ನನ್ನನ್ನೂ ಬದುಕಲು ಬಿಡಿ

Upayuktha
0



ನ್ನನ್ನು ಸಮಾಜದ ಕಣ್ಣು ಎಂದು ಕರೆಯುತ್ತಾರೆ. ಅಂದಿನ ಸಮಾಜದಲ್ಲಿ ನನ್ನ ಪಾತ್ರ ಶೂನ್ಯ. ನಾ ಯಾರು ಎಂಬುದು ಸಮಾಜಕ್ಕೆ ತಿಳಿದಿತ್ತು. ಆದರೆ ನನಗೆ ಸಮಾಜ ಎಂದರೇನು ಎಂದೇ ತಿಳಿದಿರಲಿಲ್ಲ. ಏಕೆಂದರೆ ನಾನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದೆ. ಬಾಲ್ಯ ಎಂದರೆ ಏನೆಂದು ನನಗೆ ತಿಳಿದಿರಲಿಲ್ಲ. ಏಕೆಂದರೆ ನಾನು ಹುಟ್ಟಿ, ಯವ್ವನಕ್ಕೆ ಬರುವ ಮೊದಲೇ ನನ್ನವರೇ ನನ್ನನ್ನು ಹಸೆಮಣೆ ಏರುವಂತೆ ಬಲವಂತ ಮಾಡುತ್ತಿದ್ದರು. ನನಗೆ ಬೇರೆ ವಿಧಿ ಇಲ್ಲದೆ ಅವರುಗಳ ಮಾತಿಗೆ ಮಣಿದು ಅವನು ಕಟ್ಟುವ ಕರಿಮಣಿಗೆ ಶರಣಾಗಬೇಕಾಗಿತ್ತು. ಯಾವುದೋ ಮೂವತ್ತು ಮೂವತ್ತೈದು ದಾಟಿದ ಅಪರಿಚಿತನೊಡನೆ ಮದುವೆ ಮಾಡಿಸಿ ಅವರು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿದ್ದರು. ಆದರೆ ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಕೇಳುವವರು ಯಾರೂ ಇರಲಿಲ್ಲ. ನನಗೂ ಭಾವನೆಗಳಿವೆ, ಆಸೆ- ಆಕಾಂಕ್ಷೆಗಳಿವೆ ಎಂಬುದನ್ನು ಒಬ್ಬರೂ ತಿಳಿಯಲಿಲ್ಲ. ಮುಂದೆ ಅವನೊಂದಿಗೆ ಜೀವನ ಕಳೆಯುವವಳು ನಾನಲ್ಲವೇ? ಅದನ್ನು ಯಾರೊಬ್ಬರೂ ಯೋಚಿಸುವುದಿಲ್ಲ.


ಹುಟ್ಟಿನಿಂದ ಸಾಯುವವರೆಗೂ ನಾಲ್ಕು ಗೋಡೆಗಳ ಮಧ್ಯೆಯಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದೆ. ಹೊರ ಪ್ರಪಂಚದ ಸ್ವಲ್ಪ ಮಟ್ಟಿನ ಜ್ಞಾನವೂ ನನ್ನಲ್ಲಿರಲಿಲ್ಲ. ಮದುವೆಯ ನಂತರವೂ ನನ್ನ ನೋವು- ನಲಿವುಗಳನ್ನು ಕೇಳುವವರು ಯಾರೂ ಇರಲಿಲ್ಲ. ಸಂತೋಷ ಎಂಬುದನು ಕಂಡವಳೇ ಅಲ್ಲ ನಾನು. ಏಕೆಂದರೆ ಸಂಭ್ರಮಿಸಬೇಕಾಗಿದ್ದ ದಿನಗಳಲ್ಲಿ ಜವಾಬ್ದಾರಿ ನನ್ನ ಹೆಗಲೇರಿತ್ತು. ಏನೂ ಅರಿಯದ ಸಮಯದಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡುತ್ತಿದ್ದೆ. ನಾ ಶ್ರೀಮಂತ ವರ್ಗದಲ್ಲಿ ಜನಿಸಿದರೆ ಒಳ್ಳೆಯ ಶಿಕ್ಷಣ ದೊರೆಯುತ್ತಿತ್ತು. ಅದೇ ಬಡ ವರ್ಗದಲ್ಲಿ ಜನಿಸಿದರೆ ಶಿಕ್ಷಣದಿಂದ ತೀರಾ ವಂಚಿತಳಾಗುತ್ತಿದ್ದೆ. ವಿಷಜಂತುಗಳಿಂದ ತುಂಬಿದ್ದ ಆ ಸಮಾಜದಲ್ಲಿ ನಾನು ತಲೆಎತ್ತಿ ನಡೆಯುವಂತಿಲ್ಲ, ಮಾತನಾಡುವಂತಿಲ್ಲ. ಅದೆಷ್ಟೇ ಸಂಕಷ್ಟಗಳು ಬಂದರೂ ಕಟ್ಟಿಕೊಂಡವನ ಜೊತೆಯೇ ಬಾಳಬೇಕಾಗಿತ್ತು.


