ಲೇಖಾ ಲೋಕ-45: ಅಪ್ರತಿಮ ಗಾಯಕ ಗುಡಿಬಂಡೆ ಬಿ.ಎಸ್. ರಾಮಾಚಾರ್

Upayuktha
0




ಸುಗಮ ಸಂಗೀತ, ತತ್ವಪದ ಗಾಯನ, ಲಾವಣಿ, ಕಾವ್ಯವಾಚನದಲ್ಲಿ ಅಪ್ರತಿಮ ಸಾಧನೆ ಮಾಡಿದ ಗಾಯಕ ಗುಡಿಬಂಡೆ ಬಿ ಎಸ್ ರಾಮಾಚಾರ್ ನಾಡಿಗೆ ದೊರೆತ ಅಪರೂಪದ ಕಲಾವಿದರು. ಇವರು ಚಿಕ್ಕಬಳ್ಳಾಪುರದ ಜಿಲ್ಲೆಯ ಗುಡಿಬಂಡೆಯಲ್ಲಿ ಶ್ರೀನಿವಾಸಾಚಾರ್ಯರು ಮತ್ತು ಸೀತಮ್ಮನವರ ವೈದಿಕ ಮತ್ತು ಕಲಾವಿದರ ಮನೆತನದಲ್ಲಿ ತಾ 14-9-1917 ರಂದು ಕಲೆಯ ಆರಾಧಕರಾಗಿ ಜನಿಸಿದರು.


ಇವರ ಪೋಷಕರೂ ಕಲಾವಿದರು, ಗಾಯಕರು. ಇವರ ಮುತ್ತಾತ ಕಂದಾಳ ವೆಂಕಟಾಚಾರ್ಯರು ಮಹಾ ಸಂಸ್ಕೃತ ಪಂಡಿತರಾಗಿದ್ದರು. ಬಾಲ್ಯದಲ್ಲಿ ರಾಮಾಚಾರ್ ಅವರು ತಮ್ಮ ಸಂಗೀತದ ಅಭ್ಯಾಸ ವಿದ್ವಾಂಸರಾದ ವೆಂಕೋಬಾಚಾರ್ಯರಲ್ಲಿ ಕಲಿತು, ನಂತರ ತಮ್ಮ ಉನ್ನತ ಸಂಗೀತ ಶಿಕ್ಷಣವನ್ನು ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ರಲ್ಲಿ ಪಡೆದರು.


ಬಿ ಎಸ್ ರಾಮಾಚಾರ್ ಅವರು ತಮ್ಮ ಶಿಕ್ಷಣ ವ್ಯವಸಾಯ ಕ್ಷೇತ್ರ ಕೃಷಿ ವಿಜ್ಞಾನ ಪದವಿ ಪಡೆದರೂ, ಆಯ್ಕೆ ಮಾಡಿಕೊಂಡಿದ್ದು ಗಾಯನ ಕ್ಷೇತ್ರ. ಸಾಧನೆ ಮಾಡಿ ಕನ್ನಡ ಭಾವಗೀತೆ, ಜನಪದಗೀತೆ, ಲಾವಣಿ, ರಗಳೆ, ಗಮಕ, ಕಾವ್ಯ ವಾಚನ ಕ್ಷೇತ್ರದಲ್ಲಿ ಅದ್ಭುತ ಯಶಸ್ಸು ಪಡೆದರು. 1938 ರಲ್ಲಿ ರಾಷ್ಟ್ರ ಕವಿ ಕುವೆಂಪುರವರ "ದೋಣಿ ಸಾಗಲಿ "ಕವನದ ಮೂಲಕ ಪ್ರಥಮವಾಗಿ ಇವರ ಕಾರ್ಯಕ್ರಮ ಶುರುವಾಯಿತು. ತದನಂತರ, ಯಶಸ್ಸಿನ ಮೆಟ್ಟಿಲು ಏರಿ ಪ್ರಸಿದ್ಧರಾದರು.


ವರಕವಿ ದ.ರಾ.ಬೇಂದ್ರೆಯವರು ಒಮ್ಮೆ ಚಿತ್ರದುರ್ಗಕ್ಕೆ ಆಗಮಿಸಿದಾಗ ರಾಮಾಚಾರ್ ಅವರು ಇವರ ಕಾರ್ಯಕ್ರಮಕ್ಕೆ ಪ್ರಾರ್ಥನಾ ಗೀತೆ ಹಾಡಿದಾಗ, ಇವರ ಕಂಠಮಾಧುರ್ಯಕ್ಕೆ ಸಂತೋಷಪಟ್ಟು ಕನ್ನಡ ಗೀತೆ ಹಾಡುವಂತೆ ಪ್ರೇರೇಪಿಸಿದರು. ಸಿದ್ದವನಹಳ್ಳಿ ಕೃಷ್ಣಶರ್ಮರೂ ಸಹ ಇವರ ಗಾಯನಕ್ಕೆ ಮೆಚ್ಚಿ ಪ್ರೋತ್ಸಾಹ ನೀಡಿದರು. ಗಮಕ ಕಲಾವಿದರಾಗಿದ್ದ ಭಾರತ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ಮತ್ತು ಕಳಲೆ ಕುಮಾರಾಚಾರ್  ಅವರ ಗಮಕ ವಾಚನ ಇವರ ಮೇಲೆ ಗಾಢವಾದ ಪ್ರಭಾವ ಬೀರಿ, ಇವರನ್ನು ಕಾವ್ಯ ಗಾಯನಕ್ಕೆ ಒಲವು ಮೂಡಲು ಪ್ರೇರೇಪಿಸಿತು. ವಿಜಯಪುರದ ಹತ್ತಿರ ತೊರವಿ ನರಸಿಂಹ ದೇವರ ಗುಡಿಯಲ್ಲಿ ಮತ್ತು ಧರ್ಮಸ್ಥಳದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ, ರಾಮಾಚಾರ್ ಅವರು "ಇಳಿದು ಬಾ ತಾಯಿ ಎಂಬ ಹಾಡನ್ನು ಹೇಳಲು ಮಳೆ ಸುರಿದು ತಂಪು ಮಾಡಿದ್ದು ಅದ್ಭುತ.

