ಹಿಂದುತ್ವ ಮತ್ತು ಹಿಂದೂ ರಾಷ್ಟ್ರೀಯತೆ

Upayuktha
0


"ಕ್ರೈಸ್ತರನ್ನು ನೋಡಿ ಹೇಗೆ ಪ್ರತಿ ಭಾನುವಾರ ಚರ್ಚಿಗೆ ಕಡ್ಡಾಯವಾಗಿ ಹೋಗುತ್ತಾರೆಂದು., ಮುಸ್ಲಿಮರನ್ನು ನೋಡಿ ಕಲಿಯಿರಿ ಹೇಗೆ ಅವರು ದಿನಾ ಧಾರ್ಮಿಕ ಶಿಕ್ಷಣವನ್ನು ಮದರಸಕ್ಕೆ ಹೋಗಿ ಕಲಿಯುತ್ತಾರೆಂದು. ಆದರೆ ನಮ್ಮ ಹಿಂದೂಗಳು...?"


ಇದು ಸಾಮಾನ್ಯವಾಗಿ ಹಿಂದೂಗಳ ಮೇಲೆ ಕೆಲವು ಹಿಂದುಗಳೇ ಆಗಾಗ ಹಾಕುವ ಜನಪ್ರಿಯ ಅಪವಾದ.


ಮತ ಪ್ರಚಾರ ಅಥವಾ ಒಂದು ಮತದ ಬಗ್ಗೆ ಶಿಕ್ಷಣ ಕೊಡುವ ಸಂಸ್ಥೆಗಳನ್ನು ಸಾಮಾನ್ಯವಾಗಿ ಮಿಷನರಿಗಳು (missionary) ಎಂದು ಕರೆಯುತ್ತೇವೆ. ಮಿಷನರಿಗಳ ಕಾರ್ಯವೇ ತಾವು ನಂಬಿದ ಮತ ಅಥವಾ ಸಿದ್ಧಾಂತ ಪ್ರಚಾರ ಮತ್ತು ಮತಾಂತರ. ಮಿಷನರಿಗಳ ಕಾರ್ಯಸಿದ್ಧಾಂತವೇ ಮತ ಪ್ರಚಾರದ ಜೊತೆ ತಮ್ಮ ಮತಕ್ಕೆ, ಸಿದ್ಧಾಂತಕ್ಕೆ, ಅನಿಸಿಕೆಗೆ ಕನ್ವರ್ಟ್ ಮಾಡಲು ಪ್ರಯತ್ನ ಪಡುವುದು. ತಪ್ಪಲ್ಲ ಬಿಡಿ. ಭಾರತೀಯ ಮೂಲದ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಇಸ್ಕಾನ್, ರಾಮಕೃಷ್ಣ ಮಿಷನ್ ನಂತ ಹಲವು ಸಂಸ್ಥೆಗಳೂ ಇವೆ.


ಮಿಷನರಿ ಪದ್ಧತಿಯಲ್ಲಿ ಮತಾಂತರವಾದ ಜನರನ್ನು ಆ ಸಿದ್ಧಾಂತಕ್ಕೆ ಮಾತ್ರ ನಿರ್ಬಂಧಿಸಿ ಇಡಲು ಮತ್ತು ಆ ಜನರಿಗೆ ಆ ಸಿದ್ಧಾಂತದ ಬಗ್ಗೆ ಸದಾ ಜಾಗೃತಿ ಮೂಡಿಸಲು ಅವರ ನಂಬಿಕೆ  ಅಲುಗಾಡದಂತೆ ಹಿಡಿದಿಡಲು ದಿನವೊ, ವಾರಕ್ಕೊಂದು ಸಲವೋ ನಿಯಮಿತವಾಗಿ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಸೇರುವುದು, ಪ್ರಾರ್ಥನೆ ಮಾಡುವುದು ಮತ್ತು ಮತ ಶಿಕ್ಷಣ ಪಡೆಯುವುದು ಅವಶ್ಯವಾಗಿರುತ್ತದೆ.


ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹಲವಾರು ಮತ ಪಂಥಗಳಿವೆ, ತತ್ವ ಸಿದ್ಧಾಂತಗಳಿವೆ. ವಿಚಾರ ಸ್ವಾತಂತ್ರ್ಯ ಭಾರತೀಯ ಚಿಂತನೆಯ ಆತ್ಮ. ಯಾವುದೋ ಒಂದು ಧರ್ಮ ಗ್ರಂಥವನ್ನೊ, ತತ್ವವನ್ನೋ, ಸಿದ್ಧಾಂತವನ್ನೂ ಮುಂದೆ ಇಟ್ಟು ಇದನ್ನು ನೀನು ಒಪ್ಪಬೇಕು ಒಪ್ಪಿದರೆ ಮಾತ್ರ ನಿನಗೆ ಒಳಿತು ಎಂದು ಹಿಂದೂ ಧರ್ಮ ಹೇಳಲು ಸಾಧ್ಯವೇ ಇಲ್ಲ.ಇಲ್ಲಿ ಆಮಿಷದಿಂದ, ಬಲಾತ್ಕಾರದಿಂದ, ಅಮಾಯಕತೆಯ ದುರ್ಬಳಕೆಯಿಂದ, ಖಡ್ಗದ ಮೊನೆಯಿಂದ ಮತಾಂತರ ಮಾಡಿದ ಉದಾಹರಣೆಯೇ ಇಲ್ಲ. ಬದಲಾಗಿ ಸಿದ್ಧಾಂತಗಳ ನಡುವಿನ ವಾಕ್ಯಾರ್ಥಗಳಿಂದ, ಪ್ರಕರ ವಿದ್ವತ್ ಚರ್ಚೆಗಳಿಂದ ಮತಾಂತರವಾಗುತಿತ್ತು. ಸ್ವತಃ ಭಗವಂತನೇ ಗೀತೆಯಲ್ಲಿ ಎಲ್ಲವನ್ನೂ ಅರ್ಜುನನಿಗೆ ಉಪದೇಶಿಸಿ ಕೊನೆಗೆ 18 ನೇ ಅಧ್ಯಾಯದ ಶ್ಲೋಕ 63 ರಲ್ಲಿ ಹೇಳುತ್ತಾನೆ..


ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯತರಂ ಮಯಾ ।

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ॥63||


(ಹೀಗೆ ನಿನಗೆ ಗುಹ್ಯಕ್ಕಿಂತ ಗುಹ್ಯತರವಾದ ಜ್ಞಾನವನ್ನು ವಿವರಿಸಿದ್ದೇನೆ. ಇದನ್ನು ಕುರಿತು ಸಂಪೂರ್ಣವಾಗಿ ವಿಮರ್ಶಿಸಿ ನಿನ್ನ ಇಷ್ಟದಂತೆ ಮಾಡು.) 


ದೇವರ ಸಂದೇಶವನ್ನು ವಿಮರ್ಶೆ ಮಾಡಲು ಆ ದೇವರೇ ಅಧಿಕಾರ ಕೊಡುವುದಕ್ಕಿಂತ ಮಿಗಿಲಾದ ವಿಚಾರಶೀಲತೆ ಇದೆಯೇ? 