ತವರು ಮನೆಗೆ ಕೇವಲ ಅತಿಥಿಯಾಗಿ ಉಳಿಯುತ್ತಿದ್ದೆ. ಅಷ್ಟು ಮಾತ್ರವಲ್ಲದೆ ಜೀತ ಪದ್ಧತಿಯು ಅಸ್ತಿತ್ವದಲ್ಲಿತ್ತು. ನನ್ನ ಪತಿ ಅನಾರೋಗ್ಯ ಅಥವಾ ಇನ್ಯಾವುದೋ ಕಾರಣಗಳಿಂದ ಸಾವಿಗೀಡಾದರೆ ಅವನ ಚಿತೆಗೆ ನಾನೂ ಹಾರಬೇಕಿತ್ತು. ಒಂದು ವೇಳೆ ನಾನು ಹಾರದಿದ್ದರೆ, ನನ್ನವರೇ ನನ್ನನ್ನು ಅವನ ಚಿತೆಗೆ ಎಳೆದುಕೊಂಡು ಹೋಗಿ ದೂಡಿ ಹಾಕುತ್ತಿದ್ದರು. ದಿನಗಳು ಉರುಳಿದಂತೆ ಸಮಾಜ ಬದಲಾಗುತ್ತಾ ಹೋಯಿತು. ನನಗೂ ಹೊರ ಪ್ರಪಂಚ ನೋಡಲು ಅವಕಾಶ ದೊರೆಯಿತು. ಮೊದಲು ನನಗೆ ‘ಸತಿ ಪದ್ಧತಿಯ' ಪಟ್ಟ ನಂತರ ವಿಧವೆ ಎಂಬ ಪಟ್ಟ. ಹೌದು, ನಂತರದ ಸಮಾಜದಲ್ಲಿ ನನ್ನ ಪತಿ ಸಾವನ್ನಪ್ಪಿದರೆ ನನಗೆ ವಿಧವೆ ಎಂಬ ಪಟ್ಟವನ್ನು ನೀಡುತ್ತಿದ್ದರು. ನಾನು ಯಾವ ಕಾರ್ಯಕ್ರಮಗಳಿಗೂ ಹೋಗುವಂತಿರಲಿಲ್ಲ. ಬೇರೆ ಮಕ್ಕಳನ್ನು ಎತ್ತಿ ಕೊಂಡಾಡಲೂ ಅವಕಾಶವಿರಲಿಲ್ಲ. ನಾ ಹೆತ್ತ ಮಕ್ಕಳ ಮದುವೆಯಲ್ಲಿಯೂ ಸಹ ಪಾಲ್ಗೊಳ್ಳುವಂತಿಲ್ಲ. ಒಂದು ವೇಳೆ ನಾ ಅಲ್ಲಿಗೆ ಹೋದರೆ ಅಪಶಕುನ ಎಂದು ನನ್ನನ್ನು ದೂರ ತಳ್ಳುತ್ತಿದ್ದರು. ಸಮಾಜದಲ್ಲಿ ನನ್ನನ್ನು ಅಗೌರವದಿಂದ ನೋಡುತ್ತಿದ್ದರು. ಇಲ್ಲೂ ನನಗೆ ಸಂತಸ ಎಂಬುದು ದೊರೆಯಲೇ ಇಲ್ಲ.