ಇವರ ಗಾಯನಕ್ಕೆ ಮೆಚ್ಚಿ, "ಋಷ್ಯಶೃಂಗ "ಎಂಬ ಬಿರುದನ್ನು ಪಡೆದರು. ಅನೇಕ ಊರುಗಳನ್ನು ಸಂಚಾರ ಮಾಡಿ, ಸ್ವಾತಂತ್ರ್ಯಗೀತೆ, ಲಾವಣಿ, ಸುಗಮ ಸಂಗೀತ ತತ್ವಪದ, ಜನಪದಗೀತೆ ಹಾಡಿ, ಜನರನ್ನು ಮುದಗೊಳಿಸಿದ ಸಾಧಕರು.


ಪಿಟೀಲು, ಮ್ಯಾಂಡೊಲಿನ್, ವಾದ್ಯ ನುಡಿಸುವುದರಲ್ಲಿ ಪರಿಣಿತರಾದರು. ಸರಕಾರದ ಕಾರ್ಯಕ್ರಮ ಗಳಾದ, ಕುಟುಂಬ ಯೋಜನೆ ಮತ್ತು ಉಳಿತಾಯ ಯೋಜನೆ ಕಾರ್ಯಕ್ರಮಗಳಿಗೆ ಪ್ರಚಾರ ಗೀತೆಗಳನ್ನೂ ಹಾಡಿದರು. ಮನೆ ಮನೆಗಳಲ್ಲಿ, ಸಂಗೀತ ಕಾಯ೯ಕ್ರಮಗಳನ್ನು ನಡೆಸಿಕೊಟ್ಟರು. ಅಮೇರಿಕನ್ ಎಂಬೆಸಿ (ಮುಂಬಯಿ), ಕಾಸರಗೋಡಿನ ಕಕ್ಕಿಲಾಯರ ಮನೆ, ಪುಣೆಯ ಓಣಂ ಸಂದರ್ಭ, ಕೋಲ್ಕತ್ತಾದ ಗೌಡಿಯ ಮಠ, ಸಂಗೀತ ನಿರ್ದೇಶಕರಾದ ಪಂಕಜ್ ಮಲ್ಲಿಕ್, ಭೂಪೇನ್ ಹಜಾರಿಕಾ ಅವರ ಸಮ್ಮುಖದಲ್ಲಿ ಬಂಗಾಳಿಗೀತೆ ಹಾಡಿ ಪ್ರಸಿದ್ಧರಾದರು. "ಬಿಸ್ರಾ" ಎಂಬ ಹೆಸರಿನಲ್ಲಿ ಕೊರವಂಜಿ ಹಾಸ್ಯಪತ್ರಿಕೆಗೆ ಸಹ ಅಣುಕು ಹಾಡುಗಳನ್ನು ಬರೆದು ಪ್ರಸಿದ್ಧರಾದರು.


ಬೇಂದ್ರೆಯವರ, ಪು ತಿ ನ  ಹರಿಹರನ ರಂಗಯ್ಯನ ರಗಳೆ ಹಾಡುಗಳನ್ನು ಹೇಳಿ ಜನರನ್ನು ರಂಜಿಸಿದರು. ಅನೇಕ ವೇದಿಕೆಯಲ್ಲಿ ಹಾಡಿ, ಶ್ರೋತೃಗಳನ್ನು ಮುದಗೊಳಿಸಿದರು. ಇವರಿಗೆ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೈವಾರದಲ್ಲಿ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದಲ್ಲಿ ಗೌರವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್ ಗೋಷ್ಠಿಯಲ್ಲಿ ಸನ್ಮಾನಿಸಲಾಯಿತು. ಗಮಕ ಕಲಾ ಸೇವೆಗೂ ಅಕಾಡೆಮಿ ಗೌರವ ಸಂದಿತು.


ಕನ್ನಡ ನಾಡಿಗೆ ಸಂಗೀತದ ರಸದೌತಣ ನೀಡಿ ಜನರನ್ನು ರಂಜಿಸಿದ ಗುಡಿಬಂಡೆ ಬಿ ಎಸ್ ರಾಮಾಚಾರ್ ಅವರು 11-12-2010 ರಂದು ನಿಧನ ಹೊಂದಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top