ಮಡಿಕೇರಿ: ಕೊಡಗು ಜಿಲ್ಲೆಯ ರೇಡಿಯೊ ಕೇಳುಗರ ಕುಟುಂಬದ ಸದಸ್ಯರಂತಿದ್ದ ‘ಕಂಠಸಿರಿ’ ಸುಬ್ರಾಯ ಸಂಪಾಜೆ ಅವರು ಈಚೆಗಷ್ಟೇ ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಹುದ್ದೆಯಿಂದ ನಿವೃತ್ತರಾದರು. ತಮ್ಮ ಅಪೂರ್ವ ಮಾತಿನ ಮೋಡಿಯ ಮೂಲಕ ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅವರು ಕೇವಲ ಆಕಾಶವಾಣಿಯ ಉದ್ಘೋಷಕರಾಗಿ ಮಾತ್ರವಲ್ಲ ಅಪರೂಪದ ಗಮಕ ಮತ್ತು ಯಕ್ಷಗಾನದ ಕಲಾವಿದರಾಗಿಯೂ ಅವರು ಕೊಡಗಿನ ಕಲಾಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಹೆಚ್ಚಿನ ಮಂದಿಗೆ ಇವರು ಕೇವಲ ಆಕಾಶವಾಣಿ ಉದ್ಘೋಷಕರಾಗಿಯಷ್ಟೇ ಗೊತ್ತು. ಆದರೆ, ಜಿಲ್ಲೆಯಲ್ಲಿ ಹಿರಿಯ ಕಲಾವಿದರಾಗಿದ್ದ ಗೋಪಾಲಕೃಷ್ಣ ಅವರ ನಂತರ ಗಮಕ ಕಲೆಯಲ್ಲಿ ಗುರುತಿಸಬಹುದಾದ ಹೆಸರು ಸುಬ್ರಾಯ ಸಂಪಾಜೆ ಅವರದ್ದು. ತಮ್ಮ ಕಂಚಿನ ಕಂಠದ ಮೂಲಕ ಗಮಕ ಕಲೆಯಲ್ಲಿ ನಿಷ್ಣಾತರೂ ಆಗಿದ್ದಾರೆ. ಇವಿಷ್ಟೇ ಅಲ್ಲದೇ ಹಾಡುಗಾರಿಕೆ, ಯಕ್ಷಗಾನ ಕಲೆಯಲ್ಲೂ ಇವರು ಹೆಸರು ಗಳಿಸಿದ್ದಾರೆ.
ಸಂಪಾಜೆ ಗ್ರಾಮದವರಾದ ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮರಗೋಡು, ಸಂಪಾಜೆ, ಉಡುಪಿ ಮತ್ತು ಕೋಟ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 1995ರಲ್ಲಿ ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾಗಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಇಲ್ಲಿಯವರೆಗೆ 30 ವರ್ಷಗಳಷ್ಟು ಸುದೀರ್ಘ ಕಾಲ ಇವರ ಧ್ವನಿಯನ್ನು ಇಲ್ಲಿನ ಅಸಂಖ್ಯಾತ ಕೇಳುಗರು ನಿತ್ಯವೂ ಕೇಳುತ್ತಿದ್ದರು. ಇವರ ಧ್ವನಿ ಕೇಳದೇ ದಿನವೇ ಆರಂಭಗೊಳ್ಳುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇವರು ಕೇಳುಗರ ಪ್ರಿಯರಾಗಿದ್ದರು ಎಂದರೆ ಅತಿಶಯೋಕ್ತಿ ಅಲ್ಲ.