ವರುಷಗಳು ಉರುಳಿದಂತೆ ಎಲ್ಲವೂ ಬದಲಾಯಿತು.ನನಗೂ ಸ್ವತಂತ್ರ ಸಿಕ್ಕಿತು. ಕೊನೆಗೂ ಭಗವಂತ ನನ್ನ ಮೇಲೆ ದಯೆ ತೋರಿದ. ಶಾಲೆಯ ಮೆಟ್ಟಿಲೇರಿದೆ. ಉನ್ನತ ವ್ಯಾಸಂಗಕ್ಕೂ ಅವಕಾಶ ದೊರೆಯಿತು. ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾನೂ ಮೊದಲಾದೆ. ಎಲ್ಲಾ ರಂಗಳಲ್ಲಿಯೂ ಮೂಲೆ ಗುಂಪಾಗಿದ್ದ ನಾನು ನಂತರದ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಮಾದರಿಯಾದೆ. ಎಲ್ಲಾ ಹುದ್ದೆಗಳಲ್ಲಿಯೂ ನನಗೆ ಮೀಸಲಾತಿ ದೊರೆಯಿತು. ಸರಕಾರ ನನಗೆಂದು ಹಲವಾರು ರೀತಿಯ ಕಾಯ್ದೆ, ಹಕ್ಕು, ನೀತಿ- ನಿಯಮಗಳನ್ನು ಜಾರಿಗೆ ತಂದಿತು. ನಾನೂ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಈಗಲೂ ನೀಡುತ್ತಿದ್ದೇನೆ. ಕುಟುಂಬದಲ್ಲಿಯೂ ನನಗೆ ಉತ್ತಮ ಸ್ಥಾನ - ಮಾನ ದೊರೆಯಿತು ಮತ್ತು ಎಲ್ಲರ ಪ್ರೀತಿ- ಗೌರವವೂ ಲಭಿಸಿತು. ಸಮಾಜವು ನನ್ನನ್ನು ಹೆಣ್ಣು, ನಾರಿ, ಮಹಿಳೆ, ಜನನಿ ಎಂದೆಲ್ಲಾ ಕರೆಯಲು ಪ್ರಾರಂಭಿಸಿತು. ನನ್ನನ್ನೂ ತಾಯಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ, ಸಹೋದರಿಯಾಗಿ, ಎಲ್ಲಾ ರೀತಿಯಲ್ಲಿಯೂ ಸಮಾಜ ಒಪ್ಪಿಕೊಂಡಿತು. ಮಾತ್ರವಲ್ಲದೆ, ನನ್ನನ್ನು ದೇವರೆಂದು ಪೂಜಿಸಲು ಪ್ರಾರಂಭಿಸಿದರು.


ಎಲ್ಲವೂ ಸರಿಯಾಯಿತು ಎಂಬ ಹೊತ್ತಿಗೆ ಮತ್ತೆ ಸಮಾಜವು ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಆರಂಭಿಸಿತು. ಪ್ರೀತಿಯ ನೆಪ ಹೇಳಿ, ದೈಹಿಕ ಸುಖಕ್ಕಾಗಿ ನನ್ನನ್ನು ಆವರಿಸಿ, ಕೊನೆಗೆ ದೂರ ತಳ್ಳುತ್ತಾರೆ. ತಮ್ಮ ಮನೆಯ ಹೆಣ್ಣನ್ನು ಜೋಪಾನವಾಗಿ ನೋಡಿಕೊಂಡು, ಇನ್ನೊಂದು ಮನೆಯ ಹೆಣ್ಣಿಗಾಗಿ ಜೊಲ್ಲು ಸುರಿಸುತ್ತಾರೆ. ದಿನದಿಂದ ದಿನ ನನ್ನ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ ಹೆಚ್ಚುತ್ತಲೇ ಇದೆ. ನಾ ಮುಟ್ಟಾದರೆ ಜನ ದೂರ ತಳ್ಳುತ್ತಾರೆ. ನಂತರದ  ದಿನಗಳಲ್ಲಿ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಈಗಲೂ ಈ ಪದ್ಧತಿ ಕೆಲವು ಕಡೆಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಈ ಸಮಾಜದಲ್ಲಿ ಹೆಣ್ತನಕ್ಕೆ ಜಾಗವಿಲ್ಲವೇ? ಎಲ್ಲರ ಮನೆಯಲ್ಲಿ ಸಹೋದರಿಯರು ಇಲ್ಲದೇ ಇರಬಹುದು, ಆದರೆ ಜನ್ಮವಿತ್ತ ತಾಯಿ ಇರುವಳು ಅಲ್ಲವೇ? ಅವಳಂತೆಯೇ ಉಳಿದ ಹೆಣ್ಣು ಮಕ್ಕಳು ಅಲ್ಲವೇ? ಅವಳನ್ನೇಕೆ ಕೆಟ್ಟ ದೃಷ್ಟಿಯಿಂದ ಕಾಣುತ್ತಿರಿ? ಇವುಗಳಿಗೆ ಕೊನೆ ಎಂಬುದಿಲ್ಲವೇ? ಸಮಾಜದಲ್ಲಿ ಹೆಣ್ಣಿಗೆ ಉಳಿಗಾಲವಿಲ್ಲವೇ?




- ಕೃತಿಕಾ ಕಣಿಯಾರು

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top