ಸುರಪುರ (ಯಾದಗಿರಿ): ಜೀವನದಲ್ಲಿ ಆಸ್ತಿ, ದುಡ್ಡಿಗಿಂತ ಆರೋಗ್ಯವೇ ಮುಖ್ಯವಾಗಿದ್ದು ಪ್ರತಿಯೊಬ್ಬರು ಯೋಗ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು. ಆರೋಗ್ಯಕರ ಜೀವನಕ್ಕೆ ಯೋಗ ರಹದಾರಿಯಾಗಿದೆ ಎಂದು ಹಸನಾಪುರದ ತಕ್ಷಶಿಲಾ ಇಂಟರ್ ನ್ಯಾಷನಲ್ ಸ್ಕೂಲ್ನ ಅಧ್ಯಕ್ಷೆ ಅಂಬಿಕಾ ಯನಗುಂಟಿ ಹೇಳಿದರು.
ದೈನಂದಿನ ಚಟುವಟಿಕೆ ಆಗಲಿ ಮನಸ್ಸು ಮತ್ತು ಶರೀರವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕಾದರೆ ಪ್ರತಿದಿನ ಯೋಗ ಮಾಡಬೇಕು. ಯೋಗ ಕೇವಲ ಒಂದು ದಿನದ ಆಚರಣೆಯಾಗದೇ ದೈನಂದಿನ ಚಟುವಟಿಕೆಯಾಗಬೇಕು. ಆಧುನಿಕ ಜೀವನಶೈಲಿಗೆ, ಬೌದ್ಧಿಕ, ಶಾರೀರಿಕ ಒತ್ತಡ ನಿವಾರಣೆಗೆ ಯೋಗ ಅವಶ್ಯ. ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕೂಡ ಅವರು ಹೇಳಿದರು.
ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಬಣಗಾರ ಫೌಂಡೇಷನ್ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ, ಯೋಗ ಸಾಧಕರಿಗೆ ಸನ್ಮಾನ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆರೋಗ್ಯ ಸಂಪತ್ತಿಗಿಂತ ಮಿಗಿಲಾದದ್ದು ಇನ್ನೊಂದಿಲ್ಲ. ಜೀವನದಲ್ಲಿ ಆರೋಗ್ಯ ಇಲ್ಲದೆ ಹೋದರೆ ಏನನ್ನೂ ಸಾಧಿಸುವುದು ಅಸಾಧ್ಯ. ಹೀಗಾಗಿ ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು. ಯೋಗಕ್ಕೆ ಖರ್ಚಿಲ್ಲ ಸಮಯ ಮಾತ್ರ ನೀಡಬೇಕು. ನಮ್ಮ ಮನಸ್ಸು, ಬುದ್ದಿ ಹತೋಟಿಗೆ ತರುವುದೇ ಯೋಗ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಯೋಗ ಸಹಾಯ ಮಾಡುತ್ತದೆ ಎಂದರು.
ಆಫ್ ಲಿವಿಂಗ್ನ ಪ್ರಮುಖರಾದ ಶಿಲ್ಪಾ ಅವಂಟಿ ಮಾತನಾಡಿ, ಯೋಗ ಎಂದರೆ ದೇಹ, ಉಸಿರು, ಮನಸ್ಸನ್ನು ಒಂದುಗೂಡಿಸಿ ಮಾಡುವುದು. ಯೋಗ ನಮ್ಮ ದಿನನಿತ್ಯದ ಚಟುವಟಿಕೆಯಾಗಬೇಕು. ಮನಸ್ಸು ಒಂದು ಗಾಳಿಪಟ, ಉಸಿರು ಎನ್ನುವುದು ಸೂತ್ರ. ಮನಸ್ಸಿನ ಎಲ್ಲ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಉಸಿರಾಟ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಮನಸ್ಸನ್ನು ನಮ್ಮ ಉಸಿರಾದ ಮೂಲಕ ಹತೋಟಿಗೆ ತರಬೇಕು. ಜೀವನದ ಪ್ರತಿಕ್ಷಣ ಆರೋಗ್ಯವಾಗಿ, ಆನಂದ ವಾಗಿರಲು ಕಲಿತುಕೊಳ್ಳಲು ಪ್ರಯತ್ನಿಸ ಬೇಕು ಎಂದು ಸಲಹೆ ನೀಡಿದರು.
ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಬಣಗಾರ ಫೌಂಡೇಷನ್ ಅನೇಕ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ ಎಂದರು. ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ರಾಗಿಣಿ ಅಕ್ಕನವರು ಮಾತನಾಡಿ, ಯೋಗ ಸಂಸ್ಕೃತ ಶಬ್ದವಾಗಿದ್ದು ಜೋಡಣೆ ಎಂಬುದು ಅರ್ಥ. ಮನುಷ್ಯನ ಜೋಡಣೆ ಪರಮಾತ್ಮನ ಜತೆಗೆ, ನಮ್ಮ ಉಸಿರಿನ ಜತೆಗೆ, ಇಂದ್ರೀಯಗಳ ಜೊತೆಗೆ. ಜೀವನದಲ್ಲಿ ಯೋಗ ನಿರಂತರವಾಗಿರಬೇಕು. ಏಕತೆ, ಏಕಾಗ್ರತೆಯಿಂದ ನಮ್ಮ ಜೀವನ ಪವಿತ್ರವಾಗುತ್ತದೆ ಎಂದರು. ಸಾಹಿತಿ ಪಾರ್ವತಿ ಬೂದೂರು, ಆನಂದ ಬಾರಿಗಿಡದ ಹುಣಸಗಿ ಮಾತನಾಡಿದರು.
ಪ್ರಪಂಚಕ್ಕೆ ಯೋಗದ ಮಹತ್ವ ತಿಳಿಸಿಕೊಟ್ಟ ಭಾರತದ ಕೊಡುಗೆ ಅದ್ಭುತ. ಯೋಗವು ಆರೋಗ್ಯಕರ ಜೀವನದ ಕಲೆ ಮತ್ತು ವಿಜ್ಞಾನವಾಗಿದೆ. ದೈಹಿಕ, ಮಾನಸಿಕ ಸದೃಢತೆಗೆ ಯೋಗ ಸಹಕಾರಿ. ನಿಯಮಿತ ಯೋಗ ಮಾಡುವುದರ ಮೂಲಕ ಆರೋಗ್ಯ ಸದೃಢತೆ ಹಾಗೂ ಚೈತನ್ಯಯುಕ್ತ ಬದುಕು ನಡೆಸಬಹುದಾಗಿದೆ ಎಂದು ಅಧ್ಯಕ್ಷತೆವಹಿಸಿದ್ದ- ಹಿರಿಯ ನ್ಯಾಯವಾದಿ ಜಯಲಲಿತಾ ಪಾಟೀಲ ಹೇಳಿದರು.
ಸಾನಿಧ್ಯ ವಹಿಸಿದ್ದ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಸಂದೇಶ ನೀಡಿದರು. ಪ್ರಾಚಾರ್ಯ ಸೈದಾಬಿ ಜಮಾದಾರ, ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ, ಸಾಯಬಣ್ಣ ಪುರ್ಲೆ, ಗಂಗಾಧರ ರುಮಾಲ, ಬಸವರಾಜ ಪಾಟೀಲ, ಚಂದ್ರಕಾಂತ ಮಾರ್ಗೆಲ್, ನಿಂಗಪ್ಪನಾಯಕ. ಬಣಗಾರ ಫೌಂಡೇಷನ್ ಅಧ್ಯಕ್ಷ ವಸಂತಕುಮಾರ ಬಣಗಾರ ವೇದಿಕೆಯಲ್ಲಿದ್ದರು.
ಬಾಲ ಪತ್ರಿಭೆ ಸಾನ್ವಿ ಜೋಗುಂಡಬಾವಿ ಭರತನಾಟ್ಯ ಮತ್ತು ಸಿದ್ದು ನಂಬಾ ಯೋಗ ಪ್ರದರ್ಶನ ನೀಡಿದರು. ಯೋಗ ಸಾಧಕ ವೈ. ಪ್ರಭಂಜನ್ ಜಹಗೀರದಾರ್, ಲಕ್ಷ್ಮೀಕಾಂತ ಶಿರವಾಳ ರಂಗಂಪೇಟೆ, ಈಶ್ವರಯ್ಯ ರುಮಾಲಮಠ ಲಕ್ಷ್ಮೀಪುರ, ಹಣಮಂತ ಪೂಜಾರಿ ತಿಮ್ಮಾಪುರ, ಅನಿತಾ ಪಿ. ಶಹಾಪುರಕರ್, ಸಿದ್ದಮ್ಮ ಎಂ.ಶೆಟಿಗೇರಾ, ಸಿದ್ದು ಬಿ.ನಂಬಾ ಹಸನಾಪುರ ಅವರಿಗೆ ಸನ್ಮಾನಿಸಲಾಯಿತು. ಶರಣಮ್ಮ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಹೆಚ್.ರಾಠೋಡ್ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿ ವಂದಿಸಿದರು.
ವರದಿ: ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