮನೆಯಲ್ಲಿ ನಿರುದ್ಯೋಗಿಯಾಗಿ ಹೆಂಡತಿಯೊಡನೆ ಬಾಳಬೇಕಾದ ಪಾಡು ಯಾರಿಗೂ ಬೇಡ! ಬಹುಶಃ ಈ ಅನುಭವ ಸಾಮಾನ್ಯವಾಗಿ ತಮಾಷೆ ಸ್ವಭಾವದ ನಮ್ಮಪ್ಪನನ್ನು ಸಿಡುಕನನ್ನಾಗಿಯೂ ಕೋಪಿಷ್ಠನಾಗಿಯೂ ಮಾಡಿತೆಂದು ಕಾಣುತ್ತದೆ. ಸ್ವತಂತ್ರವಾಗಿ ಸಂಸಾರ ಮಾಡಬೇಕೆಂಬ ಹಠಕ್ಕೆ ಬಿದ್ದ ಅಪ್ಪ ಎಲೆಕ್ಟ್ರಿಕಲ್ ಡಿಪ್ಲೋಮ ಪದವಿ ಪಡೆದ ಹಲವಾರು ವರುಷಗಳ ನಂತರ, ತನ್ನ ಅರ್ಹತಾ ವಯಸ್ಸು ಮೀರುವ ಕೇವಲ ಕೆಲವೇ ದಿನಗಳ ಮೊದಲು, ಯಾರೂ ಕಾಣದ ಪಶ್ಚಿಮ ಬಂಗಾಳದ ಖರಗಪುರದಲ್ಲಿದಲ್ಲಿ ಕೆಲಸ ಸಂಪಾದಿಸಿಕೊಂಡು ಹೆಂಡತಿ ಮಗುವನ್ನು ಕರೆದುಕೊಂಡು ನಡೆದರು.
ಆ ಕನಿಷ್ಠ ಸಂಬಳದಲ್ಲಿ ಹೇಗೆ ಅವರು ಬದುಕಿದರೋ ತಿಳಿಯದು. ಅವರೊಡನೆ ನನ್ನ ಸಹವಾಸ ಬಾಲ್ಯದ ಕೇವಲ ಎರಡು ವರ್ಷಗಳಿಗೆ ಸೀಮಿತವಾಯಿತು. ಶಾಲೆಗೆ ಹೋಗುವ ವಯಸ್ಸಾದ ಕೂಡಲೇ ನನ್ನಮ್ಮನ ಅಣ್ಣ ಮಲೆನಾಡಿನ ತನ್ನ ಮನೆಗೆ ಕರೆದುಕೊಂಡು ಹೋಗಿ ಬಸವಾನಿಯ ಶಾಲೆಗೆ ಸೇರಿಸಿದರು ಎಂಬಲ್ಲಿಗೆ ಅಪ್ಪ ನನ್ನ ಪಾಲಿಗೆ ಚಿಕ್ಕಪ್ಪನಾಗಿಯೇ ಉಳಿದರು. ಮುಂದಿನ ಅನೇಕ ವರ್ಷಗಳ ಕಾಲ ಅವರು ನನಗೆ ಕೌತುಕ ವಾಗಿಯೇ ಉಳಿದರು. ಯಾವಾಗಲಾದರೊಮ್ಮೆ ಸಿಕ್ಕಾಗ ಅವರ ಭರ್ಜರಿ ಪೆರ್ಸನಾಲಿಟಿ ಯನ್ನು ನೋಡಿ ಸಂಭ್ರಮ ಪಡುವುದು ಮಾತ್ರ ನನ್ನ ಪಾಲಿಗೆ ಉಳಿಯಿತು.