ಕೊಡಗಿನಲ್ಲಿ ಸಂಭವಿಸಿದ ಭೂಕುಸಿತದ ಸಮಯದಲ್ಲಿ ಇವರು ಮತ್ತು ಮತ್ತೊಬ್ಬ ಉದ್ಘೋಷಕರಾಗಿದ್ದ ಕೂಪದಿರ ಶಾರದಾ ನಂಜಪ್ಪ ಅವರು ಮಾಡಿದ ಸೇವೆಯನ್ನು ಇಂದಿಗೂ ಜನರು ನೆನೆಯುತ್ತಾರೆ. ಎಲ್ಲೆಂದರಲ್ಲಿ ಭೂಮಿ ಕುಸಿದು, ಮರಗಳು ಬುಡಮೇಲಾಗಿ ವಾರಗಟ್ಟಲೆ ವಿದ್ಯುತ್ ಸಂಪರ್ಕ ಇಲ್ಲದೆ ಜಿಲ್ಲೆಯ ಬಹುತೇಕ ಭಾಗಗಳು ಕತ್ತಲೆಯಲ್ಲ ಮುಳುಗಿತ್ತು. ಆಗ ಏಕೈಕ ಸಮೂಹ ಮಾಧ್ಯಮವಾಗಿ ಜನರ ಮನೆ ಬಾಗಿಲಿಗೆ ಬಂದಿದ್ದು ಮಡಿಕೇರಿ ಆಕಾಶವಾಣಿ. ಹೆಲಿಕಾಪ್ಟರ್ನಿಂದ ಎಲ್ಲಿ ಆಹಾರ ಪೊಟ್ಟಣಗಳು ಬರುತ್ತವೆ, ಯಾವ ರಸ್ತೆ ಸಂಪರ್ಕ ಕಡಿತಗೊಂಡಿದೆ, ಎಲ್ಲಿ ಪ್ರವಾಹ ಬಂದಿದೆ ಎಂಬೆಲ್ಲ ವಿಚಾರಗಳನ್ನು ಇವರಿಬ್ಬರೂ ಜಿಲ್ಲಾಡಳಿತದ ಸಹಕಾರದೊಂದಿಗೆ ನಿರಂತರವಾಗಿ ಆಕಾಶವಾಣಿಯಲ್ಲಿ ಪ್ರಕಟಿಸಿದರು. ಇದು ಆಗ ಸಂಕಷ್ಟದಲ್ಲಿ ಸಿಲುಕಿದ್ದ ಜನರಿಗೆ ಅನುಕೂಲವಾಗಿತ್ತು.
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಇವರ ಯಕ್ಷಗಾನದ ಗುರುಗಳು. ಭಾಗವತರಾಗಿ ಇವರು ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಾಹಿತಿಯೂ ಆಗಿರುವ ಇವರ ‘ಪುಟ್ಟಕ್ಕ’ ಕಿರು ಕಾದಂಬರಿಗೆ ರಾಜ್ಯಮಟ್ಟದ ಪುರಸ್ಕಾರ ಲಭಿಸಿದೆ. ಯಕ್ಷಗಾನ ಅಧ್ಯಯನದಲ್ಲಿ ಪಾರಮರ್ಶನ ಗ್ರಂಥ ಎನಿಸುವಂತಹ ಇವರ ‘ಪುರಾಣಯಾನ’ ಕೃತಿಯು ವಿದ್ವಾಂಸರ ಮನ್ನಣೆಗೆ ಪಾತ್ರವಾಗಿದೆ. ಪ್ರಶ್ನೋತ್ತರ ರೂಪದಲ್ಲಿ ಇವರು ಪ್ರಕಟಿಸಿರುವ ‘ರಸ ರಾಮಾಯಣ’ ಕೃತಿಯಲ್ಲಿ 1,385 ಪ್ರಶ್ನೆ, ಉತ್ತರ ಇದ್ದರೆ, ‘ಕೊಡಗು ಕ್ವಿಝ್’ನಲ್ಲಿ 1,724 ಪ್ರಶ್ನೆ– ಉತ್ತರಗಳಿವೆ. ಈ ಕೃತಿಯಂತೂ ಕೊಡಗಿನ ಮಟ್ಟಿಗೆ ಒಂದು ಅಪೂರ್ವ ಮಾಹಿತಿ ಕಣಜವಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