ಸನಾತನ ಸಂಸ್ಕೃತಿಯ ಯಾವೊಬ್ಬ ಗುರುವಾಗಲಿ, ಋಷಿಯಾಗಲಿ ಅವನೊಬ್ಬ ಸ್ವತಃ ಮಿಷನ್. ಮಿಷನರಿ ಅಲ್ಲ. ಅವನು ಇಡೀ ಸಮುದಾಯವನ್ನು ಬೆಳಗುವಂತೆ ಮಾಡುವ ಜೀವಂತ ಜ್ವಾಲೆ. ಹಾಗಿದ್ದರೂ ‘ಆನೋ ಭದ್ರಾ: ಕೃತವೋ ಯಂತು ವಿಶ್ವತಃ’ ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎನ್ನುವ ವೇದ ವಾಕ್ಯದಲ್ಲಿ ನಂಬಿಕೆ ಇಟ್ಟವರು. ಮಿಷನರಿ ಚಿಂತನೆಯಲ್ಲಿ ನಿಮಗೆ ಕೇವಲ ಕಲಿಸುವುದರಲ್ಲಿ ಮಾತ್ರ ಆಸಕ್ತಿ. ಕಲಿಯುವ ಯಾವ ಆಸಕ್ತಿಯೂ ಇಲ್ಲ.ಹಿಂದೂ ಚಿಂತನೆಗಳಿಗೆ ಜ್ಞಾನವನ್ನು ಕಲಿಸುವ ಆಸಕ್ತಿಗಿಂತ ಜ್ಞಾನವನ್ನು ಪಡೆಯುವ ಹಂಚುವ ಕಡೆ ಗಮನ. ಹಿಂದೂ ಧರ್ಮ ಸಿದ್ಧಾಂತಗಳಿಗೆ ಕನ್ವರ್ಟ್ ಮಾಡುವ ಬದಲು ಹೃದಯ ಪರಿವರ್ತನೆ ಕಡೆ ಗಮನ.


ನಮ್ಮ ಶಾಸ್ತ್ರಗಳ ಪ್ರಕಾರ ಇರುವ 33ಕೋಟಿ ದೇವತೆಗಳು ಅದರ ಜೊತೆಗೆ ಆಸಂಖ್ಯಾತ ಜನಪದ ದೈವದೇವರುಗಳು, ಹಲವು ಪಂಥಗಳು, ಒಂದಕ್ಕೊಂದು ವೈರುಧ್ಯ ಇರುವ ಹಲವು ಸಿದ್ಧಾಂತಗಳು, ವಿವಿಧ ಪೂಜಾ ವಿಧಾನಗಳು. ಇವುಗಳಲ್ಲಿ ನೀವು ಹಿಂದುವಾಗಿ ಯಾವುದನ್ನೂ ಅನುಸರಿಸಲು ಸ್ವತಂತ್ರ್ಯರು. ಹೀಗಿರುವಾಗ ಸಾರ್ವತ್ರಿಕವಾಗಿ ಯಾವುದೇ ಒಂದು ಧಾರ್ಮಿಕ ಆಚರಣೆಯ ಕಟ್ಟುಪಾಡಿನ ಅಡಿಯಲ್ಲಿ ಹಿಂದುಗಳನ್ನು ಒಟ್ಟು ಸೇರಿಸುವುದು ಅಸಾಧ್ಯ. ಬಹುತ್ವವೇ ಹಿಂದೂ ಧರ್ಮದ ಸೊಗಸು.


ಧರ್ಮಾಧಾರಿತ ಅತಿರೇಕದ ಹಿಂದುತ್ವಕ್ಕಿಂತ ಹಿಂದೂ ಎಂಬುದನ್ನು ಈ ನೆಲದ ಜೀವನ ಶೈಲಿಯೆಂದು ಪರಿಗಣಿಸಿ ಈ ನೆಲ, ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಗಳನ್ನು ಗೌರವಿಸುವ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆ ಮಾತ್ರ ನಮ್ಮನ್ನೆಲ್ಲ ಏಕ ಸೂತ್ರದಲ್ಲಿ ಬಂಧಿಸಬಹುದು.


ಮತಾಧಾರಿತವಾಗಿ ಅವರು ಕ್ರೈಸ್ತರೆ ಇರಲಿ ಮುಸ್ಲಿಂ ಮರೆ ಇರಲಿ ಹಿಂದೂ ರಾಷ್ಟ್ರೀಯತೆಯಲ್ಲಿ ನಮ್ಮ ಸಾಂಸ್ಕೃತಿಕ ಆಧ್ಯಾತ್ಮಿಕ ಪರಂಪರೆಯ ಜೊತೆ ಈ ನೆಲವನ್ನು ಗೌರವಿಸುವವರು ಎಲ್ಲರೂ ಹಿಂದೂಗಳೇ.



- ಸುರೇಶ್ ರಾಜ್ ಭಟ್ ಕೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top