ಕಾಲ ಕ್ರಮೇಣ ಅಪ್ಪನ ಸಂಸಾರ ದೊಡ್ಡದಾಯಿತು. ಅವರು ಇನ್ನೂ ಮೂರು ಮಕ್ಕಳನ್ನು ಪಡೆದು ಅವರನ್ನು ತನ್ನಬಳಿಯೇ ಖರಗ್ಪುರದಲ್ಲಿಯೇ ಇರಿಸಿಕೊಂಡು ಅಲ್ಲಿಯೇ ಶಾಲೆಗೆ ಸೇರಿಸಿದರು. ನಾನು ವರ್ಷಕ್ಕೊಮ್ಮೆ ಮಾತ್ರ ಅಪ್ಪನ ಊರಿಗೆ ಹೋಗುತ್ತಿದ್ದೆ. ದೂರದಲ್ಲಿದ್ದರೂ ನನ್ನನ್ನು ಅವರು ಕಡೆಗಣಿಸಲಿಲ್ಲ. ಹೊಸಬಟ್ಟೆ ಹೊಸ ಚಪ್ಪಲಿ ಕೊಡಿಸಿ ಕಳುಹುತ್ತಿದ್ದರು. ಬೇಸಿಗೆ ರಜೆಯಲ್ಲಿ ಅಪ್ಪನ ಮನೆಯಲ್ಲಿ ನನಗೆ ರಾಜೋಪಚಾರ. ಆ ಕ್ಷಣಗಳಲ್ಲಿ ಅಪ್ಪನ ವ್ಯಕ್ತಿತ್ವ ನನಗೆ ಅರ್ಥವಾಗತೊಡಗಿತ್ತು.
ಕೈಯಲ್ಲಿ ಹಣವಿಲ್ಲದಿದ್ದರೂ ಉತ್ತಮ ವಸ್ತುಗಳನ್ನೇ ಕೊಳ್ಳುವ ಅವರ ಹಠ ಎಷ್ಟೋ ಬಾರಿ ನಮ್ಮನ್ನು ನಿರಾಶರನ್ನಾಗಿ ಮಾಡುತ್ತಿತ್ತು. ಏಕೆಂದರೆ ತಮ್ಮಲ್ಲಿರುವ ಅಲ್ಪ ಹಣದಿಂದ ಅವರಿಗೆ ಬೇಕಾದ ಉತ್ತಮ ವಸ್ತುಗಳನ್ನು ಕೊಳ್ಳಲಾಗದೆ ಇದ್ದುದರಿಂದ ಅವರು ಕೊಂಡುಕೊಳ್ಳುತ್ತಲೇ ಇರಲಿಲ್ಲ. ನಾನು ಮೆಟ್ರಿಕ್ಕಿಗೆ ಬಂದಾಗ ನಮ್ಮನೆಯ ಸಂಪತ್ತೆಂದರೆ ಅಪ್ಪನ ರಾಲಿ ಸೈಕಲ್ ಮಾತ್ರ ಆಗಿತ್ತು.
ಈ ನಡುವೆ ಅಪ್ಪ ತನ್ನ ಪ್ರಾಮಾಣಿಕತೆಗೆ, ಕರ್ತವ್ಯ ಪ್ರಜ್ಞೆಗೆ ಕುಟುಂಬದೊಳಗೂ ಮತ್ತು ಹೊರಗೂ ಹೆಸರು ಮಾಡಿದ್ದರು. ಕುಟುಂಬದಲ್ಲಿ ನೆಡೆಯುವ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಅವರು ಕೇವಲ ರೂ 30 ಉಡುಗೊರೆ ನೀಡಿ 'ನನ್ನ ಕೈಯಲ್ಲಿ ಇಷ್ಟೇ ಆಗುವುದು' ಎಂದು ನಿರಮ್ಮಳವಾಗಿ ಹೇಳುತ್ತಿದ್ದರು. ಹೀಗಿದ್ದರೂ ಪ್ರತಿ ವರ್ಷ ತನ್ನಪ್ಪ ಮತ್ತು ಅಮ್ಮನ ವೈದೀಕವನ್ನು ತಪ್ಪದೇ ಶಾಸ್ತ್ರೋಕ್ತವಾಗಿ ಆಚರಿಸುತ್ತಿದ್ದರು. ಜೊತೆಗೆ ಹಿರಿಯರಿಗೆ ತರ್ಪಣ ನೀಡುವ ಮಹಾಲಯವನ್ನೂ ಹಣಕ್ಕೆ ತೊಂದರೆ ಇದ್ದರೂ ಪತ್ರಿಕೆಯನ್ನು ಖರೀದಿಸಿಯೇ ಓದುತ್ತಿದ್ದರು. ನಮ್ಮ ಮನೆಗೆ ರೇಡಿಯೋ ಬರುವಾಗ ನಾನಾಗಲೇ ತೀರ್ಥಹಳ್ಳಿಯ ಮಾವನ ಮನೆಯಲ್ಲಿದ್ದು ಸರಕಾರಿ ಶಾಲೆಯಲ್ಲಿ ಪಿಯುಸಿ ಕಲಿಯತೊಡಗಿದ್ದೆ.
