ಆಳ್ವಾಸ್: ಮೂರು ದಿನಗಳ ಯೂತ್ ಯೋಗ ಫೆಸ್ಟ್

Upayuktha
0



 


ಮಿಜಾರು: ಯೋಗದಲ್ಲಿ ಮುಖ್ಯವಾಗಿ ಎರಡು ಅಂಶಗಳು. ಒಂದು ತತ್ವಶಾಸ್ತ್ರ ಇನ್ನೊಂದು ಅಭ್ಯಾಸ. ಆದರೆ ಈ ಎರಡು ಅಂಶಗಳು ಒಟ್ಟಿಗೆ ಮೇಳೈಸಬೇಕಾದಾಗ, ಮೊದಲು ತತ್ತ್ವಶಾಸ್ತ್ರಕ್ಕೆ  ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅಭ್ಯಾಸ ಮಾಡಲು ಮೊದಲು ಯೋಗವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು ಎಂದು ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಉಪಪ್ರಾಂಶುಪಾಲೆ ಹಾಗೂ ಡೀನ್  ಡಾ. ಸುಜಾತ ದಿನೇಶ್ ಹೇಳಿದರು.

ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಪರಿಷತ್ತು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಇವುಗಳ ಜಂಟಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 16 ರಿಂದ 19ರವರೆಗೆ `ಯೂತ್ ಯೋಗ ಫೆಸ್ಟಿವಲ್' ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,  ನ್ಯಾಚುರೋಪಥಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬರುವ ಅಡೆತಡೆಗಳನ್ನು ಯೋಗತತ್ವಶಾಸ್ತ್ರ ಸಿದ್ಧಾಂತಗಳ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು.   ನಮ್ಮ ಭವಿಷ್ಯವನ್ನು ನಮ್ಮ ವರ್ತಮಾನ  ನಿರ್ಧರಿಸುತ್ತದೆ. ಆದುದರಿಂದ ನಾವು ತಿನ್ನುವ ಆಹಾರ ಹಾಗೂ ನಿದ್ರೆ ನಮ್ಮ ಭವಿಷ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಯೋಗ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಳವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕೇಂದ್ರೀಯ ಸಂಶೋಧನಾ ಮಂಡಳಿ ನಾಗಮಂಡಲ ಇಲ್ಲಿನ ಸಂಶೋಧನಾ ಅಧಿಕಾರಿ ಡಾ. ನಿತೀಶ್ ಎಂ ಕೆ, ಈ ವರ್ಷ ಭಾರತ ಆಯುಷ್ ಸಚಿವಾಲಯವು ಅಂತರರಾಷ್ಟ್ರೀಯ ಯೋಗ ದಿನದ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2014 ರಲ್ಲಿ ಪ್ರಧಾನಿಯವರಿಂದ ಈ ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರಾರಂಭಿಸಲಾಯಿತು. ಇಂದು ಯೋಗವು 190 ಕ್ಕೂ ಹೆಚ್ಚಿನ ದೇಶಗಳಲ್ಲಿ ಜೀವನ ಪದ್ದತಿಯ ಭಾಗವಾಗಿ ಆಳವಡಿಸಿಕೊಳ್ಳಲಾಗಿದೆ ಮತ್ತು 144 ದೇಶಗಳು ಪ್ರಕೃತಿ ಚಿಕಿತ್ಸೆಯನ್ನು ಸ್ವೀಕರಿಸಿವೆ  ಎಂದರು.


ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ  ಮಾತನಾಡಿ 2022ರ ಯೋಗಸಮೀಕ್ಷೆಯ ಪ್ರಕಾರ ಯುಎಸ್‌ನಲ್ಲಿ 38.4 ಮಿಲಿಯನ್ ಜನರು ಯೋಗವನ್ನು ಅನುಸರಿಸುತ್ತಿದ್ದಾರೆ. ಸಾಮನ್ಯವಾಗಿ ಜನರು ಒತ್ತಡ ನಿವಾರಣೆ, ನಮ್ಯತೆ, ಮಾನಸಿಕ ಸ್ಪಷ್ಟತೆಗೆ ಯೋಗವನ್ನು ಅನುಸರಿಸುತ್ತಾರೆ. ಆದರೆ ಯೋಗದೊಂದಿಗೆ ನಾವು ತಿನ್ನುವ ಆಹಾರ ಕೂಡಾ ಪರಿಣಾಮ ಬೀರಬಲ್ಲದು. ಯೋಗವನ್ನು ಅನುಸರಿಸುವುದರ ಜೊತೆಯಲ್ಲಿ, ಆಹಾರಕ್ರಮವನ್ನು ಸರಿಯಾಗಿ ಪಾಲಿಸಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪತಂಜಲಿ ಮಹರ್ಷಿಗೆ  ವಿಶೇಷ ಪೂಜೆ ಸಲ್ಲಿಸಲಾಯಿತು ಮೂರು ದಿನಗಳ ಕಾಲ ನಡೆದ ಯೂತ್ ಯೋಗ ಫೆಸ್ಟಿವಲ್‌ನಲ್ಲಿ ಯೋಗ ಒಲಿಂಪಿಯಾಡ್, ಯೋಗ ಸ್ಕಿಟ್, ಯೋಗ ಡ್ಯಾನ್ಸ್ ಫ್ಯೂಷನ್, ಯೋಗ ಡಿಬೇಟ್, ಯೋಗ ರೀಲ್ಸ್, ಯೋಗ ಗಿಬ್ಲಿ, ಯೋಗ ಪೋಸ್ಟರ್ ಸ್ಪರ್ಧೆಗಳು ನಡೆಯಲಿವೆ. ಎಸ್‌ಡಿಎಮ್ ಕಾಲೇಜ್ ಉಜಿರೆ, ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು,  ಶಾರದಾ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಮುನಿಯಾಲ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಹಾಗೂ ಆಳ್ವಾಸ್ ಶಾಲೆ ಹಾಗೂ ಪದವಿ ಕಾಲೇಜುಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಹಾಗೂ ಉಪಪ್ರಾಂಶುಪಾಲೆ ಡಾ.ವಿದ್ಯಾರಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರೀನಾ ರೊಡ್ರಿಗಸ್ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top