ಇಂದಿನ ಕಾಲದ ಅಪ್ಪಂದಿರ ಹಾಗೆ ನಮ್ಮಪ್ಪ ಎಂದೂ ಬೆಣ್ಣೆ ಮಾತುಗಳನ್ನಾಡಲಿಲ್ಲ. ಅವರು ಬಿರುಸಾಗಿಯೇ ಮಾತನಾಡುತ್ತಿದ್ದರು. ನಮಗೆ ಏನಾದರೂ ಖರೀದಿಸಬೇಕೆಂಬ ಅಸೆಯಾದರೆ ಅಪ್ಪನನ್ನು ಕೇಳುವಂತಿರಲಿಲ್ಲ. ಅಮ್ಮನ ಮುಖಾಂತರ ಅರ್ಜಿ ಹೋಗಬೇಕಿತ್ತು ಮತ್ತು ಹೆಚ್ಚಾಗಿ ಆ ಅರ್ಜಿ ತಿರಸ್ಕೃತವಾಗುತ್ತಿತ್ತು. ಅಪ್ಪ ತಮಾಷೆ ಮಾಡಿದ್ದು ಕಡಿಮೆ. ನನ್ನನ್ನು ಹತ್ತಿರ ಕರೆದು ಮುದ್ದು ಮಾಡಿದ್ದಾಗಲೀ, ಮಾರ್ಗದರ್ಶನ ನೀಡಿದ್ದಾಗಲಿ ಇಲ್ಲವೇ ಇಲ್ಲ.
ತನ್ನ ನಿಲುವಿನಿಂದ, ನಡವಳಿಕೆಯಿಂದ ಅವರು ನಮ್ಮ ಮೇಲೆ ಪ್ರಭಾವ ಬೀರಿದರು. ನಾನು ಹೈಸ್ಕೂಲಿಗೆ ಸೇರಿದನಂತರವೂ ಮಾವನ ಮನೆಯಲ್ಲಿ ಓದಿದರೂ ಅವರಿಗೆ ಪ್ರತಿ ತಿಂಗಳು ನನ್ನ ಖರ್ಚಿನ ಹಣ ಕಳಿಸುತ್ತಿದ್ದರು.
ಮುಂದೆ ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದೆ. ಅಪ್ಪ ನಿವೃತ್ತರಾದರು. ತನ್ನ ಮೂವತ್ತು ವರ್ಷದ ಸೇವಾ ಅವಧಿಯಲ್ಲಿ ತನ್ನ ಮಕ್ಕಳನ್ನು ಓದಿಸಿದ್ದು ಬಿಟ್ಟರೆ ಯಾವುದೇ ಆಸ್ತಿ ಮಾಡಲಿಲ್ಲ.
ಹೀಗಿದ್ದ ಅಪ್ಪ ತಾನು ಆಶ್ರಯ ಪಡೆದ ಅಣ್ಣನ ಮನೆಯ ಮೇಲೆ ಬಹಳಷ್ಟು ಮಮತೆ ಇಟ್ಟುಕೊಂಡಿದ್ದರು. ನನ್ನ ಹತ್ತಿರ ಸಿಡುಕುತ್ತಿದ್ದ ಅಪ್ಪ ತನ್ನಣ್ಣನ ಮಕ್ಕಳ ಕುರಿತಾಗಿ ಸದಾ ಪ್ರೀತಿಯನ್ನೇ ಹೊಂದಿದ್ದರು. ತನ್ನ ಹುಟ್ಟೂರಿನ ಮೇಲೆ ಅವರಿಗೆ ಅಪರಿಮಿತ ಅಭಿಮಾನ ಇತ್ತು. ನಿವೃತ್ತಿಯ ಹಣದ ಕೆಲ ಭಾಗವನ್ನು ಅವರು ತಮ್ಮೂರಿನ ಕೆಲಸಗಳಿಗೆ ವಿನಿಯೋಗಿಸಿದರು. ಅದುಬಿಟ್ಟರೆ ಅವರು ಕೃಪಣರಂತೆ ಬಾಳಿದರು.
ಅವರಿಗೆ ಜೀವನೋತ್ಸಾಹ ಇರಲಿಲ್ಲವೆಂದಲ್ಲ. ನಿವೃತ್ತರಾದ ಮೇಲೆ ಚಿನ್ನದ ಉಂಗುರ ಧರಿಸಿದರು. ಅನಂತರ ಮೋಟಾರ್ ಸೈಕಲ್ ಓಡಿಸುವುದನ್ನು ಕಲಿತರು. ವಾಸಕ್ಕೆ ಮನೆ ಇಲ್ಲದಿದ್ದರಿಂದ ನೌಕರಿಯಲ್ಲಿದ್ದ ನನ್ನ ಜೊತೆ ಇದ್ದರೂ ಖಾಸಗಿ ನೌಕರಿ ಮಾಡಿ ತನ್ನ ಖರ್ಚನ್ನು ತಾನೇ ದುಡಿಯುವ ಇರಾದೆ ತೋರಿಸುತ್ತಿದ್ದರು.
ಅಪ್ಪ ನಿರ್ಭಿಡೆಯಿಂದ, ಇದ್ದುದನ್ನು ಇದ್ದಂತೆಯೇ ಹೇಳುವ ಎದೆಗಾರಿಕೆ ಇಟ್ಟುಕೊಂಡಿದ್ದರು. ಎಲ್ಲರ ಸೋಗಲಾಡಿತನವನ್ನು ನೇರವಾಗಿ ಖಂಡಿಸುತ್ತಿದ್ದರು. ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. 1974 ರಲ್ಲಿ ರಾಷ್ಟೀಯ ರೈಲ್ವೆ ಮುಷ್ಕರವಾದಾಗ ಮುಷ್ಕರವನ್ನು ತಿರಸ್ಕರಿಸಿದ ಕೆಲವೇ ಜನರಲ್ಲಿ ಅವರು ಒಬ್ಬರಾಗಿದ್ದರು. ಅವರ ಪ್ರಕಾರ ರೈಲ್ವೆ, ನೌಕರರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದೆ; ಮುಷ್ಕರ ತಪ್ಪು ಎಂದು ಹೇಳುತ್ತಿದ್ದರು. ರೈಲ್ವೆ ಕಾರ್ಖಾನೆಯಲ್ಲಿ ಎಲ್ಲರೂ ಮುಷ್ಕರ ಮಾಡಿ ಘೋಷಣೆ ಕೂಗುತ್ತಿರುವಾಗ ದಾದು ಮಾಡದೇ ಕೆಲಸ ಮಾಡಿದರು. ಜೀವಕ್ಕೆ ಅಪಾಯವಾಗುವ ಸಂದರ್ಭ ಇದ್ದರೂ ತನ್ನ ಆದರ್ಶವನ್ನು ಬಿಟ್ಟುಕೊಡಲಿಲ್ಲ. ತಮಾಷೆ ಎಂದರೆ ಆಗಿನ ಕಾಂಗ್ರೆಸ್ ಸರಕಾರವನ್ನೂ, ಪ್ರಧಾನಮಂತ್ರಿ ಇಂದಿರಾಗಾಂಧಿಯನ್ನೂ ಅವರು ನಿಷ್ಠುರವಾಗಿ ಬೈಯುತ್ತಿದ್ದರು.
ಅಪ್ಪನ ಕೊನೆಗಾಲದಲ್ಲಿ ಅವರ ಸಿಡುಕುತನ ನಿಷ್ಠುರತೆ ಯ ಹಿಂದಿರುವ ಹತಾಶೆ ನಮಗೆ ಅರ್ಥವಾಗತೊಡಗಿತ್ತು. ಅಪ್ಪನ ಮೇಲೆ ನಮಗೆ ಅಭಿಮಾನವನ್ನು ಅದು ಹೆಚ್ಚಿಸಿತ್ತು. ಅವರು ಏನೂ ಮಾತನಾಡದೇ ನಮಗೆ ಪ್ರಾಮಾಣಿಕತೆಯ ಪಾಠ ಕಲಿಸಿದರು. ಬಡತನದಲ್ಲಿಯೂ ಸ್ವಾಭಿಮಾನದಿಂದ ಬದುಕುವ ಕಲೆಯನ್ನು ಅವರು ಕಲಿಸಿದರು. ನೆಮ್ಮದಿಯಿಂದ ನಿದ್ದೆ ಮಾಡಲು ಬೇಕಾಗುವ ಸಾಮರ್ಥ್ಯವನ್ನು ಅವರು ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಸರಳ ಜೀವನ ಉತ್ತಮ ಅರೋಗ್ಯ ಮತ್ತು ಬದುಕಲು ಬೇಕಾದ ಸಾಮಾನ್ಯ ಜ್ಞಾನ ಇವು ಅಪ್ಪ ನೀಡಿದ ಬಳುವಳಿಯಾಗಿತ್ತು.
2019 ರಲ್ಲಿ ತನ್ನ 91ನೇ ವಯಸ್ಸಿನಲ್ಲಿ ಅವರು ದೇವರ ಪಾದ ಸೇರುವವರೆಗೂ ಅವರ ಜೀವನದಲ್ಲಿ regret (ವಿಷಾದ) ಎಂಬ ಪದ ತಮ್ಮ ಬಳಿ ಸುಳಿಯದಂತೆ ಬದುಕಿದರು. ತನಗೆ ಹೇಗೆ ಬೇಕೋ ಹಾಗೆ ಬದುಕನ್ನು ಅವರು ಅನುಭವಿಸಿದರು. ಅವರ ಜೀವನದಲ್ಲಿ ಮೃಷ್ಟಾನ್ನ ವಿರಲಿಲ್ಲ, ತೃಪ್ತಿ ಇತ್ತು. ಅದಕ್ಕಾಗಿಯೇ 'ಹಂಗಿನರಮನೆಗಿಂತ ವಿಂಗಡದ ಗುಡಿಲೇಸು, ಭಂಗಪಟ್ಟು ಉಂಬ ಬಿಸಿಯನ್ನಕಿಂತ ತಂಗುಳವೇ ಲೇಸು ಸರ್ವಜ್ಞ' ಅವರ ಘೋಷ ವಾಕ್ಯವಾಗಿತ್ತು.
ಮರಣದ ಕುರಿತು ಅವರು ಚಿಂತಿಸಲಿಲ್ಲ. ಸ್ವಾಭಾವಿಕವಾಗಿ ದೇವರನ್ನು ಧ್ಯಾನಿಸುತ್ತ ಅವರತ್ತ ಸಾಗಿದರು. ಆದರ್ಶಗಳನ್ನು ಒಂದರಘಳಿಗೆಯೂ ಬಿಟ್ಟು ಕೊಡದ ಅವರ ಬದುಕು ಕಷ್ಟಗಳಿಂದ ಕೂಡಿದ್ದರೂ ನೆಮ್ಮದಿಗೆ ಭಂಗ ತರಲಿಲ್ಲ. ಅವರು ಆದರ್ಶವಾಗಿಯೇ ಉಳಿದರು.
- ಮಂಜುನಾಥ್ ಎಲ್ ಎಚ್, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